Saturday, December 8, 2012

ಜಾತಿ..

'ಜಾತಿವಾದ' ದ ಕುರಿತಾಗಿ  ಮಾತನಾಡುವುದೇ ಆದರೆ ನಾನು ನಾಳೆ ಸೂರ್ಯೋದಯ  ನೋಡದಿದ್ದರೂ  ಪರವಾಗಿಲ್ಲ ಅನ್ನುವ ತ್ಯಾಗ  ಮನೋಭಾವ  ಬೇಕು. ಯಾಕೆಂದರೆ  ಜಾತಿ ಕುರಿತಾದ ಮಾತು-ವಾದ -ಸಂವಾದ ಇಂದು ಕತ್ತಿ ಗುಂಡುಗಳ ಮೂಲಕವೂ ಉತ್ತರಿಸುವ  ಮಟ್ಟಕ್ಕೆ ಬೆಳೆದು ನಿಂತಿದೆ. ನಾಳೆ ತಾನು ಹೇಣವಾದರು ಚಿಂತೆಯಿಲ್ಲವೆನ್ನುವವನು ಮಾತ್ರ ಜಾತಿ ಪದ್ಧತಿಯ ಕುರಿತಾಗಿ ಘಂಟಾಘೋಷವಾಗಿ ವಿರೋಧಿಸಬಲ್ಲ;ತನ್ನ ಲೇಖನಿಯಿಂದ ಶತಮಾನಗಳಿಂದ ಮಾನವ ಅತಿರೇಕದಿಂದ ಸಂಗ್ರಹವಾಗಿರುವ ದುಃಖವನ್ನು ಅಕ್ಷರ ಮುತ್ತುಗಳಿಂದ ಚಿತ್ರಿಸಬಲ್ಲ.ಮಾನವ ಇತಿಹಾಸದುದ್ದಕ್ಕೂ ಜಾತಿ-ವರ್ಗ-ಪಂಗಡ  ಮೊದಲಾದ ಪದ್ಧತಿಗಳು  ಹೇಯವಾದುದ್ದೆಂದು ಜಗತಿನಾದ್ಯಂತ  ಹಲವಾರು ದಾರ್ಶನಿಕರು  ಹೇಳಿ ಹೋಗಿದ್ದಾರೆ; ಸಮಾಜವನ್ನು ತಿದ್ದಲು  ಪ್ರಯತ್ನಿಸಿದ್ದಾರೆ; ಆದರು ಫಲ ಕೊಟ್ಟಿಲ್ಲ ಅಂತ ಇವತ್ತಿನ ಧಾರ್ಮಿಕ,ರಾಜಕೀಯ  ಹಾಗು ಸಾಮಾಜಿಕ ವ್ಯವಸ್ಥೆಯನ್ನು ಕೂಲಂಕಸವಾಗಿ  ಅಭ್ಯಸಿಸಿದರೆ ತಿಳಿಯುತ್ತದೆ.  ಹೀಗಿರುವಾಗ ಪ್ರಾಣಕ್ಕೂ  ಸಂಚಕಾರ ತರಬಲ್ಲಂತ  ವಿಷಯದ ಕುರಿತಾಗಿ ಬರೆಯುದೇಕೆ ? ಮಹಾನ್  ವ್ಯಕ್ತಿಗಳಿಂದಲೇ  ಸಾಧ್ಯವಾಗದ ಕೆಲಸವನ್ನು  ನಾನು ಮಾಡುತ್ತೇನೆ ಎಂಬ ಗರ್ವವಾದರು ಯಾಕೆ ?

ಜೀವಸಂಕುಲವನ್ನು  ಗಮನಿಸಿದರೆ  ಕೆಲವೊಂದು  ವಿಷಯಗಳು  ಜೀವಿ  ತನ್ನ ಹುಟ್ಟುಗುಣವನ್ನಾಗಿ ಪಡೆದಿರುತ್ತದೆ. ಉದಾಹರಣೆಗೆ  ಹಕ್ಕಿಗೆ ಗೂಡು  ಕಟ್ಟಬೇಕು ಎಂದು ಯಾರು ತಾನೆ ಕಲಿಸಿರುತ್ತಾರೆ ? ತಾನೆ ಗೂಡು ಕಟ್ಟಿ  ಮರಿಗಳನ್ನು ದೊಡ್ಡದು ಮಾಡಿ  ಜೀವನ ಯಾತ್ರೆ ಮುಂದುವರಿಸುತ್ತದೆ. ಇದು ಹಕ್ಕಿ ಜಾತಿಗೆ ಹುಟ್ಟುಗುಣ. ನಮ್ಮ ಹೆಣ್ಣು ಮಕ್ಕಳು ಕೂಡ ಹಾಗೆ.! ಯಾವಾಗ ತಾವು ತಾಯಿಯಾಗುತ್ತಾರೋ  ಇದಕಿದ್ದಹಾಗೆ  ಅವರಿಗೆ ತಮ್ಮ ಮಗುವಿನ ಮೇಲೆ ತಮ್ಮ ಪ್ರಾಣಕ್ಕಿಂತಲೂ ಅತೀವ  ಪ್ರೀತಿ ಬೆಳೆದು ನಿಲ್ಲುತ್ತದೆ. ಇದು ಮಾನವ ಹೆಣ್ಣು ಜನ್ಮದ ಹುಟ್ಟುಗುಣ. ಅಂತೆಯೇ ತಾನು ಸ್ವತಂತ್ರ; ತಾನು ತನ್ನ ವಿಚಾರವವನ್ನು-ವಿಷಾದವನ್ನು ವ್ಯಕ್ತಪಡಿಸಬಲ್ಲೆ ಅನ್ನುವ ತವಕ, ಆಕಾಂಕ್ಷೆ  ಮಾನವ ಸಹಜವಾದ ಹುಟ್ಟುಗುಣ. ಕೆಲವಾರು ಸ್ವಯಂ-ಪ್ರಯತ್ನ ಬಲದಿಂದ ಈ ಹುಟ್ಟು  ಗುಣ  ಅಡಗಿಸಿಕೊಂಡು ಬದುಕು ಹೇಗಾದರೂ ಸಾಗಲಿ, ಒಟ್ಟಾರೆ ಮುಂದುವರಿದರೆ ಸಾಕು ಎಂಬ ವಾದಕ್ಕೆ ಮರುಳಾಗಿ ಬದುಕುತ್ತಾರೆ. ಆದರೆ  ಇನ್ನು ಕೆಲವರು ನೋವಿನ ಫಲವಾಗಿಯೋ, ಅಥವಾ  ಮಾನವ ಸಹಜಗುಣವನ್ನು  ಯಾಕಾದರೂ ಅಡಗಿಸಿ ಬದುಕೇಂಬ ವೈಚಾರಿಕ ಹಿನ್ನಲೆಯಲ್ಲಿಯೋ ತಮ್ಮ ವಾದವನ್ನು, ತಮ್ಮ ನಂಬಿಕೆಯನ್ನು  ಉದಾರಮನೋಭಾವದಿಂದ  ಸರ್ವರ ಸಮ್ಮುಖದಲ್ಲಿ ನಿವೇದಿಸುತ್ತಾರೆ.  ಹಾಗಾಗಿ  ತನ್ನ ವಿಚಾರವನ್ನು  ವ್ಯಕ್ತ ಪಡಿಸುವುದು ಹಾಗೂ  ಸರ್ವರ ವಿಚಾರಗಳ ಕುರಿತಾಗಿ ಒಂದು ಒಲವು ತೋರುವುದು ತಪ್ಪಲ್ಲ; ಅದು ಕರ್ತವ್ಯ;ಅಂತವರೇ ಈ  ಸಮಾಜವನ್ನು ಕೊಳೆತುನಿಂತ ನೀರಿನ ಹೊಂಡವಾಗಿರಿಸದೆ  ಸ್ವಚ್ಚವಾದ  ಹರಿಯುವ ನೀರಿನ  ನದಿಯನ್ನಾಗಿಸಿದ್ದಾರೆ. ನಾನು ನನ್ನ ವಿಚಾರವನ್ನು  ತಮ್ಮೆಲ್ಲರ  ವಿಚಾರದ ಸಾಲಿಗೆ ಸೇರಿಸಿ 'ನನ್ನದೊಂದು  ಮಾತು' ಎಂದು ಹೇಳಿಕೊಳ್ಳಲು ಸರಿದಿಯಲ್ಲಿ  ನಿಂತಿದ್ದೇನೆ.ತಮ್ಮೆಲ್ಲರ ಹಾಗೆ ಸ್ವಾಸ್ಥ್ಯದಿಂದ  ಕೂಡಿದ  ಪವಿತ್ರವಾದ ಸಮಾಜವನ್ನು, ಹಸನ್ಮುಖಿಯಾಗಿರುವ ಜನರನ್ನು ಕಾಣುವುದೇ ನನ್ನ ಗುರಿ.

ಇವತ್ತು ಜಾತಿವಾದ ಎನ್ನುವುದು ಚಳುವಳಿಯಲ್ಲ; ಅದು ಯಾರ ವಿರುದ್ಧವು ಹೋರಾಟವಲ್ಲ. ಇದು ಕೇವಲ ನಮ್ಮ ಮನಸ್ಸಿಗೆ, ನಮ್ಮ ಹೃದಯಕ್ಕೆ  ನಾವೇ 'ಜಾತಿ ಒಂದು ತಪ್ಪು ಕಲ್ಪನೆ' ಎಂದು ಅರಿಕೆಯನ್ನುಂಟು  ಮಾಡಿಕೊಳ್ಳುವುದಾಗಿದೆ. ನಾವು ಈ ವಿಷಯದಲ್ಲಿ ತಪ್ಪಿ ಹೋಗುವುದೇ  ಜಾತಿ ಕುರಿತಾದ ವ್ಯವಸ್ಥೆಗೆ ಯಾರೋ ಕಾರಣವೆಂದು ಭಾವಿಸಿ. ಎಷ್ಟೋ ಸಾರಿ, ಜಾತಿವಾದದ ವ್ಯವಸ್ಥೆಯ  ಕುರಿತಾದ ಮಾತುಗಳಲ್ಲಿ ಬ್ರಾಹ್ಮಣರೇ  ಕಾರಣವೆಂದು  ಹೇಳಿ ಬ್ರಾಹ್ಮಣ ಜಾತಿಯನ್ನು ಅಪಹಾಸ್ಯವೋ, ಕೋಪದಿಂದಲೋ  ಕಾಣುವುದನ್ನು ಗಮನಿಸಿದ್ದೇನೆ. ಇನ್ನೂ  ಕೆಲವೊಮ್ಮೆ ಬ್ರಾಹ್ಮಣ ಜಾತಿಗೆ ಸೇರಿದವರು, ತಮ್ಮ ವಿರುದ್ಧ  ಒಂದು ವಾದ ಸುರುವಾಗಿದೆ, ಅಪಹಾಸ್ಯಕ್ಕೆ ಗುರಿ ಮಾಡುತಿದ್ದಾರೆ  ಅಂದುಕೊಂಡುದ್ದುಂಟು.

ಇನ್ನು ಕೇಳವರ್ಗದವರೆಂದು ಕರೆಸಿಕೊಂಡವರು ತಮ್ಮ ನೋವಿನ ಕತೆಗೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಅರ್ಧಶತಮಾನವೇ ಕಳೆದರು ತಾವು ಇನ್ನು ಇಂಥ  ವಾದ-ಸಂವಾದದಲ್ಲಿಯೇ ಇದ್ದೇವೆ ಎಂದು ಜಾತಿವಾದದ  ವಾದ-ವಿವಾದಗಳಿಗೆ  ತಮ್ಮದು ಒಂದು ಮಾತು ಇರಲಿ ಎಂದು ಮುಂದೆ ಬಂದವರನ್ನು  ನೋಡಿದ್ದೇನೆ. ಅದೇ ಜಾತಿವಾದ  ಮೀಸಲಾತಿಯ  ಕುರಿತಾಗಿ ಕಾವು ಏರಿ ನಿಂತಾಗ   ತಮ್ಮಗೆ ಸರ್ಕಾರ ನೀಡುವ  ಕಿಂಚ್ಚಿತ್  ಸಹಾಯಕ್ಕೆ ಬೆಂಕಿ ಇಡುತ್ತಿದ್ದಾರಲ್ಲ  ಎಂದು ನೊಂದುಕೊಂಡವರು ಇದ್ದಾರೆ.
 
ಬರೆಯುತ್ತಿರುವ, ಹುಟ್ಟುಗುಣವನ್ನು  ಎತ್ತಿ ಹಿಡಿಯುತ್ತೇನೆ ಎಂದು ಮುಂದೆ ಬಂದಿರುವ ಈ  ಲೇಖಕನಿಗೂ ಒಂದು ಜಾತಿಯಿಲ್ಲವೇ? ಜಾತಿಯಿದ್ದರೆ ಇವನಾವ ನಡು ಜಾತಿಯವನು ? ಈ  ಕಡೆ ಬ್ರಾಹ್ಮಣರ  ಪರವಾಗಿಯೂ ಇಲ್ಲ ಅತ್ತ ಕೆಳವರ್ಗದವರ  ಪರವಾಗಿಯೂ ಇಲ್ಲದಂತೆ ತೋರಿಸಿಕೊಳ್ಳುತ್ತಾನೆ ಯಾಕೆ ಎಂದು ಪ್ರಶ್ನಿಸಿಕೊಂಡರೆ  ತಪ್ಪೇನು ಇಲ್ಲ. ಆದರೆ ಇವತ್ತು ನಾನು ಇಂಜಿನಿಯರ್ ಆಗಿ ಬರಲು ಸೀಟ್  ಗಳಿಸಿದ್ದು  ಜಾತಿ ಆಧಾರದ ಮೇಲೆ ಎನ್ನುವ ನೋವು ನನಗು ಇದೆ. ಹೀಗಿರುವಾಗ ಜಾತಿಯ ಕುರಿತಾಗಿ ತತ್ವಜ್ಞಾನಿಯಂತೆ ಲೇಖನವೊಂದನ್ನು ಬರೆದ ಮಾತ್ರಕ್ಕೆ  ಜಾತಿಯ ಕುರಿತಾಗಿ ನಾನು ನೀಡುವ  ವಾದ ಸರಣಿಗೆ  ಬೆಲೆ ಬಂದೀತೆ ? ತಪ್ಪು ಅರ್ಥವಾಗಿದೆ- ಆದರೆ  ಒಂದು ಮಾತು: ಅದಕ್ಕೂ  ಒಂದು ವಿಚಾರವನ್ನು ತಲೆಗೆ  ಹಾಕಿಕೊಂಡಿದ್ದೇನೆ. ಸ್ವಾಮಿಗಳಾಗಿ  ಇರುವ ಮಂದಿ  ಕಾಮ  ಒಂದು ತಪ್ಪು ಎಂದು ಹೇಳುತ್ತಾರೆ.ಆದರೆ ಅವರು ಕಾಮದಿಂದಲೇ ಹುಟ್ಟಿದ್ದಲ್ಲವೇ? ಹುಟ್ಟಿದ, ಇಲ್ಲಿಯತನಕದ ವಿಷಯ ಹೇಗೆ ಇದ್ದರು ಮುಂದಿನ ದಿನಗಳು ಹೇಗೆ ಅನ್ನುವುದನ್ನು ಮಾತ್ರ ನಿರ್ಣಾಯಿಸುವುದು ಸರಿಯನ್ನಿಸುತ್ತದೆ. ಹಾಗಲ್ಲದೆ ಹೋದರೆ ಈ  ಭೂಮಿಯ ಮೇಲೆ ಹುಟ್ಟಿದ ಯಾವ  ವ್ಯಕ್ತಿಯು ಸ್ವಾಮಿಯಾಗಲು  ಅರ್ಹತೆ ಪಡೆಯಲಾರ. ಹಾಗಾಗಿ  ನನ್ನ ವಿಚಾರವು ಮುಂದಿನ  ದಿನಗಳ ಕುರಿತಾಗಿದೆ ಹೊರತು ಇತಿಹಾಸದ ವಿಮರ್ಶೆಯಲ್ಲ; ಇತಿಹಾಸದ ಶುದ್ಧಿಕರಣವು ಅಲ್ಲ.

ಜಾತಿವಾದ ಜಟಿಲವಾಗಿ  ಎಂದೆಂದೂ  ಬಿಡಿಸಲಾರದ ಗಂಟಾಗಿ ಉಳಿಯುವುದಕ್ಕೆ ಮೂಲ ಕಾರಣ ದೇವರನ್ನು ಜಾತಿ ವ್ಯವಸ್ತೆಯಲ್ಲಿ  ಬಂಧಿಸಿರುವುದು. ದೇವರು ಎನ್ನುವುದು  ಮನುಷ್ಯನ ಮನಸ್ಥಿತಿಗೆ  ಸಂಬಂಧಿಸಿದ  ವಿಚಾರ . ಇಂದು ನಾವು ದೇವರನ್ನು ನಾವು ಮೂರ್ತಿಗಳ  ರೂಪದಲ್ಲಿ  ನೋಡುತ್ತೆವೆಯಾದರು  ದೇವರು ಹೀಗೆ ಎಂದು ಹೇಳಲು ಯಾರಿಂದಲೂ  ಸಾಧ್ಯವಿಲ್ಲ. ಕೊನೆಗೂ, ದೇವರು  ಎನ್ನುವುದು ಯಾವುದೋ  ಹೆಸರಲ್ಲಿ, ಯಾವುದೋ  ಮೂರ್ತಿಯ ರೂಪದಲ್ಲಿ ನಮ್ಮ ಬದುಕಿನ ನಂಬಿಕೆಯಲ್ಲಿ ಒಂದಾಗಿ  ಭಾವನೆಯಲ್ಲಿ ವ್ಯಕ್ತವಾಗುತ್ತ  ಕಂಡರೂ ಕಾಣದ  ಹಾಗೆ ಇದ್ದಾನೆ.ಭಾವನತ್ಮಕವಾಗಿರುವ ದೇವರ ಜತೆ ಜಾತಿಯು ಸೇರಿದ್ದರಿಂದ ಅದೊಂದು ಕೇವಲ  ಒಂದು ಮರೆಯುವಂತ ಪದ್ಧತಿಯಾಗಿರದೆ  ಭಾವನೆಯ ಮೇಲೆ ನಡೆಯುವಷ್ಟು  ಸಲೀಸಾದ ದಾರಿ ಕಂಡುಕೊಂಡಿದೆ. ಹೀಗಾಗಿ  ಜಾತಿ ವ್ಯವಸ್ಥೆಯ ಬೇರುಗಳು  ದೇವರ ಹೆಸರಿನ ಮೂಲಕ ಸರ್ವರ ಹೃದಯದಲ್ಲಿ ಅಲಿಂಗನ ಮಾಡಿದೆ. ಜಾತಿ ಕಿತ್ತೊಗೆಯಲು ಭಾವನೆಗಳ ಮೇಲೆ- ವೈಚಾರಿಕವಾದ  ಹಿನ್ನಲೆ, ಭವಿಷ್ಯ ಕುರಿತಾದ ವಿಶ್ಲೇಷಣೆ  ಇತ್ಯಾದಿಗಳಿಂದ  ತಪ್ಪು ಅರಿಯುವಂತೆ ಮಾಡಬೇಕು.

ಜಾತಿ ಮತ್ತು ದೇವರಿಗೂ ಯಾವ ಸಂಬಂಧ  ಅನ್ನುತ್ತಿರಾ ? ನನ್ನ ನಂಬಿಕೆ ಹೀಗಿದೆ: ಹಿಂದೊಂದು ಕಾಲದಲ್ಲಿ ಮನುಷ್ಯರು ಒಂದೊಂದು ಕಡೆ ಸಂಘಟಿತರಾಗಿ  ನೆಲೆ ನಿಲ್ಲಲು ಆರಂಭಿಸಿದರು. ಒಂದೇ ಕಡೆ ನೆಲೆ ನಿಲ್ಲುವ ಕಾರಣದಿಂದ  ಆಹಾರ ಇತ್ಯಾದಿಗಳು ತಾವೇ ಬೆಳೆಸಿಕೊಳ್ಳಬೇಕಾದ  ಅನಿವಾರ್ಯತೆ ಬಂದಿರಬೇಕು.ಜನ ಒಂದೊಂದು ಕೆಲಸದಲ್ಲಿ ಮುಂದುವರೆದರು. ನಾಗರಿಕತೆಗಳು  ಬೆಳೆದವು. ಜನಸಂಖ್ಯೆ  ಬೆಳೆಯಿತು. ತಾನು ದೊಡ್ಡವ ಅನ್ನುವ ವಿಚಾರ ಬೆಳೆದು, ಅಥವಾ ಸಮರ್ಥನೊಬ್ಬ ಉಳಿದವರನ್ನು ಕಾಡು ಪ್ರಾಣಿಗಳಿಂದಲೋ ಅಥವಾ ಇನ್ನೊಂದು  ನೆರೆಯ ನಾಗರಿಕತೆಯ ದಾಳಿಯಿಂದಲೋ ರಕ್ಷಿಸಬೇಕಾಗಿ ಬಂದ ಕಾರಣಗಳಿಂದಾಗಿ  'ರಾಜ' ಎನ್ನುವ ಪರಿಕಲ್ಪನೆ ಬೆಳೆದಿರಬೇಕು. ದಿನದಿಂದ ದಿನಕ್ಕೆ  ವೈಚಾರಿಕ ನಿಲುವುಗಳಲ್ಲೂ ಬದಲಾವಣೆ ಬರಲಾರಂಭಿಸಿತು. ಉತ್ತರವೇ ಕಾಣದ ಪ್ರಾಕೃತಿಕ  ಸನ್ನಿವೇಶಗಳಾದ  ಗುಡುಗು-ಸಿಡಿಲು-ಮಳೆ-ರಾತ್ರಿ-ಹಗಲು ದೇವರು ಎಂದು ಕರೆದರು. ಭಾಷೆ ಹುಟ್ಟಿತ್ತು. ಅಕ್ಷರ ಹುಟ್ಟಿತ್ತು.ವಿಚಾರಗಳ ಬರವಣಿಗೆ,ಗಣಿತ  ಎಲ್ಲವು ಮುಂದೆ ಬೆಳೆದು ಬಂತು. ದುಡಿಯುವ ಜನ ತಮ್ಮದೇ ಕ್ಷೇತ್ರದಲ್ಲಿ ಪರಿಣಿತಿ ಹೊಂದುದ್ದರಿಂದ ಮಡಿಕೆ ಮಾಡಿದವ ಕುಂಬರನಾದ;ಮರಗೆಲಸದವ  ಆಚಾರಿಯಾದ. ದೇವರಿಗೆ ಪೂಜೆ ಒಪ್ಪಿಸುವವರು  ಬ್ರಾಹ್ಮಣರಾದರು. ಹೀಗೆ ಮೂಲದಲ್ಲಿ ಎಲ್ಲವು ಒಂದೇ ಇತ್ತು. ಆದರೆ ವಿಕಾಸ ಹೊಂದುತ್ತಾ ಬಂದ ಮನುಷ್ಯ ಜನಾಂಗ -ಧರ್ಮ-ಅಧರ್ಮ, ನ್ಯಾಯ, ಅನ್ಯಾಯ ಮೊದಲಾದ ವೈಚಾರಿಕ ಪರಿಕಲ್ಪನೆಗಳು  ವೇದಗಳೆಂದು  ಬರೆಯಲ್ಪಟ್ಟವು. ಹೀಗೆ ಮನುಷ್ಯ ಬರೆಯುವಷ್ಟು, ವಿಚಾರವನ್ನು   ಸಂವಹನ ಗಳಿಸುವಷ್ಟು  ಬೆಳೆದ ಮೇಲೆ ಮೇಲು-ಕೀಳು ಎಂಬ ಭಾವನೆಗಳು  ಬರಲಾರಂಭಿಸಿರಬೇಕು. ಮೊದಲು ವೃತಿಗತವಾಗಿದ್ದ ಬದುಕಿನ ಮೇಲು-ಕೀಳು  ನಂತರ ವಂಶವಾಹಿನಿಯಲ್ಲೂ ಕಾಣುವಂತೆ  ಬರಹಗಳು ಬೆಳೆದುಬಂದವು. ದೇವರಿಗೆ ಹತ್ತಿರವಾಗಿ ಪೂಜೆಯಲ್ಲೇ ಇರುತ್ತಿದ್ದ ಅವರು ತಮ್ಮ ವೃತ್ತಿಯನ್ನು  ವೈಭವಿಕರಿಸಿ, ಉಳಿದವರಿಗೆ ಹೆದರಿಕೆ ಹುಟ್ಟುವಂತೆ ಬರೆದು(ಜಾತಿ ವರ್ಗಗಳ ಕುರಿತಾಗಿ),ಕಾಣದ  ಸ್ವರ್ಗ ನರಕಗಳನ್ನು  ಸೃಷ್ಟಿ ಮಾಡಿ,  ಅಸಂಖ್ಯಾತ ದೇವರುಗಳನ್ನು  ಸೃಷ್ಟಿಸಿ ತಮ್ಮ ವಾದವನ್ನು-ಬರಹವನ್ನು ಒಪ್ಪುವಂತೆ ಮಾಡಿದರು. ದೇವರ ಹತ್ತಿರವಿರುವ ಜನರ ಮಾತು, ದೇವರು ಎಂಬ ಶಕ್ತಿಯ ಕುರಿತಾಗಿ ಸಹಜ ಭಾವನಾತ್ಮಕ ಸಂವೇದನೆ  ಹೊಂದಿದ ಪರಿಣಾಮವಾಗಿ ವೇದವಾಕ್ಯವೆಂದು ನಂಬಿದ ಉಳಿದ ವರ್ಗದವರು ಶತಮಾನಗಳ  ಅಂತಹ  ವ್ಯವಸ್ಥೆಯಲ್ಲೇ ಬೆಳೆಯಬೇಕಾಗಿಬಂತು. ಮುಂದಿನ ದಿನಗಳಲ್ಲಿ  ಸಾಧನೆ ಮಾಡಿ ಗಳಿಸಬೇಕಾದ ಸ್ಥಾನವನ್ನು  ಜಾತಿಯ ಹೆಸರಿನಲ್ಲಿ ಪಡೆಯಲಾರಂಭಿಸಿದರು. ಈಗಿನಂತೆ  ಪರೀಕ್ಷೆಗಳು  ಇಲ್ಲದ ಕಾಲದಲ್ಲಿ  ಆಡಳಿತ  ವ್ಯವಸ್ತೆಯಲ್ಲಿ  ಜಾತಿಯೇ ಮಾನದಂಡವಾಗಿ ಉಳಿಯಿತು. ಹೀಗೆ ವಿಕಾಸ ಹೊಂದಿದ ಜಾತಿ, ಇವತ್ತು ಪ್ರತಿಯೊಬ್ಬರ ಹೃದಯದಲ್ಲೂ ಹಾಯಾಗಿ  ಮಲಗಿದೆ. ಇನ್ನು ಕೆಲವರಲ್ಲಿ ಈಗ ನಿದ್ರೆಯಿಂದ ಎಚ್ಚೆತ್ತು  ಕಣ್ಣುಗಳನ್ನು ಉಜ್ಜಿಕೊಳ್ಳುತ್ತಿದ್ದೆ.

ಜಾತಿಯ ವಿಕಾಸ:
ಡಾರ್ವಿನ್ ನ ವಿಕಾಸವಾದವನ್ನು  ನಾವು ಓದಬೇಕು. ಯಾವ ದೇಹದ ಭಾಗವನ್ನು ನಾವು ಬಳಸುತ್ತೇವೆಯೋ ಅದು ಬೆಳೆಯುತ್ತದೆ;ಬಳಸದೆ ಇರುವ ಭಾಗ ತಾನಾಗಿಯೇ ಕಳೆದು ಹೋಗುತ್ತದೆ ಎನ್ನುವುದು ಈ  ವಾದದ  ಸಾರಾಂಶ. ಉದಾಹರಣೆಗೆ- ಒಂದು ಕಾಲದಲ್ಲಿ ಕಾಲುಗಳನ್ನು  ಹೊಂದಿದ್ದ ಹಾವುಗಳು ಬಳಸದೆ ಇದ್ದರಿಂದ  ಕಾಲುಗಳೇ ನಶಿಸಿ ಹೋದವು. ಜಿರಾಫೆಗಳು ಅತಿಯಾಗಿ ತಮ್ಮ ಕತ್ತನ್ನು  ಎತ್ತರದ ಗಿಡಗಳನ್ನು  ತಿನ್ನಲು ಬಳಸಿದ್ದರಿಂದ  ಕತ್ತು  ಉದ್ದಾವಾಗಿದೆ. ಈ ಎಲ್ಲ  ಬದಲಾವಣೆಗಳು ಶತಮಾನದಷ್ಟು  ಕಾಲದಲ್ಲಿ ನಡೆದವುಗಳು. ಆದರೆ ಅದು ನಿಜ ಅನ್ನುವುದಕ್ಕೆ ಕೆಲವು ದೈನಂದಿನ ಉದಾಹರಣೆ  ನಾನೇ ಕೊಡುತ್ತೇನೆ. ನಮ್ಮ ನಡುವೆ ಎಷ್ಟೋ ಮಂದಿ  ಎಡಗೈ  ನಿಪುಣಾರಿದ್ದಾರೆ. ಅವರು ಎಡಗೈಯನ್ನು  ಎಲ್ಲ ಕೆಲಸಗಳಿಗೆ ಮೊದಲಿನಿಂದಲೂ ಬಳಿಸಿದ್ದರಿಂದ  ಎಡಗೈ ಸಬಲವಾಗಿ ಬೆಳೆದಿದೆ. ಇನ್ನೊಂದು ಬಗೆಯ ಬದಲಾವಣೆ -ಜೀವಕೋಶಗಳ ಮೂಲ ಸಂರಚನೆಯ ಬದಲಾವಣೆ (genetic  mutation )ಎಂದು ಹೇಳಬಹುದು.Genetic  ಬದಲಾವಣೆ  ಪ್ರಾಕೃತಿಕ ಪರಿಣಾಮಗಳಿಂದಾಗಿ ಜೀವಿಯ ವಿಕಾಸದ ಸತ್ವ ಎಂದು ಭಾವಿಸಿದರೆ, ದಾರ್ವಿನ್  ವಿಕಾಸವಾದವನ್ನು  ಯಾವದನ್ನು ಬಳಸುತ್ತೇವೆಯೋ-ಇಲ್ಲವೋ ಅನ್ನುವ ಅಂಗಗಳ ಕುರಿತಾಗಿ ವಿಶ್ಲೇಷಿಸಬಹುದು.

ಈ  ವಾದಗಳ ಕುರಿತಾಗಿ ಯಾಕೆ ಬರೆದೆ ಗೊತ್ತೇ? ಕೆಲವು ಮಂದಿ ಬಿಳಿ ಬಣ್ಣದ  ಚರ್ಮದವರಾಗಿ  ಕಂಡರೆ  ಇನ್ನು ಕೆಲವರು ಕಪ್ಪು ಚರ್ಮದವರಾಗಿ  ಬೆಳೆದು ಇರುವುದು ಕಾಣಿಸುತ್ತದೆ. ಇವುಗಳು ಕೂಡ ಜಾತಿಯನ್ನು  ಗುರಿತಿಸಲು ಸಹಾಯವೆಂದು ಕೆಲವರ ಅಂಬೋಣ. ಆದರೆ ಮೂಲತ: ಒಂದೇಯಾಗಿದ್ದ  ಜನ ಬಿಳಿ-ಕಪ್ಪು ಯಾಕೆ ? ಸಹಜ ಪ್ರಶ್ನೆ. ಮೂಲತಃ ದೇವಾಲಯಗಳಲ್ಲಿದ್ದು   ಹಲವಾರು  ಶತಮಾನಗಳಿಂದ  ಸೂರ್ಯನ ಕಿರಣಗಳಿಗೆ  ದೇಹವನ್ನು ಒಡ್ಡರಿದ ಜನ  mutation ನಿಂದಾಗಿ  ಬಿಳಿಯರಾದರು.ಅದೇ ಸೂರ್ಯನ ಪ್ರಕಾರ ಕಿರಣಗಳಿಗೆ  ಉತ್ತರಿಸಿದ  ದೇಹಗಳು  ಸುಟ್ಟು ಕಪ್ಪಾಗಿ ಹೋಯಿತು. ಬುದ್ದಿವನ್ತಿಕೆಯಲ್ಲೂ  ನಾವು ವ್ಯತ್ಯಾಸ  ಗಮನಿಸುತ್ತೇವೆ. ಅದಕ್ಕೆ ಕಾರಣ  ಮೆದುಳಿನ ಬಳಕೆ. ದೇವಾಲಯಗಳಲ್ಲಿ ಕುಳಿತ ಬ್ರಾಹ್ಮಣರು ಕ್ಲಿಷ್ಟ ಗಣಿತ-ವಾದಗಳಲ್ಲಿ ತಮ್ಮ ತಲೆಯನ್ನು ತೊಡಗಿಸಿದ್ದರಿಂದ  ಮೆದುಳು ಸಕತ್ ಆಗಿ ಬೆಳೆಯಿತು  ಆದರೆ ದೇಹ ಅಷ್ಟೊಂದು ಸಬಲ ಇಲ್ಲ. ಅದೇ ಹೊಲಗಳಲ್ಲಿ  ದುಡಿಯುವ  ಜನ ಬೌಧಿಕ ವಿಕಸನಕ್ಕೆ ಅವಕಾಶವೇ ನೀಡಿಲ್ಲ. ಪರಿಣಾಮ ಗಣಿತೀಯವಾದ ಬರಹ ವಾದಗಳು  ಅವರಿಗೆ ಭಾರವಾಗಿಯೇ ಉಳಿದವು. ಈ ರೀತಿಯ ಶತಮಾನಗಳ ವಿಕಸನ  ವಿಚಾರದಿಂದ ಮಾತ್ರವಲ್ಲ- ಹೊರ ದೇಹ ರಚನೆ, ಜ್ಞಾನದ ದೃಷ್ಟಿಯಿಂದಲೂ  ಜನರನ್ನು  ಪಂಗಡಗಳಾಗಿ  ಗುರುತಿಸುವಷ್ಟು ಬದಲಾವಣೆಗಲಾದವು.
---need to continue.

ನಿನ್ನಾಣೆ :ಪ್ರೀತಿಗೋಸ್ಕರ ಬದುಕುತ್ತೇನೆ

ನಾನು ಕೆಲವು ದಿನಗಳ ಹಿಂದೆ ಸುವರ್ಣ ನದಿಯ ತೀರದಲ್ಲಿ ಭೇಟಿಯಾದ love failed  ಮಣಿಪಾಲದ ವಿದ್ಯಾರ್ಥಿಯೊಬ್ಬನ ದುಖಿತ  ಸನ್ನಿವೇಶವನ್ನು  ಕುರಿತಾಗಿ ಕವನ ಬರೆದಿದ್ದೆ. ಆ ಕವನ ಭಾವನಾತ್ಮಕವಾಗಿ ನೋಡಿದಾಗ ನಿನ್ನದೇ story  ಅನಿಸುತ್ತದೆ ಎಂದವರು ಇದ್ದಾರೆ.  ಮನುಷ್ಯ ಲೇಖಕ ಆಗುವುದೇ ಪ್ರೀತಿ ವಿಫಲವಾದಾಗ ಎಂದು ಕೂಡ ಕೆಲವರು ಲೇವಡಿ ಮಾಡಿದ್ದಾರೆ. ಅಲ್ಲ ಅನ್ನುವುದಿದ್ದರೆ ನೀನ್ಯಾಕೆ  ಬರೆಯುತ್ತಿಯಾ ? ಅಂತನೂ  ಕೇಳಿದ್ದಾರೆ ...!

ನಾನು ಯಾಕೆ ಬರೆಯುತ್ತೇನೆ ?
ಪ್ರೀತಿಯ ಬಗ್ಗೆ  ಬರೆದಾಗ ಸಹಜವಾಗಿ  ಪ್ರೀತಿಯಲ್ಲಿ ಬಿದ್ದಿದ್ದಾನೆ  ಅಂದುಕೊಳ್ಳುದು  ಸಹಜ. ಹಾಗೇನು ಇಲ್ಲ. ಆದರೆ ಪ್ರೀತಿಯ ಕುರಿತಾಗಿ ನನಗೊಂದು ಹಂಬಲವಿದೆ;ಗೌರವವಿದೆ ;ಆಕಾಂಕ್ಷೆ ಇದೆ. ನಾನು(ನೀವು ಸಹ) ಬಾಲ್ಯದಿಂದಲೂ ಪ್ರೀತಿಯ ಕುರಿತಾಗಿ ಒಂದಲ್ಲ ಒಂದು ರೀತಿಯ ಘಟನೆಗಳು ನೋಡುತ್ತಾ-ಕೇಳುತ್ತ-ಓದುತ್ತ ಬಂದಿದ್ದೇವೆ. ಮೊದಲಿಂದಲೂ ಪುಸ್ತಕಗಳು;ಯಕ್ಷಗಾನಗಳು ನನ್ನ ನೆಚ್ಚಿನ ವಿಷಯಗಳು. ಪೌರಾಣಿಕ ಪ್ರಸಂಗಗಳಲ್ಲಂತೂ ಪ್ರೀತಿಗೆ  ಕೊಟ್ಟ ಬೆಲೆ  ಅಪಾರವೆನ್ನುವುದಕ್ಕೆ 'ರುಕ್ಮಿಣಿ ಸ್ವಯಂವರ' ಒಂದು ಕತೆಯೇ ಸಾಕು. ಉಳಿದೆಲ್ಲ ಕತೆಗಳಲ್ಲೂ ಜಾತಿ ಭೇದಗಳಿಲ್ಲದೆ ಮದುವೆಗಳು ನಡೆದಿವೆ. (For more information read:Hindu Intercaste Marriages in India by Haripada Chakraborthi) ಪುಸ್ತಕವನ್ನು ಓದಬಹುದು.

ಪೌರಾಣಿಕ ಸತ್ಯಗಳು ಆ ಕಾಲಕ್ಕೆ ಸಂದು ಹೋದವುಗಳು. ಆದರೆ ಅಧುನಿಕ ಜಗತ್ತಿನಲ್ಲಿ ನಮ್ಮ-ನಿಮ್ಮ ನಡೆವುಯುವ ಘಟನೆಗಳು ಹಾಗಲ್ಲ. ಅವು ತಿಳಿದು ಕೊಳ್ಳಲು ಜೀವಂತ ಉದಾಹರಣೆ ಗಳಾದುದ್ದರಿಂದ  ಪ್ರೀತಿಯ ಬಗ್ಗೆಗಿನ ಜಿಜ್ನಾಷೆಗೆ ಉತ್ತರವಾಗಿ ಸಿಗುತ್ತದೆ. ಇಂತ ಕತೆಗಳಲ್ಲಿ  ಸುಧಾ ಮೂರ್ತಿ -ನಾರಾಯಣ ಮೂರ್ತಿ  ಕತೆಯು ಒಂದು. ನಾರಾಯಣ ಮೂರ್ತಿ  ಕೇವಲ 800/-  ಆಸ್ತಿಯ  ಬಡ ಜೀವಿಯಾಗಿದ್ದರಂತೆ ಸುಧಾ ಮೂರ್ತಿಯವರ  ಕಣ್ಣು ಅವರ ಮೇಲೆ ಬೀಳುವ ಮೊದಲು. ಆದರೆ ಇಂದು ಸಾವಿರಾರು ಕೋಟಿಯ ಆಸ್ತಿಯ ಒಡೆಯರು  ಮಾತ್ರವಲ್ಲ; ಪ್ರೀತಿಸುವ (ಪ್ರೀತಿಯಲ್ಲಿ ಬೀಳುವ) ವಯಸ್ಸಿನ  ಎಷ್ಟೋ ಮಂದಿಗೆ  ಎಳೆಯ ವಯಸ್ಸಿನಲ್ಲೇ ಲಕ್ಷಾಂತರ  ರೂಪಾಯಿಯ  ನೌಕರಿ ನೀಡಿದ್ದಾರೆ. ಸನ್ಮಾನ್ಯ  ಮೂರ್ತಿಗಳ   ಪ್ರೀತಿಯ  ಫಲವಾಗಿ ಇಂದು ಒಂದು ಸಂಸ್ಥೆ  ಯುವ ಜನತೆಗೆ; ಅಲ್ಲ ಎಲ್ಲಿಂದಲೋ ಬಡ ಕುಟುಂಬಗಳಿಂದ ಬಂದ ಜನರಿಗೆ ಅನ್ನವು ನೀಡುತಿದೆ ಅಲ್ಲವೇ ?
  
ಇನ್ನು facebook  ಹುಟ್ಟಿದ್ದು ಹೇಗೆ ಅಂತ ನಿಮಗೂ ಗೊತ್ತಲ್ಲವೇ? ಅದರ ಹಿಂದೆಯೂ ಪ್ರೀತಿಯ ವಾಸನೆ ಇದೆ. ORKUT  ಕೂಡ ಅಷ್ಟೇ  ಕಳೆದು ಹೋದ ತನ್ನ(founder) ಗೆಳತಿಯನ್ನು ಹುಡುಕಲು ORKUT  ಬೆಳೆಯಿತು ಎನ್ನುವ  ಕತೆ ಅಂತು ಇದೆ. Apple  founder   Steve Jobs ಹಿಂದೆಯೂ ಒಂದು ಪ್ರೀತಿಯ ಕತೆ ಇದೆ. Albert Einstein ಕೂಡ ಈ  ವಿಷಯದಲ್ಲಿ ಕಡಿಮೆ ಏನಲ್ಲ. ಹೀಗೆ ಪ್ರೀತಿ ಒಂದು ಎಲ್ಲರ ಬದುಕಿನ ಹಿಂದೆ, ಸಾಧನೆಯ ಹಿಂದೆ ಇದ್ದೆ ಇದೆ. ಪ್ರೀತಿಯ ಕತೆಗಳು  ವಿಜ್ಞಾನ  ಓದುವರಿಗೆ  ಅದು ಅವರ ವಯಕ್ತಿಕ ವಿಷಯವೆಂದು  ಪರಿಗಣಿಸಿ  ತುಂಬಾ negligence ಮಾಡುತ್ತೇವೆ. ಆದರೆ ವಿಜ್ನಾನಿಯು (ಯಾವುದೇ ಸಾಧನೆಯ ರುವಾರಿಯು) ಮನುಷ್ಯ ಅನ್ನುವುದನ್ನು ಮಾತ್ರ ಮರೆಯಬಾರದು. 

ಪ್ರೀತಿಯಿಂದಲೇ ತಾನು ಮೇಲೆ ಬಂದೆ ಅನ್ನುವ ವ್ಯಕ್ತಿಗಳ ಸಾಲು ಕೂಡ ದೊಡ್ಡದೇ! ವೀರಪ್ಪ ಮೊಯ್ಲಿಯವರು  ತನ್ನ ಮಾವನ ಮಗಳನ್ನು ಪ್ರೀತಿಸಿ ಮದುವೆ ಆಗಿದ್ದರಂತೆ-ಆ ಮಾತನ್ನು ಒಂದು ರೀತಿಯ ಜೋಕಾಗಿ ಉಜಿರೆಯಲ್ಲಿ  ನಡೆದ ತುಳು ಸಮ್ಮೇಳನದಲ್ಲಿ ಹೇಳಿದ್ದರು. ಮಾಲ್ಗುಡಿ ಕತೆಗಗಳ ಜನಕ ಆರ್.ಕೆ .ನಾರಾಯಣ್  ಒಮ್ಮೆ ತಮಿಳುನಾಡಿನಲ್ಲಿ ತಮ್ಮ ಅಕ್ಕಳ ಮನೆ ಬದಲಾಯಿಸುತ್ತಿದಾಗ  ಬಾವಿಯಲ್ಲಿ  ನೀರು ಸೇದುತಿದ್ದ  ಹುಡುಗಿಯನ್ನು ನೋಡಿ ಮೋಹಗೊಂಡು  ಮದುವೆಯನ್ನು ಆದರಂತೆ. ನಮ್ಮೆಲ್ಲರ  ನೆಚ್ಚಿನ ನಟ ವಿಷ್ಣು ವರ್ಧನ್  ಒಮ್ಮೆ  ಬೆಂಗಳೂರಿನ  ಪುರಭವನದಲ್ಲಿ ನಡೆಯುತ್ತಿದ ಕಾರ್ಯಕ್ರಮಕ್ಕೆ ಪ್ರೇಕ್ಷಕರಾಗಿ  ಹೋಗಿದ್ದರಂತೆ. ಹಾಡುತಿದ್ದ  ಭಾರತಿಯನ್ನು ಕಂಡು  ನಾನು ಅವಳನ್ನೇ ಮದುವೆಯಾಗುತ್ತೇನೆ  ಎಂದು ಗೆಳೆಯರಿಗೆಲ್ಲ ಹೇಳಿದ್ದರಂತೆ. ವಿಷ್ಣುವರ್ಧನ  ಒಳ್ಳೆಯ ಸಿನಿಮಾ  ಮಾಡಿದ್ದೂ ಮಾತ್ರವಲ್ಲ; ಇಡಿ ತಮ್ಮ ಬಣ್ಣದ ಜೀವನದಲ್ಲಿಯೂ  ಹೆಣ್ಣಿನ ಕುರಿತಾಗಿ ಅತ್ಯಂತ ಗೌರವಯುತವಾಗಿ ನಡೆದುಕೊಂಡ  ಏಕೈಕ ನಟನಂತೆ. ಇನ್ನು ಸ್ಯಾಮ್  ಪಿಟ್ರೋಡಾ  ಹೆಸರು ನೀವು ಕೇಳಿರಬೇಕು. ಇತ್ತೀಚಿನ  ರಾಷ್ಟ್ರಪತಿ ಆಯ್ಕೆಯ ಸಂದರ್ಭದಲ್ಲಿ  ಅರ್ಹ ಅಭ್ಯರ್ಥಿಗಳಲ್ಲಿ  ಅವರು ಒಬ್ಬರಾಗಿದ್ದರು. ಅವರು ವಿದ್ಯಾಭ್ಯಾಸ  ಮುಗಿಸಿ ಅಮೇರಿಕಾದಲ್ಲಿ ದುಡಿಯುತ್ತಿದ್ದರು. ಆದರೆ  ಗುಜರಾತನಲ್ಲಿದ್ದ  ತನ್ನ ಪ್ರಿಯತಮೆಗೆ  ಸರಿಯಾದ ದೂರವಾಣಿ ವ್ಯವಸ್ತೆ ಇಲ್ಲದಿರುವುದರಿಂದ  ಫೋನ್  ಮೂಲಕ  ಭೇಟಿಯಾಗುವುದು  ಅಸಾಧ್ಯವಾಗುತ್ತಿತ್ತಂತೆ. ಇದರಿಂದಾಗಿ  ಭಾರತೀಯ ದೂರ ಸಂಪರ್ಕ ವ್ಯವಸ್ತೆಯ  ದಿಕ್ಕನ್ನು ಬದಲಾಯಿಸಲು 80ರ ದಶಕದಲ್ಲಿ ಭಾರತೀಯ ದೂರಸಂಪರ್ಕ ಇಲಾಖೆಯಲ್ಲಿ ಸೇರಿದರಂತೆ. ಹೀಗೆ ಬರೆಯುತ್ತ ಹೋದರೆ ಸಾವಿರಾರು ಕತೆಗಳು ಸಿಗುತ್ತವೆ.


ನಾವು ಏನು ಹೇಳಿದರು  ಮನುಷ್ಯನ ಕರ್ತವ್ಯದ ಮೇಲೆ; ಆಸಕ್ತಿಯ ಮೇಲೆ;ಸೃಜನಶೀಲತೆಯ  ಮೇಲೆ  ಪ್ರೀತಿಯ ನೆರಳು ಇದ್ದೆ ಇದೆ. ತಮ್ಮ ಪ್ರೀತಿಯ ಉಳುವಿಗಾಗಿ ಎಲ್ಲರು ಶ್ರಮ ವಹಿಸುತ್ತರಾದರು  ಕೆಲವೊಮ್ಮೆ  ಪರರಿಗೆ ಆಗಬಹುದಾದ ನೋವು ಅರಿಯುವುದಿಲ್ಲ ಅನಿಸುತ್ತದೆ. ಇಂತದೊಂದು  ಕತೆಗಳಲ್ಲಿ ನೆಹರು  ವೈಸರಾಯರ ಹೆಂಡತಿಯ ಮೇಲಿನ ಪ್ರೀತಿಗಾಗಿ ಭಾರತ-ಪಾಕಿಸ್ತಾನದ ವಿಭಜನೆಗೆ ಕಾರಣರಾದರು.ದೇಶಕ್ಕೂ ದುರಂತ ತಂದಿಟ್ಟರು.  ಯಾವೋದು ಒಂದು ಪತ್ರಿಕೆಯಲ್ಲಿ ಓದಿದ ನೆನಪು- ತನ್ನ ಪ್ರೀಯತಮೆಗಾಗಿ  ಮೊಬೈಲ್ ಕೊಡಿಸಲು ಹಣಕ್ಕಾಗಿ  ಯಾರದೋ ಬೈಕ್  ಕದ್ದು ಪೋಲಿಸ್  ಅಥಿತಿಯಾದನಂತೆ. ಪ್ರೀತಿ ಅಪರಾಧವಲ್ಲ; ಆದರೆ ಪ್ರೀತಿ ಅನ್ನುವುದು ಸ್ವಲ್ಪ ಮಾನವ ಸಹಜ ವಿವೇಚನೆಗೆ ಒಳ ಪಟ್ಟಿರಬೇಕು ಅಷ್ಟೇ.


ಹೀಗೆ ನನ್ನ ಮನಸ್ಸಿನಲ್ಲಿ ಪ್ರೀತಿಯ ಕುರಿತಾಗಿ ಆರಾಧನಾ ಭಾವವೊಂದು  ಮೂಡಿದೆ.  ಪ್ರೀತಿಯ ಕುರಿತಾಗಿ -ಅದು ಒಂದು ತಪ್ಪು ವಿಷಯವೆಂದು ಜನ ಮಾತನಾಡುತ್ತರಾದರು- ಅದಕ್ಕೆ ಕಾರಣ ಪ್ರೀತಿಯೇ ತಪ್ಪು ಅಂತ ಅಲ್ಲ. ಯಾರಾದರು ಪ್ರೀತಿಸಿ ಮದುವೆಯಾದರೆ -ಎಲ್ಲಿ ಸಂಪ್ರದಾಯ ಮುರಿದು  ಜಾತಿ-ಗಿತಿ  ಕೆಟ್ಟು ಹೋದಿತು ಅನ್ನುವ ಭಯ. ಹುಡುಗ-ಹುಡುಗಿಯೇ ನಿರ್ಧರಿಸಿ  ಮದುವೆಯಾದರೆ  ಎಲ್ಲಿ ಜಾತಕಕ್ಕೆ ಬೆಲೆ ಬಂದಿತು? ಅವರಿಗೆಲ್ಲಿ  ನೌಕರಿ ? ಜ್ಯೋತಿಷಿಗಳೆಂದು ನಾಮ ಎಳೆದು ಕೊಂಡವರಿಗೆ ಯಾರು ಬೆಲೆ ಕೊಡ್ತಾರೆ ? ಜೊತೆಗೆ ವರದಕ್ಷಿಣೆಯಿಂದ ಬರಬೇಕಾದ  ಹಣ-ಕಾರು  ಎಲ್ಲ ತಪ್ಪಿ ಹೋದರೆ ಏನು ಮಾಡುದು ?  ಒಟ್ಟಾರೆ  ಹಿರಿಯರ ಕಪಿ ಮುಷ್ಟಿಯಲ್ಲಿ  ಎಷ್ಟೋ ಜನ ತಮ್ಮ  ಪ್ರೀತಿಯಿಂದ ದೂರ ಸರಿದವರಿದ್ದಾರೆ.
 
ನಾನು ಹೇಳುವುದಿಷ್ಟೇ : ನಿವೇನಾದರು ಪ್ರೀತಿಯಲ್ಲಿದ್ದಿರೆ -ಇವತ್ತೇ  ಆಣೆ  ಮಾಡಿ ಪ್ರೀತಿಗೊಸ್ಕವೇ ಬದುಕುತ್ತೇನೆ ಎಂದು. ನಿಮ್ಮ ಪ್ರೀತಿ ನಿಮ್ಮದೇ ಆಗಿರಲಿ. ತಂದೆ-ತಾಯಿ, ಬಂಧುಗಳಿಂದ  ಆತ್ಮ ವಿಶ್ವಾಸಗಳಿಸಿ. ಆದರೆ ಪ್ರೀತಿಗಾಗಿ ಮಾನವೀಯ ಮೌಲ್ಯಗಳನ್ನು ಧಿಕ್ಕರಿಸಬೇಡಿ.ಪ್ರೀತಿಯಿಂದ-ಉತ್ಸಾಹ, ಉತ್ಸಾಹದಿಂದ-ಕಾರ್ಯ ಸಾಧನೆಯಗುತ್ತದೆ ಹೊರತು  ಕೇವಲ ಉತ್ಸಹ ರಹಿತ ಶಿಕ್ಷಣದಿಂದ  ಡಿಗ್ರಿಗಳು ಸಿಗುತ್ತವೆ  ವಿನಾ  ಸಾಧನೆಯಲ್ಲ.

Saturday, November 24, 2012

ಪ್ರೇಮಗೀತೆಗೊಂದು ಷರಾ ಬರೆದ ಕೂಲಿ

ನಾನು ಒಮ್ಮೆ ಸ್ವರ್ಣ ನದಿಯ ತೀರದಲ್ಲಿ  ಹೋದಾಗ ಪ್ರೇಮ ವಂಚಿತ ಮಣಿಪಾಲದ ವಿದ್ಯಾರ್ಥಿ ಭೇಟಿಯಾಗಿದ್ದ. ಶಾಂತ ನದಿಯ ತೀರದಲ್ಲಿ ನನ್ನ ಭಾವಚಿತ್ರ ತೆಗೆಯಲು ಅವನಲ್ಲಿ ಸಹಾಯ ಕೇಳಿದಾಗ ಅವನು ನನ್ನ ಜೊತೆ ಮಾತು-ಕತೆ ನಡೆಸಿ ತನ್ನ ಬದುಕು ವಿವರಿಸಿದ.  ಆ ಕತೆಯನ್ನು ಆಧಾರಿಸಿ ಒಂದು ಲಹರಿಯಲ್ಲಿ ಮುಳುಗಿ ಈ  ಕತೆ ನಿರೂಪಕ ಬರೆದೆ.
ಈ ಕವನದಲ್ಲಿ ಪ್ರೇಮಿಯು  ಗೆಳತಿಯಿಂದ  ದೂರವಾಗಿ ಏಕಾಂಗಿಯಾಗಿ ಹೋಗುತಿರಲು ಒಬ್ಬ ಕೂಲಿಯ  ಹತ್ತಿರ ಕುಡಿಯಲು ನೀರು  ಕೇಳುತ್ತಾನೆ. ದಿಗ್ಭ್ರಾಂತ ಪ್ರೇಮಿಗೆ ಅವನು ಜೀವನದ ಸಲಹೆ ಕೊಟ್ಟು ವಿದ್ಯಾರ್ಥಿಯನ್ನು ಉದ್ಧರಿಸುತ್ತಾನೆ.

ನೋಡಿ ತರುಣಿಯ ಮೊಗವ
ಮೋಡ ಕವಿದಂತಾಗಿ ಮನಕೆ
ಮೂಢ ಭಾವವು ಜನಿಸಿರೆ...
ಎಡ ಬಲದಲಿ ಕಂಡನು ವಿನಾಶವ....||1||

ಅರಿಯದಾಯಿತು ಹಣೆಬರಹವ
ಹರ -ಹರಿ -ಗುರುಗಳ ನೆನೆದು
ತಿರುವಂತಾಯಿತು ಜಗದಗಲ
ಬರಿದಾಯಿತು ಬದುಕೆನ್ನುತ .....||2||

ಅಲ್ಲಿ ಸಿಕ್ಕನು ಶಾಂತ ಸ್ವರೂಪ
ಜಲ್ಲಿ-ಕಲ್ಲುಗಳ ಯಂತ್ರ ನಿರೂಪಕ
ಬಲ್ಲಿದವಗೆ ಏನು ಗೊಳ್ ? ಎಂದು ಪ್ರಶ್ನಿಸಿ
ಚೆಲ್ಲಿದನು ತನ್ನ ಸಹಾಯ ಹಸ್ತವ....|| 3||

ಏನು ಹೇಳಲಿ ಬಂಧುವೇ ?
ಬಾನಿಗೆ ಏಣಿ ಕಟ್ಟಲು ಹಾತೊರೆದು
ಮಾನ ಕೆಳೆದು ಹೋಯಿತಲ್ಲೋ
ಘನ ಬದುಕಿ ಬರಿದಾಯಿತಲ್ಲೋ ..||4||

ಮೌನ ಯಾನವು ಲೇಸೆಂದು
ನಾನಿತ್ತ ಪೋಪಿರೆ ನಿನ್ನ ಕಂಡೆ
ಪಾನಿಯಗಳನಿತ್ತು ಸಲಹಿರೆ
ಜನಾರ್ಧನನು ಕರುಣಿಪ ನೆಂದ ..||5|

ಕೂಲಿಯು ನೀರನ್ನು ಕೊಟ್ಟು
ತಲೆಯಲ್ಲ ಕೆದಕುತ್ತ ಭಾವುಕನಾಗಿ
ಲಲನೆಯ ಒಲವಿಗೆ  ಬರಿದಾದ
ಸೋಲ್ಲಂಗಳ ಕೇಳುತ ನಿಂತ ....||6||


ಮೂರು ವರ್ಷಗಳ ಹಿಂದೆ
ಯಾರು ಎಂದೇ ತಿಳಿಯದೇ
ವರ ಕನ್ಯೆ ಎಂದು ಭಾವಿಸಿ
ಜಾರಿ ಹೋದೇನು ಅವಳತ್ತ ...||7||

ಪ್ರೀತಿಯೇ ಕುರುಡು ಅಂತರಲ್ಲವೇ
ಕೀರ್ತಿ-ಬದುಕೇ ಮರೆತು
ಸ್ವಾರ್ಥ ಭಾವವೂ ಮರೆತು
ಶ್ವೇತ ಹೃದಯವು ಅವಳಿಗೆ ತೆರೆದಿಟ್ಟೆ ..||8||

ಬಂದು ಕುಣಿದಳು ಹಗಲು-ಇರುಳು
ಮಂದ ಬುದ್ದಿಗೆ ತಿಳಿಯದಾಯಿತು
ಸೌಂದರ್ಯದ ಸೆಳೆತಗಳ ಭಾವ
ಅಂದೇ ಬದುಕು ತಿರಿಹೋಗಿದೆ .....||9||

ಮಲ್ಪೆಯ ಮರಳಲ್ಲಿ  ಉರುಳಾಡಿ
ಕಲ್ಪೆನೆಯಲ್ಲೇ ಭವಿಷ್ಯ ಕಂಡು
ಸ್ವಲ್ಪವೂ ಯೋಚಿಸದೆ  ಹೋದೆನಲ್ಲ ಇವಳ ವಿ-
ಕಲ್ಪ ಬುದ್ದಿಯ ಬಗೆಯನ್ನು....||10||

ಅಪ್ಪ ಕೊಟ್ಟ ಹಣವನ್ನೆಲ್ಲ ಸುರಿಸಿ
ಲ್ಯಾಪ್ಟಾಪ್ ಅನ್ನು  ಕೊಡಿಸಿಬಿಟ್ಟೆ
ತಪ್ಪು ಅನಿಸಲಿಲ್ಲ ಅಂದು ಆ  ವರ್ತನೆ
ಒಪ್ಪಿ ಕೊಂಡ  ಪ್ರೀತಿ ಯಲ್ಲವೆ...?!..||11||

ಹಂಗೊಯೋ ದಲ್ಲಿ ಊಟ ಮಾಡಿ
ಮಂಗಳೂರಿನಲ್ಲಿ ಸಿನೆಮ ನೋಡಿ
ಇಂಗು ತಿಂದ ಮಂಗ ನಾದೆಲ್ಲೋ
ಹಂಗಿನ ಪ್ರೀತಿ  ನನ್ನ ದಾಯ್ತಲ್ಲೋ...||12||

ಬ್ಯೂಟಿ ಪಾರ್ಲೋರ್   ಕರ್ದೊಯ್ದೆ
ಕ್ಯಾಟ್ ವಾಕ್ ಡ್ರೆಸ್ಸು ನೂ  ತಂದುಕೊಟ್ಟೆ
ನೀಟಾಗಿ  ಬಾಳುವಳು  ಎಂಬ  ಭ್ರಮೆಯಲಿ 
ಸುಟ್ಟು  ಕೊಂಡೆನಲ್ಲೋ  ಹೃದಯ ಮಂದಿರವ  ...||13||

ನೊಂದ ಹೃದಯದ  ಯುವಕನು
ಬೆಂದ ಬಗೆಯನು ತೆರೆದಿಡಲು
ಸಂದ  ಕಾಲವನ್ನು ಮರೆತು
ಗೊಂದಲಗಳ ಅರಿತು ಬದುಕೆಂದ... ||14||

ಕಲಿತವರ ಬವಣೆಯು  ಇಷ್ಟೆಯೋ ..!
ಒಲಿದ ಹೆಣ್ಣು ಮಣ್ಣು ಗುಡಿಸಿದಲೇ   ಬಾಳ
ಲಲನೆಯರ ಸಂಗ  ಯಾತಕ್ಕೆ  ವಿದ್ಯಾರ್ಥಿಗೆ
ಬಲ್ಲವನಲ್ಲ  ಕಲಿಕೆಯ ಒಳಗುಟ್ಟು;ಚಿಂತಿಸುತಲಿ ||15||

ಎನಗಿಲ್ಲ ಅಕ್ಷರ ಲೋಕದ ಜ್ಞಾನ
ಕನಕಾಂಗಿಯಾರನಂತು ನಾ  ಬಯಸಿಲ್ಲ
ಮನದಲಿ ಸೋತಿಹೆನು  ಅರಿಯಲು
ನಿನ್ನ ದುಗುಡ ದುಮ್ಮಾನಂಗಳೆಂದ ...||16||

ಮನದಲ್ಲಿ ನೊಂದು ಬಗೆಯಲ್ಲಿ ಬೆಂದು
ಮೌನದಲ್ಲಿ ಈ  ಪರಿಯಲಿ ಕೊರಗುತಿರೆ
ಅನುಮಾನವೂ ಎನಗೆ ನಿನ್ನ  ಭಾವದಲ್ಲಿ
ತನುವು  ನೀ  ಉಳಿಸಿಕೊಂಬೆ ಎಂಬುದರಲಿ ...||17||

ಬದುಕೆಂಬದು  ದೇವರಾಟವು
ಸದುಪಯೋಗದಲಿ ಕಳೆ  ಕಾಲವ
ಓದುತ ಬರೆಯುತ ಸಾಗುತಿರೆ
ವಿದುರತ್ವವು  ಮರೆಯುವುದೆನ್ನುತ   ||18||

ಬುದ್ದಿವಂತರು ಇವರು ವಿಜ್ಞಾನಿಗಳು
ಸದ್ದು ಮಾಡುವರು ಮಾತುಗಳಲಿ
ಬದುಕಿನ ಅರ್ಥವೇ ತಿಳಿಯದ
ಹದ್ದಿನ ಬಾಳು ಇವರದೇ? ಹರ..ಹರಾ..! ||19||


ಬಡವನಿಗೆ ಹೊಟ್ಟೆಯ ಚಿಂತೆ
ಕೆಡುವವಗೆ  ಒಲವಿನ ಚಿಂತೆ
ಬುಡವೇ  ಇಲ್ಲ ಇವರ  ಬದುಕಿಗೆ
ಒಡನೆ  ಪ್ರೀತಿ ಪ್ರೇಮಕ್ಕೆ ಬಲಿಗಳು...||20 ||

ಅಕ್ಷರ  ಬದುಕಿಗೆ ಆಧಾರ
ಶಿಕ್ಷಣ ಜೀವನಕ್ಕೆ ಸ್ವರ್ಗ
ಲಕ್ಷಣಯುತ ಬದುಕು ಪ್ರಿಯವು
ಚಕ್ಷುಗಲಿರೆ  ತಿಳಿಯಲು ಸತ್ಯವನ್ನು  || 21||
 
ಕಾರ್ಮಿಕನ ಮಾತುಗಳ ತಿಕ್ಷಣ
ಮರ್ಮವನರಿತ  ಭಗ್ನ ಪ್ರೇಮಿಯು
ಕರ್ಮ ಲೋಕದ  ಪರಿಯನ್ನು ಚಿಂತಿಸುತ
ನಿರ್ಮಲ ಬದುಕಿಗೆ  ಆಣೆಯನಿತ್ತ ....|| 22||

ತನ್ನ  ಒಳಗಿನ  ಭಾವ ಶಕ್ತಿಗಳ
ಕನ್ನ  ಹೊಡೆದ ಯುವತಿಗೆ
ಅನ್ನದ  ಋಣ ವಿಲ್ಲ ವೆಂದೆನುತ
ಮನ್ನಿಸುವುದೇ ಲೇಸು - ಲೇಸೆಂದ         || 23||

ಮನೆಯನ್ನು ಸೇರಿದ ತವಕದಲಿ
ಅನುಮಾನಿಸದೆ  ಹೊತ್ತಿಗೆಗಳನ್ನು ತೆರೆದು
ಮನಸ್ಸನ್ನು  ಓದಿನಲ್ಲಿ ಸೇರಿಸಲು
ಜನ-ಮನವ  ಗೆದ್ದು ಬಂದ...||24||

ಪ್ರೀತಿ ಪ್ರೆಮಗಳೇ  ಸುಳ್ಳು
ಕೀರ್ತಿ- ಬದುಕುಗಳು  ಸತ್ಯ
ನರ್ತಿಸುವೆ  ಇಂದು  ನೆನೆದು
ತರ್ಕಿಸಿ ಹಿಂದಿನ ನೋವುಕತೆಗಳನು || 25||

ಗೆಳೆಯರೇ ಕೇಳಿ  ಎನ್ನೆಯ
ಏಳಿಗೆಯ  ಮಾತುಗಳನು
ಬಳಿಕ  ನೀವೇ ಯೋಚಿಸಿ
ಸುಳ್ಳೆಂದು ಅನುಮಾನಿಸಿರೆ   ||26||

ಬೇಡ ಬೇಡ ಲಲನೆಯರ  ಸಂಗ
ಹಾಡಿ  ನಲಿಯೋಣ  ಸುಮ್ಮನೆ
ಜೋಡಿಯಾಗಲು  ಕ್ಷಣಗಳು  ಸಾಕು
ಬೇಡಿಕೊಂಡರು ಸಿಗದೆಂದು ಸ್ವಂತಿಕೆ  ..|| 27||

ಪ್ರೇಮ  ಕಲ್ಪನೆ  ಮಾತ್ರ-ಇದು ಸತ್ಯ
ಕ್ರಮೇಣ  ಸವೆಸುವುದು  ನಿಮ್ಮ ಹೃದಯ
ಪ್ರೇಮ ರೋಗವು ಬಲು ಜಾಡ್ಯ
ಚರ್ಮ ರೋಗದನತಲ್ಲ  ನಿನರಿಯೇ ||28 ||

ಕವಿತೆ ರೂಪದೊಳು  ನಿಮ್ಮ ಹೃದಯ
ಸವಿಯಲು ಕಲ್ಪಿಸಿರೆ ಎನಗೊಂದು
ಅವಕಾಶ ಜೀವನದೊಳು  ತಮಗೆ
ದೇವರು ಕರುಣಿಸಲೆಂದು ಬೇಡಿಕೊಂಬೇನು  || 29||

ಮಂಗಳಂ  ಪಾಡುವೇನು  ಮೊದಲ  ಬರಹಕ್ಕೆ
ಅಂಗಳದೊಳು ಕುಣಿದು  ನಲಿಯುವೇನು
ತಿಂಗಳ ರಾತ್ರಿಯ  ಚಂದದ  ಬೆಳಕಿನಲಿ
ಮಂಗಳವಾಗಲಿ ತಮಗೂ ತಮ್ಮವರಿಗೂ  || 30||

Tuesday, November 13, 2012

ಮಕ್ಕಳ ದಿನಾಚರಣೆ:ಭಾಗ-2

ಮಕ್ಕಳ ದಿನಾಚರಣನೆ ಭಾಗ-1 ರಲ್ಲಿ ನನ್ನ ಕೆಲವು ಬಾಲ್ಯದ ನೆನಪುಗಳನ್ನು ಕುರಿತು ಬರೆದಿದ್ದೆ.
 
ಮಕ್ಕಳು ಅಂದರೆ ಅರಳಿ ನಿಂತ ಹೂವು; ಅತ್ಯಂತ ಜಟಿಲ ಪ್ರಶ್ನೆಗಳ ಆಗರ; ಎಡೆಬಿಡದ ಕುಣಿದಾಟ -ಚೀರಾಟ ; ನಡೆದಿದ್ದೆ ನಾಟ್ಯ; ನುಡಿದುದ್ದೆ  ಹಾಸ್ಯ; ಅದನ್ನೆಲ್ಲಾ  ಹಿಂಬಾಲಿಸಿ  ಬರುವ ಅಳು -ಕಣ್ಣೀರು. ಬಿಸ್ಕುಟ್ ಕೊಟ್ಟರೆ  ಅದು ಬೇಡ; ಅದರ ಪ್ಯಾಕ್  ಕವರೇ ಬೇಕು. ಅಣ್ಣ-ತಮ್ಮ ಇದ್ದರಂತೂ ತಮ್ಮನಿಗಿಂತ ಸ್ವಲ್ಪವೇ ಹೆಚ್ಚು ತನಗೆ ಬೇಕು ಅನ್ನುವ ಅಣ್ಣ; ತನ್ನ ಸಣ್ಣತನದಿಂದಲೇ ತಂದೆ ತಾಯಿಯರ  ಒಲವು ಗಳಿಸುವ ತಮ್ಮ ಎಷ್ಟೋ ಸಾರಿ ತನಗೆ ಬೇಕಾದುದ್ದನ್ನು  ಪಡೆಯುತ್ತಾನೆ. ಅಲ್ಲೊಂದು ಸಣ್ಣ  ಚೀರಾಟ -ಕಣ್ಣೀರು; ಇನ್ನು ಕಣ್ಣೀರು  ಆರುವ  ಮೊದಲೇ ಅಣ್ಣ-ತಮ್ಮ ಅನುಬಂಧವು ಆಟ-ಊಟ ಮುಂದುವರಿಸುತ್ತದೆ.

ಇಂತ ಬಾಲ್ಯದ ದಿನಗಳು ಇಂದು ನನ್ನ ಪಾಲಿಗಂತೂ  ಹೇಳಲಾಗದ -ಎಂದೆಂದೂ ನಟಿಸಲಾಗದ ನನ್ನದೇ ನಾಟಕ. ಅದ್ಭುತ-ನಿಶ್ಚಿಂತ-ಸ್ವತಂತ್ರ ಮನೋಗತಿ ಇಂದು ತಲುಪುವುದು ಅಸಾಧ್ಯವೇ ?  ಹೀಗಾಗಿ ಮಕ್ಕಳ ಬಗ್ಗೆ ನನ್ನಿಂದ ನಿಮ್ಮಲೆರಲ್ಲಿ ಕೆಲವು ಹೇಳಿಕೆಗಳಿವೆ;ಬೇಡಿಕೆಗಳಿವೆ. ಮನ್ನಿಸುತ್ತುರಿ ತಾನೇ?

ನಾನು ಕಂಡಿರುವ ಒಂದು ಅದ್ಭುತ ಜ್ಞಾನವೆಂದರೆ ಜೀವನದಲ್ಲಿ ಸುಖ -ಸಂತೋಷ -ಸಮಾಧಾನಗಳು ಮರೀಚಿಕೆ ಮಾತ್ರ.ಅವುಗಳನ್ನು ಹಿಂಬಾಲಿಸಿ ನಮ್ಮ ಕಾಲಿಗೆ ನಾವು ನೋವು ಮಾಡಿಕೊಳ್ಳುತೇವೆ  ಹೊರತು ಅದನ್ನು ಕೈ ಗೆ ಸಿಗುವುವುದು ಅಸಾಧ್ಯವೇ, ಸಿಕ್ಕರೂ ನಾವು ಹಿಂಬಾಲಿಸಿದ್ದು ಇದನ್ನೇ ಎಂಬ ಪ್ರಶ್ನೆ ಕಾಡುತ್ತದೆ; ಮತ್ತೆ ಓಡುವಂತೆ ಯಾಗುತ್ತದೆ. ಎಷ್ಟೋ ಮಂದಿ  ಅರಳು-ಮರಳು ಸ್ಥಿತಿ ತಲುಪಿದರೂ  ನಮಗೆ ಸಂತೋಷವೇ ಜೀವನದಲ್ಲಿ ಸಿಕ್ಕಿಲ್ಲ ಎಂದು ಕಣ್ಣೀರು ಬತ್ತಿ ಹೋಗಿದ್ದರು ಕಣ್ಣುಗಳನ್ನು ಅದುಮಿಕೊಂಡು ಗದ್ಗದಿತರಾಗಿದ್ದನ್ನು ಕಂಡಿದ್ದೇನೆ. ಹೀಗಾಗಿ ಜೀವನದ ಅತ್ಯಂತ ಸಂತೋಷದ ದಿನಗಳು ಬಾಲ್ಯ ಮಾತ್ರ ಎಂದು ತಿರ್ಮಾನಕ್ಕೆ ಬಂದಿದ್ದೇನೆ. ಪ್ರತಿಯೊಬ್ಬರಿಗೂ(ಮಗುವಿಗೂ) ಇಂತ  ಬಾಲ್ಯ ಪರಿಪೂರ್ಣವಾಗಿ ಅನುಭವಿಸುವ ಅವಕಾಶ ಸಿಗುವಂತಾಗಲಿ; ಅದಕ್ಕೆ ಹಿರಿತನದ ಪಟ್ಟ ಹಿಡಿದಿರುವ ತಾವುಗಳು ಅವಕಾಶ ಕಲ್ಪಿಸಿಕೊಡುವಂತಾಗಲಿ ಎಂದು ಮೊದಲ ಹೇಳಿಕೆ ನೀಡುತ್ತೇನೆ.

 ಮಮಗುವಿಗೆ ಸ್ವಾತಂತ್ರ್ಯ  ಕೊಡಿ. ಅದು ಮಣ್ಣಿನಲ್ಲಿ ಆಡಲಿ; ಗಿಡ-ಬಳ್ಳಿಗಳ ಜೊತೆ ನಿಲ್ಲಲಿ.ನಾಯಿ-ಬೆಕ್ಕು ಜೊತೆ ಬಾಂಧವ್ಯ  ಬೆಳೆಸಲಿ; ಓರಗೆಯ ಮಕ್ಕಳೊಂದಿಗೆ ಆಟ ಆಡಲಿ-ಜಗಳ ಮಾಡಲಿ; ಅವರ ಜಗಳಕ್ಕೆ ತಮ್ಮ ಮಗುವೆಂದು ಯಾವತ್ತು ಅವರನ್ನೇ ಹೊತ್ತುಕೊಳ್ಳದೆ  ಸಾಮಾಜಿಕ ನ್ಯಾಯೇನ ಅವರ ವಾದ-ವಿವಾದಗಳಿಗೆ ತೆರೆ ಎಳೆದು ಬಿಡಿ. ಅದ್ಭುತವಾಗಿ ಕೇಳಲ್ಪಡುವ ಆಶ್ಚರ್ಯಕಕರ ಮಕ್ಕಳ  ಪ್ರಶ್ನೆಗಳಿಗೆ ನೀವು ಎಂದಾದರೂ ಸಮರ್ಥವಾಗಿ ಉತ್ತರಿಸಿದ್ದಿರಾ ?  ಚಂದ್ರ ಯಾಕೆ ಹೇಗೆ ಮೇಲೆ ನಿಂತಿದ್ದಾನೆ ? ಆತ  ಯಾಕೆ ಕೆಳಗೆ ಬೀಳುವುದಿಲ್ಲ? ಹಕ್ಕಿಗಳು ಮರ ಬಿದ್ದರೆ ಏನು ಮಾಡುತ್ತವೆ ? ರಾತ್ರಿ ಮರದ ಕೆಳಗೆ ಮಲಗಿದ ಪ್ರಾಣಿಗಳು ಮರ ಬಿದ್ದರೆ ಹೇಗೆ  ತಪ್ಪಿಸಿ ಕೊಳ್ಳುತ್ತವೆ ? ಈ ಮಳೆಯಲ್ಲಿ ನಾಯಿ ತಿರುಗುತ್ತದೆ ; ದನ ಗಳು ಮೇಯುತ್ತಿವೆ ; ಆದರೆ ನಾನು ಮಾತ್ರ  ಮಳೆಗೆ ಹೋದರೆ ನನಗೆ ನೆಗಡಿ ಯಾಗುತ್ತದೆಯೇ?   ಮಕ್ಕಳಿಗೆ ಸಮರ್ಪಕ ಉತ್ತರ ಅಸಾಧ್ಯವೇ..! ಆದರು ನಾವು ಪ್ರಶ್ನೆಗಳನ್ನು  ನಿಷ್ಪ್ರಯೋಜಕ ಅಂತ ಮಾತ್ರ ಹೇಳ್ಬೇಡಿ.!

ಇಷ್ಟವಿಲ್ಲದ ಶಿಕ್ಷಣದ ಒತ್ತಡ ; ಇಷ್ಟವಾಗುವ ಹವ್ಯಾಸಕ್ಕೆ ತಡೆ ಖಂಡಿತ ತರಬೇಡಿ. ನಿಮ್ಮ ಮಗು ಪ್ರಕೃತಿಯ ಜೊತೆಯಲ್ಲಿ ಬೆಳೆಯುತ್ತ-ಗಮನಿಸುತ್ತ  ಅದುವೇ ಬೇಕಾದನ್ನು ಆಕರ್ಷಣೆಗೆ ಒಳಗಾಗಿ ಏನೋ  ಬೇಕೋ ಅದನ್ನು ಕಲಿಯುವಂತಾಗಲಿ. ನಿಮ್ಮ ಗುರಿ ಕೇವಲ ಮಗುವನ್ನು ಮಾನವ ಮುಖ್ಯವಾಹಿನಿಯತ್ತ ತರುವುದು ಮಾತ್ರ ವಾಗಿರಬೇಕು ಹೊರತು ಪ್ರತಿಯೊಂದು ನಡೆಯು ನಿಮ್ಮಿಂದಲೇ ನಿರ್ದೇಶಿಸಲ್ಪಟ್ಟರೆ ನಿಮ್ಮ ಮಗುವಿನ ಸ್ವಾತಂತ್ರ್ಯ ಕಸಿದ ಹಾಗೇನೆ. ಮಗುವು ಹಾಡುಗಾರನಾಗಲು ತವಿಕಿಸಿದರೆ ನೀವು ಇಂಜಿನಿಯರ್ ಆಗಲೇ ಬೇಕು ಅನ್ನುದು ಸರಿಯಲ್ಲ ಅನ್ನುದು ನನ್ನ ತಾತ್ಪರ್ಯ.

ಆದರೆ ಎಷ್ಟೋ ಮಕ್ಕಳ ಬದುಕು ನಾವು ಅಂದು ಕೊಂಡಂತೆ ಇಲ್ಲ. ಕೆಲವು ಮನೆಗಳಲ್ಲಿ  ಬಡತನ ಯಾವ ಪರಿ ಕಾಡಿದೆಯಂದರೆ  ಅವರಿಗೆ ಹಸಿವಿನ ಕುರಿತಾಗಿ ಚಿಂತೆಯನ್ನು ಉಳಿಸಿದೆ ಹೊರತು ಒಂದು ನಗುವ ಕಾರಣವನ್ನೇ ಕೊಟ್ಟಿಲ್ಲ. ಅಂತ ಮಕ್ಕಳಿಗೆ ಯಾವ ಶಿಕ್ಷಣ ? ಯಾವ ಕಲೆ?  ಏನು ಗುರಿ ಉಳಿದಿತು ಜೀವನದಲ್ಲಿ ?

ನಮ್ಮ ಬುದ್ಧಿವಂತ ಸಮಾಜದ ಇನ್ನೊಂದು ವಿಚಿತ್ರ  ನನ್ನ ತಲೆಯಲ್ಲಿ ಸುಳಿದು ಹೋಯಿತು. ಯಾಕಾದರೂ 'ಹೆಣ್ಣು ಮಗು ಬೇಡ- ಗಂಡು ಮಗು ಬೇಕು' ಎಂಬ ವಾದಕ್ಕೆ ನಮ್ಮ ಬುದ್ಧಿವಂತರೆಲ್ಲ ಗುರಿಯಾಗಿದ್ದರೋ ? ಇದರ ಪರಿಣಾಮವಾಗಿ  ದೇಶದಲ್ಲಿಯೇ  ಹೆಣ್ಣು-ಗಂಡುಗಳ ವಿಷಮ ಅನುಪತದಿಂದಾಗಿ  ಸಾಮಾಜಿಕ  ವಿಷಮಯ ಸ್ಥಿತಿಯೊಂದು ಬಂದು ಹೋದಗುವುದು ಅಂತು ಖಂಡಿತ. ಅದಕ್ಕೆ ' ಆರತಿಗೊಬ್ಬಳು  ಮಗಳು ಕೀರ್ತಿಗೊಬ್ಬ  ಮಗ ' ಎಂಬ ಮಾತು ಪಾಲಿಸಿದ್ರೆನೆ ಚೆನ್ನಾಗಿರುತ್ತೆ ಅನಿಸ್ತಾ ಇದೆ ರೀ..!

 ಈ  ಲೇಖನ ಇಲ್ಲಿಗೆ ನಿಲ್ಲಿಸುತ್ತೇನೆ. ನನ್ನ ಓರಗೆಯ ಮಕ್ಕಳು ದೀಪಾವಳಿಯ ಹಬ್ಬಕ್ಕಾಗಿ ಕೇಪು-ಪಟಾಕ್ಷಿ ಗಳೊಂದಿಗೆ ಹೊರಗೆ ಬಂದಿದ್ದವೆ. ನಾನು ಅವರ ಜೊತೆ ಮಗುವಿನಂತೆ ಪಾಲ್ಗೊಂಡು ಇವತ್ತು ಸಾರ್ಥಕ ಅಂತ ಭಾವಿಸುತ್ತೇನೆ.

Thursday, November 8, 2012

ಮಕ್ಕಳ ದಿನಾಚಾರಣೆ : ಭಾಗ -1

ನಾನು ಚಿಕ್ಕವನಿದ್ದೆ. ನಾನು ಶಾಲೆಯ ಮೆಟ್ಟಿಲು ತುಳಿದುದ್ದು  ನನ್ನ 8 ನೆ ವಯಸ್ಸಿನಲ್ಲಿ. ಹೀಗಿರುವಾಗ  ನನ್ನ ಎಂಟು ವರ್ಷಗಳು-ನಾನು ಅಮ್ಮನ ಮಡಿಲಿನಿಂದ ಜಾರಿ ಕೊಂಡು ತೋಟ-ಗದ್ದೆ ಇತ್ಯಾದಿಗಳನ್ನು ಸುತ್ತುತ್ತ ಇದ್ದೆ. ಆ  ಬದುಕು ಎಷ್ಟೊಂದು ಸ್ವಾತಂತ್ರ್ಯ!.  ಓದು ಎಂದು ಯಾವತ್ತು ನನ್ನ ಅಪ್ಪ-ಅಮ್ಮ ಗದರಿಸಿದ್ದೆ  ಇಲ್ಲ..! ಆ  ವಿಚಾರದಲ್ಲಿ ಹಳ್ಳಿಯ ಅಪ್ಪ-ಅಮ್ಮ ಅಂತ ಹೇಳಿಕೊಳ್ಳುವುದಕ್ಕೆ  ಹೆಮ್ಮೆ ಅನಿಸುತ್ತದೆ.

ನನ್ನ ದಿನಚರಿ ಎಷ್ಟೊಂದು ಸೊಗಸಾಗಿತ್ತು  ಆ  ಕಾಲದಲ್ಲಿ..! ಕೋಳಿಯ ಘಂಟನಾದವೆ  ಏಳಬೇಕು ಎನ್ನುವುದರ ಗಂಟೆ ಯಾಗಿರುತಿತ್ತು.ಅಷ್ಟು ಹೊತ್ತಿಗಾಗಲೇ ಕಾಡಿನ  ಪಕ್ಷಿಗಳ ಸುಪ್ರಭಾತ ಸುರುವಾಗಿರುತಿತ್ತು. ಅಮ್ಮ ಎದ್ದು ರೇಡಿಯೋ ತಿರುವಿದಾಗ -'ಆಕಾಶವಾಣಿ ಧಾರವಾಡ...ಈಗ ಚಿಂತನ...' ಎನ್ನುತ್ತಾ ಮುಂದೆ ವಿವಿಧ ಕಾರ್ಯಕ್ರಮಗಳನ್ನು  ಬಿತ್ತರಿಸುತಿತ್ತು(ಈಗಲೂ  ಇದೆ). ಎಲ್ಲ ನೈಸರ್ಗಿಕ ಕೆಲಸಗಳಿಗೆ ಹೊರ ಹೋಗುವುದು ಹಳ್ಳಿಯ ಸಂಪ್ರದಾಯ. ಸುತ್ತಲು ಇರುವ ಗುಡ್ಡದ ಮೇಲೆ ಹೋದಾಗ  ಕಾಣುವ ಗಿಡಗಳ ಹೂವು ಇತ್ಯಾದಿಗಳನ್ನು ತೆರೆದು ಚೆಲ್ಲುತ್ತ ....ಗುಬ್ಬಿ ಕಂಡರೆ  ಅದು ಹಾರಿದ ಗಿಡದ ಗೊಂಚಲಿನಲ್ಲಿ ಅದರ ಗೂಡು ಇದೆಯೇ ಎಂದು ನೋಡಿ...ಅದು ಮುಂದೆ ಎಲ್ಲಿ ಹೋಗುತ್ತದೆ ಎಂತ ಗಮನಿಸಿ...ವಿಶಾಲ ವಾದ ಬೆಟ್ಟದಲ್ಲಿ ಅದು ಮರೆಯದಾಗಲೇ ಗುಬ್ಬಿಯನ್ನು ಮರೆಯುವನ್ತೆಯಾಗುತಿತ್ತು. ಗುಯಂ  ಎಂದು ಎಲ್ಲಿ ಯಾದರು ಜೇನು ನೋಣ ದ ಝೇಂಕಾರ ಕೇಳಿದರೆ ಸಾಕು...ಜೇನು ಸಂಶೋಧನ ಕಾರ್ಯಕ್ರಮ ಸುರುವಾಗಿಯೇ ಬಿಡುತ್ತದೆ ...ಹೂವು ಬಿಟ್ಟಿರುವ ಮರಗಳಿಗೆ ಎಷ್ಟೊಂದು ಜೇನು ನೊಣಗಳು ಸುತ್ತು ಕೊಂಡಿರುತ್ತವೆ  ಅಂದರೆ  ಅಪ್ಪ- ಅಮ್ಮ ಬಂದು ಅಲ್ಲಿ ಇರುವುದು ಜೇನು ನೊಣ ಮಾತ್ರ; ಜೇನು ಖಂಡಿತ ಇಲ್ಲವೆಂದು ಸಂಶೋಧನ ಕಾರ್ಯಕ್ರಮಕ್ಕೆ ಷರಾ  ಬರದಾಗಲೇ ಒಂದು ಬಗೆಯ ಸಮಾಧಾನ.  ಅಂತು ಇಂತೂ ಬೆಳಗ್ಗಿನ ತಿಂಡಿ ಮುಗಿಸಿ ಅಪ್ಪ -ಅಮ್ಮ ತಮ್ಮ ರೈತತನದ  ಕೆಲಸಗಳಿಗೆ ನಡೆದರೆ ಮನೆಯ ಮುಂದಿನ ಧೂಳಿನಲ್ಲಿ ರಸ್ತೆಗಳನ್ನು ನಿರ್ಮಿಸಿ  ಬಾಳೆ  ಗಿಡದ ದಿಂಡಿನಿಂದ  ಗಾಡಿ ತಯಾರಿಸಿ ಓಡಿಸುತಿದ್ದೆ . ನಾನು ಪ್ಲಾಸ್ಟಿಕ್ ನ ಅಂತಹ ಆಟಿಕೆ ಗಳನ್ನು ನನ್ನ ಬಾಲ್ಯದ ದಿನಗಳಲ್ಲಿ ನೋಡಿಯೇ ಇರಲಿಲ್ಲ. ತೋಟಕ್ಕೆ ನೀರು  ಬಿಡುವ ಕೆಲಸವಂತೂ ಬದಲು  ಯಾವುತ್ತು ಮುಂದೆ . ನಾನೆ ಜಲಪಾತಗಳನ್ನು ನಿರ್ಮಿಸಿ ಅದರಲ್ಲೇ ಸ್ನಾನ ಮಾಡಿಸಿ...ಕೆಲವೊಮ್ಮೆ ಬಟ್ಟೆ ಧರಿಸಯೂ  ಕೆಲೋಮ್ಮೆ ಬೆತ್ತಲಾಗಿಯೂ   ತುಳಿಸಿ ಕಟ್ಟೆಗೆ ಭಾರಿ ಪೂಜೆ ಮಾಡಿದ ದಿನಗಳಿವೆ.   ಇನ್ನು ತೋಟಕ್ಕೆ ಹೋದರೆ ಸಾಕು - ಪೆರ್ಲ ಹಣ್ಣು, ಜಾಮ್ಬಲೇ ಹಣ್ಣ...ಹೆಸರು ತಿಳಿಯದ ಹಲವಾರು ಬಗೆಯ ಹಣ್ಣುಗಳನ್ನು ತಿನ್ನುತಿದ್ದೆ. ಮಧ್ಯಾಹ್ನ ಊಟದ ಬಳಿಕ  ಒಂದು ಸಮಾಧಾನದ ನಿದ್ರೆ ... ಆ ಬಳಿಕ ಮತ್ತೆ ... ಇಂತ ಕ್ರಿಯಾತ್ಮಕ ಚಟುವಟಿಕೆಗಳು  ಮುಗಿಸಿ ಮನೆ ಸೇರುವಾಗ , ಮತ್ತೆ ರೇಡಿಯೋ, " ಆಕಾಶವಾಣಿ ಧಾರವಾಡ...ಕೃಷಿ ರಂಗ ' ಅಂದಾಗಲೇ ಇಂದಿನ ಹಗಲ ಚಟುವಟಿಕೆ ಮುಗಿಯಿತು ಅಂತಾನೆ ಅರ್ಥ.  ಹೀಗೆ ಬರೆಯುತ್ತ ಹೋದರೆ ಇಂತ  ನನ್ನ ಬದುಕು ಹಳ್ಳಿಯಲ್ಲಿ ಎಷ್ಟೋ ಚೆನ್ನಾಗಿತ್ತು ಅಂತ ಈಗ ಅನಿಸುತ್ತದೆ.  

ಎಂಟನೇ  ವರ್ಷದಲ್ಲಿ  ಶಾಲೆ ಸೇರಿ.... ಅಂಗನವಾಡಿಯಂತ ಶಾಲೆ ಸೇರದೆ ಬಾಲ್ಯದ ದಿನಗಳನ್ನು ಪರಿಪೂರ್ಣವಾಗಿ ಕಳೆದೆ ಅನಿಸುತ್ತದೆ. ಆದರೆ ಇಂದಿನ ಮಕ್ಕಳು ಹೇಗಿದ್ದಾರೆ...? ಅವರ ನಗು ? ಅವರ ಸೃಜನಶೀಲತೆಗೆ ಏನಾಗಿದೆ ?
ಇತ್ಯಾದಿ ವಿವರಗಳೊಂದಿಗೆ ಮತ್ತೆ ಬರುತ್ತೇನೆ. ನವೆಂಬೆರ್ 14 -ಮಕ್ಕಳ ದಿನಾಚರಣೆಯ ನಿಮ್ಮಿತ್ತ ಒಂದು ವಿಚಾರಧಾರೆ..

Tuesday, November 6, 2012

ಊಟದ ಮೇಜಿನ ಮೇಲೆ ನಡೆಯುವ ಮದುವೆಗಳು

ಊಟಕ್ಕೆ ಕುಳಿತಾಗ ಬರಿ ಊಟ ಮಾಡುವ ಮಂದಿ ಸಿಗುವುದು ಬಹಳ ಕಷ್ಟ. ಒಂದೊಮ್ಮೆ ಯಾವುದೇ ವಿಷಯದ ಕುರಿತಾಗಿ, ಧನಾತ್ಮಕವಾಗಿ ಮಾತನಾಡಲು ಸಾಧ್ಯವಾಗಿರದಿದ್ದರು, ಊಟದ ರುಚಿಯ ಕುರಿತಾಗಿ ತೆಗಳಿಕೆಯ ಮಾತೊಂದಾದರು ಇರುತ್ತದೆ ಅನ್ನುವುದು ಬಹುಷ್ಯ ಓಂದು ಸತ್ಯ. ನಾನಂತು ಊಟಕ್ಕೆ ಅನ್ನ-ಸಾಂಬಾರುಗಳಿಗಿಂತ ಮುಖ್ಯವಾಗಿ ಮಾತು ಇಷ್ಟ ಪಡುತ್ತೇನೆ. ಏಕಾಂಗಿಯಾಗಿ ಮನೆಯಿಂದ ಆಫೀಸ್ ಸೇರಿದ ಮೇಲೆ, ಆಫೀಸ್ ನ ಕೆಲಸ ಮುಗಿಸಿ ನಗುತ್ತ, ಬೇಡವಾದ, ಆಸಕ್ತಿಯ, ಕುಹಕ, ಅಣಕಿಸುವ, ವಿರೋಧಾಭಾಸದ , ಭವಿಷ್ಯದ ಕುರಿತಾದ ಮಾತುಗಳು ಆಡಲು ಅವಕಾಶ ಸಿಗುವುದು ಆಫೀಸ್ ನ ಮಧ್ಯಾನ ಊಟದ  ಮೇಜು ಮಾತ್ರ. ಎಷ್ಟೋ ಪ್ರಯತ್ನ ಪಟ್ಟು ಓಂದು ಪಾರ್ಟಿ, ಅಥವಾ ಗೆಳೆಯರ ಬಳಗದ ಸೇರ್ಪಡೆ ಅಂದರು ಯಾರದರೊಬ್ಬರು ಕೈ ಕೊಡುವುದು ಅಥವಾ ಊಟದ ಕುರಿತಾಗಿ ಆರ್ಡರ್ ಮಾಡುವುದರಲ್ಲೇ ಸಮಯ ಕಳೆದು ಹೋಗುವುದರಿಂದ  ಆಫೀಸ್ ನ ಮಧ್ಯಾನ ಊಟದ ಟೇಬಲ್ ಓಂದು ರೀತಿಯಲ್ಲಿ ಬಹಳ ಮುಖ್ಯ ಅವಕಾಶವೇ.

ನಾವು ಏನೆಲ್ಲಾ ಮಾತಾಡುತ್ತೇವೆ ? ಅನ್ನುವ ವಿಷಯ ನನಗೆ ಇಚೆಗೆ ನಡೆದ ಕ್ವಿಜ್ ಕಾರ್ಯ ಕ್ರಮದ ನಂತರ ಗಮನಿಸಲು ಪ್ರಾರಂಭ ಮಾಡಿದ್ದೆ. ನಾನು ಕ್ವಿಜ್ ನಲ್ಲಿ ಭಾಗವಹಿಸಲು ನಮ್ಮ ಊಟದ ಟೇಬಲ್ ನ ಚರ್ಚೆಗಳೇ ಆಸಕ್ತಿಯನ್ನು ತಂದು ಕೊಟ್ಟಿತ್ತು ಅಂದರೆ ತಪ್ಪಾಗಲಾರದು. ನಾವು ಅಮೆರಿಕನ್ ಚುನಾವಣೆ, ಭಾರತದ G -ಹಗರಣಗಳು(CWG , 3G , Coal  G ....), IAC (India  Against  Corruption ), IFC (India  For  Corruption ನಾವು ಹಗರಣದಲ್ಲಿ ಬಳಲುತ್ತಿರುವವರಿಗೆ ಕೊಟ್ಟಿರುವ ಹೆಸರುಗಳು ), ಐಫೋನ್, ವಿಂಡೋಸ್- ಲಿನಕ್ಸ್, ಇತ್ತೆಚಿಗೆ ಬಂದ-ತಂದ ಮೊಬೈಲ್, ನಿನ್ನೆಯ ಕ್ರಿಕೆಟ್, ರಿಲೀಸ್ ಅದ ಹೊಸ ಸಿನೆಮಾ. ಕ್ರಿಕೆಟ್ ವಿಷಯ ಬಂದಾಗ ಮಾತ್ರ ನಾನು ಫುಲ್ ಸೈಲೆಂಟ್.!( ಮೂರೂ ಕೋಲು ಓಂದು ಬಾಲು ಎಂತ ದರಿದ್ರ ಆಟ ಅಂತ ಎಷ್ಟೋ ಸರಿ ನೋವು ನುಂಗಿ ಸುಮ್ಮನೆ ಕುಳಿತ್ತಿದ್ದೆ).  ಇವುಗಳ ಜೊತೆಗೆ, ಇತ್ತೇಚೆಗೆ ಬಂದ ಹುಡುಗಿ-ಅವಳ ನಡೆ-ನುಡಿ ಗಳ ಕುರಿತಾಗಿ ಒಂದಿಷ್ಟು ಜೋಕು...! ಲವ್ ವಿಷಯದಿಂದ ಪ್ರಾರಂಭವಾಗಿ ಜಾತಿ ಮತಗಳ ಮೇಲೆ ಹರಿಹಾಯ್ದು  ಮದುವೆ ಎಂಬಲ್ಲಿಗೆ ವಿಷಯ ನಿಲ್ಲಿಸಿ ಸುತ್ತಲು ಕಣ್ಣು ಹರಳಿಸಿ,ಬದಲಾಗದ ಸಾಮಾಜಿಕ ನಿಯಮಗಳಿಗೆ ಒಂದಿಷ್ಟು ಛಿ ಥೂ ಅಂದು ಕೊಂಡು ನಿರ್ಗಮಿಸಿದ ದಿನಗಳು ಎಷ್ಟೋ ಇದ್ದಾವೆ.

 ನಮ್ಮ ಸಮಾಜದ  ಕೆಲವು ನಿಯಮಗಳು ಉತ್ತರವಿಲ್ಲದವುಗಳು. ಶಾಲೆಗಳಲ್ಲಿ ಉಚ್ಚ ಆದರ್ಶಗಳ ಬೋಧನೆ; ನೈಜ ಸಮಾಜದಲ್ಲಿ ನೀಚ ಬಾಳು. ಇದು ಯಾರೋ ನಮ್ಮ ಮೇಲೆ ಹೇರಿದ್ದರೋ ಅಥವಾ ನಾವೇ ಮಾಡಿಕೊಂಡ  ದಾರಿಯೋ ತಿಳಿಯದು. ನಾನು (ನೀವು ಕೂಡ ಇರಬಹುದು) ಹಾಯ್ ಸ್ಕೂಲ್ ಸೇರಿದಾಗ ಎಂಥೆಂತ ನಿಬಂಧಗಳನ್ನು(essay) ಬರೆದಿದ್ದೆ..! 'ಜಾತ್ಯತೀತತೆ ' ಬರೆಯುವಾಗ  ನಾನು ಜಾತಿಯ ವಿರುದ್ಧ ವಾಗಿ ಬರೆದಿದ್ದೆ; ' ವರದಕ್ಷಿಣೆ' ಬರೆಯುವಾಗ  ಅದೊಂದು ಮಹಾ ಪಾಪ.... ವರದಕ್ಷಿಣೆ ಕೇಳುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಅಂತಲೂ ಬರೆದಿದ್ದೆ. ಇನ್ನು ಸರ್ವಜ್ಞ , ಪುರಂದರ ದಾಸ, ಕನದಾಸರ ಕುರಿತಾಗಿ ಬರೆಯುವಂತ 10 ಮಾರ್ಕ್ ನ ಪ್ರಶ್ನೆಗಳಿಗೂ ನಾನು ಯಾವತ್ತು ತಪ್ಪು ಉತ್ತರ ಬರೆದಿರಲಿಲ್ಲ. ಕುವೆಂಪು 'ವಿಶ್ವಮಾನವ ಸಂದೇಶ' ವಾರೆ ವ್ಹಾ...!  ಹೇಳುವುದೇನು?
ಇವತ್ತು ಅಂತ ಅದ್ಭುತ ಕ್ಲಾಸ್ ಗಳಲ್ಲಿ  ಉಚ್ಚ ಅಂಕಗಳು ಪಡೆದು, ಜಾತಿ-ಕನ್ನಡ  ಅಂತ  ಕೃಪಾಂಕದಿಂದ ಇಂಜಿನಿಯರಿಂಗ್ ಪಡೆದು , ವಿಶ್ವೆಶ್ವರರಂತೆ ಸಾಧನೆಯ  ದಾರಿ ತುಳಿಯುವುದಾಗಿ  ಊರು -ಮನೆಗಳಲ್ಲಿ ಅಂತಹ ನಂಬಿಕೆ ಹುಟ್ಟಿಸಿ, 5 ಅಂಕಿಗಳ  ಪಗಾರ ಪಡೆದು ಊಟದ  ಟೇಬಲ್ ಮೇಲೆ ನಾವು ಮಾತನಾಡುವ  ಜಾತ್ಯತೀತತೆ  ಎಂಥಹದು  ಗೊತ್ತೇ?
ಊಟದ ಟೇಬಲ್ ನ ಕೆಲವು ಚರ್ಚೆಗಳು ಹೀಗಿವೆ : ಒಬ್ಬನ ಮಾತು -" ನಾನು  ಅವಳನ್ನು ಇಷ್ಟ ಪಡುತ್ತೇನೆ, ಆದರೆ ಅವಳು ನಮ್ಮ ಜಾತಿಯವಳು ಅಲ್ಲ. ನಮ್ಮ ಮನೆಯಲ್ಲಿ ಒಪ್ಪಲು ಸಾಧ್ಯವೇ ಇಲ್ಲ ...!...ಮನೆಯಲ್ಲಿ ಓದದಿದ್ದರೂ ಪರವಾಗಿಲ್ಲ ...ಜಾತಕ ಸರಿಯಿಲ್ಲದಿದ್ದರೂ ಪರವಾಗಿಲ್ಲ  ಕಾಸ್ಟ ಇಸ್ ಮಸ್ಟ್..!".
ಇನ್ನೊಬ್ಬನ ಮಾತು: ' ನಮ್ಮ ಮನೆಯಲ್ಲಿ ಜಾತಿಯ ಬಗ್ಗೆ ಅಂತ ಸಮಸ್ಯೆ ಇಲ್ಲ . ಆದರೆ ಹುಡುಗಿ ಮಾತ್ರ ನಮ್ಮ ಜಾತಿಗಿಂತ ಮೇಲು ಜಾತಿಯವಳಾಗಿರಬೇಕು. ಇಲ್ಲಾಂದರೆ ಒಪ್ಪುವುದಿಲ್ಲ.."
ಮತ್ತೊಬ್ಬನ ಮಾತು :' ಆದರೆ, ನನಗಂತೂ ಇಂತ ಮದುವೆಯಲ್ಲಿ ಇಷ್ಟನೇ ಇಲ್ಲ .... ನಾವೇನಾದರೂ ಲವ್  ಮದುವೆ  ಆದರೆ ಅದು ನಷ್ಟವೇ...! ಯಾಕಂದರೆ, ನೋಡು....ನನ್ನ ತಂಗಿ ಮದುವೆಗೆ ನಮ್ಮ ಮನೆಯಲ್ಲಿ ಬರೋಬರಿ 10 ಲಕ್ಷ ವರದಕ್ಷಿಣೆ ಕೊಟ್ಟಿದ್ದೇವೆ.ಈಗ  ನನ್ನ ಮದುವೆಯಲ್ಲಿ ಅದನ್ನು ರಿಟರ್ನ್ ತರಬೇಕು. ಸಮಾಜದಲ್ಲಿ ಇದು ಒಂತರ ಕೊಡುವ-ತೆಗೆದು ಕೊಳ್ಳುವ  ವಿಚಾರ..ಅದಕ್ಕೆಲ್ಲ್ ತಲೆ ಯಾಕೆ ಕೊಡಬೇಕು....ಮಾವ ಹೇಗೋ ಕಾರ್  ಕೊಡ್ತಾನೆ...!"

 ಹಾಗೆಂದು ಎಲ್ಲರೂ ಇಂಥ ಮಾತುಗಳನ್ನು ಹೇಳುತ್ತಾರೆ ಅಂತಲ್ಲ. "ಜಾತಿ ಮತಗಳಿಗಿಂತಲು ಸುಶಿಕ್ಷಿತ ಸಂಗಾತಿ, ಅರ್ಥ ಮಾಡಿಕೊಳ್ಳುವ ಸಂಗಾತಿ, ಸಮಾನ ಆಸಕ್ತಿ ಹಾಗು ಬದುಕಿನ ಕುರಿತಾಗಿ ಸಮಾನ ವಿಚಾರ ಧಾರೆ ಹೊಂದಿರುವ ಸಂಗಾತಿ ಇದ್ದಾರೆ ಎಷ್ಟು ಒಳ್ಳೇದು..! ದೂರದ ಉರಿನಲ್ಲಿ ಬದುಕುವ ನಮಗೆ ಸ್ವಂತ ಊರಿನ ಸಂಪ್ರದಾಯ ಗಳಿಗಿಂತಲೂ ಆಯಾ ಪ್ರದೇಶದಲ್ಲಿ ಹೊಂದಿಕೊಂಡು ಬದುಕುವುದೇ ಅವಶ್ಯಕವಾಗುತ್ತದೆ. ಜಾತಿಯೇ ಮುಖ್ಯವೆಂದು, ನಮ್ಮ ಪರಿಸರದ ಅರ್ಥವೇ ಆಗದ ಯಾರೊಬ್ಬರನ್ನು ಕಟ್ಟಿಕೊಳ್ಳುವುದು  ಸುಲಭವೇ ? ಇದೆಲ್ಲ ಹೇಗೆ ತಿಳಿಸುವುದು? ಮದುವೆ  ಬಗ್ಗೆ ಮಾತನಾಡಿದರೆ ತಪ್ಪಾಗಿ ಅರ್ಥೈಸುವ ಸಮಾಜ ನಮ್ಮದು. ಜಾತಿ-ಮತ ಕಟ್ಟಳೇ  ಮೀರಿದರೆ ಬುದ್ಧಿಹೀನರಂತೆ ನಮ್ಮನ್ನು ನೋಡಿಕೊಲ್ಲಗುತ್ತಾದೆ.  ಅದಕ್ಕಾಗಿ ಹಣೆಬರಹ ನಂಬಿಕೆಯೇ  ಬಹಳ ಮುಖ್ಯ " ಎಂತೆಲ್ಲ ತೋಡಿ ಕೊಂಡವರು  ಇದ್ದಾರೆ. ಇನ್ನೂ  ಮರ್ಡರ್ ನಂತಹ ಮಹಾನ್ ಕಾಮುಕ ಚಿತ್ರವನ್ನು ಕಣ್ಣು ಮಿಟಿಕಿಸದೇ  ಥೀಯೇಟರ್  ನಲ್ಲಿ ನೋಡಿ, ಮದುವೆ  ಬಗ್ಗೆ ಮಾತನಾಡುವಾಗ ಊಟದ ಟೇಬಲ್ ನಲ್ಲಿ ಸಮಾಜವೇ ಕೆಟ್ಟು ಹೋಗಿದೆ...ಧರ್ಮ ಹಾಳಾಗಿದೆ...ಇವರೆಲ್ಲ ಸಂಸ್ಕೃತಿ ಇಲ್ಲದವರು ಅಂತ ಹೇಳಿ ಹೋದವರು ಇದ್ದಾರೆ.

ನಾನು ನಂಬಿದ ಸಾಹಿತ್ಯ ಸತ್ಯವೇ ? ನಂಬಿದ ವ್ಯಕ್ತಿಗಳು ಸತ್ಯವೇ ? ಸರ್ವಜ್ನ ನಿಂದ  ಹಿಡಿದು ಎಲ್ಲ ಧರ್ಮ ಸುಧಾರಕರು, ಕವಿಗಳು ಜಾತ್ಯತೀತ  ನಿಲುವು ಪ್ರಕಟಿಸಿದ್ದಾರೆ. ' ಜ್ಯೋತಿ ತಾ ಹಿನವೇ ? , ' ಕುಲ ಕುಲ ವೆಂದು....', ಎಂತ ವಾಕ್ಯಗಳ ರಚನೆ ಕೇವಲ ಸಂಗಿತಕ್ಕಾಗಿಯೇ ?  ಹೋಗಲಿ  ಬಿಡಿ - ಹೊಸಕಾಲದ- ಅಧುನಿಕ ಕಾಲದ ವ್ಯಕ್ತಿ  ಮಾನ್ಯ ಸಚಿವ  ನಂದನ ನಿಲಕೆಣಿ  ತಮ್ಮ 'ಇಮ್ಯಾಜಿನ್  ಇಂಡಿಯ ' ಪುಸ್ತಕದಲ್ಲಿ ಕೂಡ ಜಾತಿಯೇ  ನಮ್ಮ ಭಾರತಿಯ ಭವಿಷ್ಯಕ್ಕೆ  ದುರಂತ ಅನ್ನುವಂತೆ ವರ್ಣಿಸಿದ್ದಾರೆ. ಇವರೆಲ್ಲ ಸುಮ್ಮನೆ ಬರಿತಾರೆಯೇ ...!  ಉಡುಪಿಯ ಮಠದಲ್ಲಿ ನಡೆದ  ಹಲವಾರು ಕಾರ್ಯಕ್ರಮಗಳನ್ನು ನೋಡಿದ್ದೇನೆ. ಅಲ್ಲಿ 'ಸರ್ವೇಜನ ಸುಖಿನೋ ಭವಂತು ...! ವಸುದೇವ ಕುಟುಂಬ' ಅಂತೆಲ್ಲ ವರ್ಣಿಸುವ ವಾಕ್ಯ ಗಳು ಕೇವಲ ಕೇಳುಗರ  ಮನವೋಲಿಸುವ ಮೋಹಕ ಮಾತುಗಳೇ? ಇಲ್ಲದೇ ಹೋದರೆ ವೇದಗಳಲಿಲ್ಲದ, ಧರ್ಮಗೃಂಥ ಗಳಿಲ್ಲದ, ಬುದ್ಧಿಜೀವಿಗಳೆಲ್ಲ ಒಪ್ಪದ  ಜಾತಿಯನ್ನು ಸಮ್ಮತಿಸಿ  ಅಂತರ್ಜಾತೀಯ ವಿವಾಹಗಳು ನಿಶಿದ್ಧವೆಂದು ಪಂಡಿತರಾದ ವಿಶ್ವತೀರ್ಥರಂತವರು ಹೇಳಬಹುದೇ?
Oh ...Sorry  education  destroyed  me ...!!!!!!!!!!!! :)

Sunday, October 28, 2012

ಮದುವೆ -ಎರಡು ಕುಟುಂಬಗಳ ನಡುವೆಯೋ, ಜಾತಿಗಳ ನಡುವೆಯೋ ?

ಎಲ್ಲರು ನನ್ನಂತೆ ಅದೃಷ್ಟರಲ್ಲ. ಆ ಹಳ್ಳಿಯಿಂದ ಸಾಗುತ್ತಾ...ಓದುತ್ತ...ಸಾಗುತ್ತಾ... ಓದುತ್ತ ಇಂದು ಏರ್ ಕಂಡೀಶನ್ ರೂಂ ಗೆ ಬಂದು ಸೇರಿದೆ. ಬಹುಶ ಅದು ದೊಡ್ಡ ಸಾಧನೆಯೇ? ಗೊತ್ತಿಲ್ಲ. ಆದರೆ, ಹಳ್ಳಿಯಿಂದ ಇಲ್ಲಿಯ ತನಕ ನನ್ನ ಬದುಕಿನಲ್ಲಿ ನಡೆದ ಬದಲಾವಣೆ ಇಷ್ಟೇ. ಆದರೆ, ' ಸಾಗುತ್ತಾ...ಓದುತ್ತ...ಸಾಗುತ್ತಾ... ಓದುತ್ತ' ನಡೆದಿರುವ ಹಂತದಲ್ಲಿ ನನ್ನ ಜೊತೆಯಲ್ಲಿ ಎಷ್ಟೋ ಮಂದಿ ಕಳೆದು ಹೋಗಿದ್ದಾರೆ; ಎಷ್ಟೋ ಮಂದಿ ಅಲ್ಲಲ್ಲಿ ಸೇರಿ ಕೊಂಡಿದ್ದಾರೆ. ಸಾಮಾನ್ಯವಾಗಿ ನಮಗೆ ನೆನಪಿರುವುದು ಕೊನೆಯಲ್ಲಿ ಜೊತೆ ಇದ್ದವರು ಅಥವಾ  ಪ್ರೈಮರಿ ಸ್ಕೂಲ್ ನಲ್ಲಿ ಭೇಟಿಯಾದವರು. ಉಳಿದವರ ಬಗ್ಗೆ ಗೊತ್ತಿಲ್ಲ ಅಂತ ಅಲ್ಲ; ಆದರೆ ಹೇಳಿ ಕೊಳ್ಳುವಂತ ಅಟ್ಯಾಚ್ಮೆಂಟ್ ಇಲ್ಲ.

ಹೀಗೆ ಬಂದ ಜೀವನದ ಒಂದು ಘಟದಲ್ಲಿ,  ಸಂಜಯ  ೧೦೦ ಕ್ಕೆ ೩೫ ಮಾರ್ಕ್ಸ್ ಪಡೆಯಲಾಗದೆ  ಪ್ರೈಮರಿ- ಹೈ ಸ್ಕೂಲ್ ಮಧ್ಯೆ ಯಿದ್ದ ಬ್ರಿಜ್ ಕೆಳೆಗೆ ಬಿದ್ದು ಹೋಗಿದ್ದ. ಶಾಲೆ, ಶಿಕ್ಷಣ ಅನ್ನುವ ವಿಷಯದಿಂದ ನಿರ್ಗಮಿಸಿದ್ದ ನಾದರು, ವ್ಯವಹಾರಿಕ ಜ್ಞಾನ ಅವನಿಗೆ ಚೆನ್ನಾಗಿಯೇ ಇತ್ತು. ಅಪ್ಪನ ಅಡಿಕೆ ತೋಟ ಕಡಿಮೆಯೇನು ಇರಲಿಲ್ಲ. ಆ ವಿಚಾರದಲ್ಲಿ ಹೇಳುವುದಾದರೆ ಅವನು ನನಗಿಂತ ೯ ವರ್ಷಗಳಷ್ಟು ಮೊದಲು ಗಳಿಕೆಯಲ್ಲಿ ತೊಡಗಿದ್ದ. ತುಂಬಾ ಹುರುಪಿನ ವಿನಯ ಹುಡುಗ ಸಂಜಯ ಶೈಕ್ಷಣಿಕ  ಬದುಕಿಂದ ದೂರ ಸರಿದರು ನಾನು ಊರಿಗೆ ಹೋಗುವಾಗ/ಬರುವಾಗ ದಾರಿಯಲ್ಲಿ/ಬಸ್ಸಲ್ಲಿ ಅವಾಗವಾಗ ಸಿಗುತಿದ್ದ . ನಮ್ಮಿಬ್ಬರ ನಡುವೆ ಅಂತ ಹೇಳಿ ಕೊಳ್ಳುವ ಗೆಳೆತನವು ಅಲ್ಲ ಹಾಗಂತ ಮಾತನಾಡಿಸದೆ, ಮಾತನಾಡದೆ  ಇರುವಂತ ಸಂಬಂಧವು ಅಲ್ಲ.

ಮೊನ್ನೆ ನವರಾತ್ರಿ ಹಬ್ಬಕ್ಕಾಗಿ ನಾನು ಊರಿಗೆ ಹೋಗುತಿದ್ದಾಗ  ಭೇಟಿಯಾಗಿದ್ದ. ಅವನು ನವರಾತ್ರಿ ಉತ್ಸವಕ್ಕಾಗಿ ಸಾಮಾನು ಖರೀದಿಸಲು ಮಾರ್ಕೆಟ್ ಗೆ ಬಂದಿದ್ದ. ಆದರೆ ಅವನ ಬಾಯಿಯಲ್ಲಿ 'ಉತ್ಸವ'ದ ಕುರಿತಾದ ಮಾತುಗಳಿದ್ದವು ಹೊರತು ಮುಖದಲ್ಲಿ 'ಉತ್ಸಾಹ' ಮಾತ್ರ ಇರಲಿಲ್ಲ. ನಾನು ಸ್ವಲ್ಪ, ಆಶ್ಚರ್ಯಚಕಿತನಾಗಿ ನೋಡಿ, ಹಣ ಏನಾದ್ರು ಸಮಸ್ಯೆ ಇರಬಹುದೇ ಅಂದು ಕೊಂಡು, 'ಹೇಯ್, ಸಂಜಯ ದುಡ್ಡು ಏನಾದ್ರು ಬೇಕಾ ? ಏನೋ ಟೆನ್ಶನ್ ಮಾಡಿಕೊಂಡಿದ್ದಿಯಲ್ಲ..?' . ಆತನ ಉತ್ತರವು ಅಷ್ಟೇ ಸರಾಗ ವಾಗಿ, ' ಇಲ್ಲಯ್ಯ, ಹಬ್ಬ ಹೇಗೆ ನಡಿಬಹುದು ಅಂತ ವಿಚಾರ ಮಾಡ್ತಾ ಇದ್ದೆ.... ಇರಲಿ, ನೀನು ಇಲ್ಲೇ ಇರ್ತಿಯಲ್ಲ, ನಾನು ಎರಡು ಪ್ಯಾಕ್ ಹಾಲು ತರ್ತೇನೆ' ಎಂದು ಹೇಳಿ ನನಗೆ ಅವನ ಸಾಮಾನು ಚೀಲ ಕಾಯಲು ಹೇಳಿ  ಹಾಲು ತರಲು ಸಮೀಪದ ಅಂಗಡಿಗೆ ಹೋದ.

ಅವನೊಬ್ಬ ಹಳ್ಳಿಯ ಹುಡುಗ. ಹಳ್ಳಿಗಳಲ್ಲಿ ಕುಡಿ ಮೀಸೆ ಕಂಡರೆ ಸಾಕು ಮದುವೆ ನಡೆಯಲೇ ಬೇಕು. ಹೀಗಿರುವಾಗ ನಾನು engeering ನ ಮೂರನೇ ವರ್ಷದಲ್ಲಿದ್ದಗಲೇ ಅವನ ಮದುವೆ ನಡೆದಿತ್ತು. ಆದರೆ ಅವನ ಮದುವೆ ಸ್ವಲ್ಪ ವಿಚಿತ್ರ. ಅವನು ಇಂದಿನ ಜಾತಿ ಪದ್ಧತಿಯಲ್ಲಿ ಉತ್ತಮ ಜಾತಿಗೆ ಸೇರಿದವನು.ಅವನು ತನ್ನ ಜಾತಿ ಉತ್ತಮತೆಯನ್ನು ನನ್ನಲ್ಲಿ ಯಾವತ್ತೂ ಹೇಳಿಕೊಂಡಿರದಿದ್ದರೂ ಅವನ ಪುರ್ವಾಪರಗಳು ನನಗೆ ಗೊತ್ತಿದ್ದವು. ಹೀಗಾಗಿ ನಾವೆಲ್ಲ ಆ ಪ್ರದೇಶದ ಚೌಕಟ್ಟಿನಲ್ಲಿ ನಡೆಯ ಬೇಕಾದ ಸಹಜವಾಗಿ ಪಾಲಿಸಿಕೊಂಡು ಬಂದ ನಿಯಮಗಳು- ಮಡಿ ಮೈಲಿಗೆ ಪಾಲಿಸಿ ಕೊಂಡೆ ಬಂದಿದ್ದೆವು. ದೂರದೃಷ್ಟ ವಶಾತ್ ಅವನಿಗೆ ಅವನ ಜಾತಿಯಲ್ಲಿ ಹುಡುಗಿಯೇ ಸಿಗಲಿಲ್ಲ. ಸೆಕ್ಸ್ ರೇಶಿಯೋ ಉಲ್ಟಾ ಹೊಡೆದಿರುವಾಗ ಯಾರಿಗೆ ತಾನೇ ಹೆಣ್ಣು? ಓದದೇ ಇರುವ ಇವನಿಗಂತೂ ಅಸಾಧ್ಯವೇ ಆಗಿ ಹೋಗಿತ್ತು. ಅಂತು- ಇಂತೂ  ತಂದೆ-ತಾಯಿಗೆ ಒಪ್ಪಿಸಿ ಬೇರೆ ಜಾತಿಯ ಹೆಣ್ಣು ಆದರು  ಸರಿ ಎಂದು,  ಕೆಳವರ್ಗದ (ಹಾಗೆ ಹೇಳಲು ಮನಸಿಲ್ಲ. ಆದರೆ ಕತೆ? ) ಹೆಣ್ಣು ಮದುವೆ ಯಾದ. ಇಂತ ಮದುವೆ ಸಮಾಜದಲ್ಲಿ ಉತ್ಪ್ರೇಕ್ಷೆಗೆ ಒಳಗಾಗುವುದರಿಂದ ಅವನು ಬೇರೆಳನಿಕೆಯಷ್ಟು ಬಂಧು-ಬಾಂಧವರನ್ನು ಕರೆಸಿ ಸಪ್ತಪದಿ ತುಳಿದಿದ್ದ. ಅವನ ಮದುವೆ ನಡೆದಿದ್ದು ನನಗೂ ಗೊತ್ತಿರಲಿಲ್ಲ. ಅಂತರ್ಜಾತೀಯ ವಿವಾಹವೊಂದು ನಡೆದಿದೆ ಎಂದು ಊರಿಗೆ ಹೋದಾಗ ನನಗೆ ಯಾರೋ ಹೇಳಿದ್ದರು.  ಅವನ ತಂದೆ-ತಾಯಿ ಮದುವೆ ಸಮಸ್ಯೆ ಅರಿತಿದ್ದರಿಂದ ಮಗನ ಬಗ್ಗೆ, ಸೊಸೆಯ ಬಗ್ಗೆ ಗೌರವನ್ನು ಹೊಂದಿ ಒಳ್ಳೆಯ ಸಂಸಾರ ಸಾಗಿಸುತ್ತಿದರು. ಆದರೆ  ಅವನ ಬದುಕು ಹಬ್ಬ-ಹರಿದಿನಗಳಲ್ಲಿ  ನಾಯಿಗೂ ಬೇಡ ಅನಿಸುವ ಕತೆ ಅವನ ಬಾಯಿಂದಲೇ ಕೇಳಿ.

ಬಸ್ಸಿನಲ್ಲಿ ಕುಳಿತ ಕೂಡಲೇ(ನಾವಿಬ್ಬರು ಒಂದೇ ಕಡೆ ಹೋಗುವವರು)  ಏನು ಕತೆ ಎಂದು ವಿಚಾರಿಸಿದಾಗ ಅವನು ಹೇಳಿದ ಕತೆ ಹೀಗಿತ್ತು: " ನಾನು ಮದುವೆ ಯಾದುದ್ದು  ಗೊತಲ್ಲ?, ಬೇರೆ ಜಾತಿ ಹುಡುಗಿ..? ಸಂಸಾರ ಚೆನ್ನಾಗಿದೆ ..." ಹೀಗೆ ಮುಂದುವರಿಯುವಾಗಲೇ ನನಗೆ ಏನು ಗೊತ್ತಿಲ್ಲ ಅನ್ನುವ ರೀತಿಯಲ್ಲಿ " ಮಗಾ, ಹಳ್ಳಿಯಲ್ಲಿದ್ದು ಲವ್  ಮಾಡಿದೆನೋ? ಈಗ ಅಪ್ಪ- ಅಮ್ಮ ?". ಅವನು ಮತ್ತೆ,  ಹುಡುಗಿಯರು ಜಾತಿಯಲ್ಲಿ ಸಿಕ್ತಾ ಇಲ್ಲ.....ಅಪ್ಪ ಅಮ್ಮ ಒಪ್ಪಿದರು ...ಯಾರಿಗೂ ಕರೆಯಲಿಲ್ಲ ...ಹೀಗೆ ನನಗೆ ಗೊತ್ತಿರುವ ವಿಷಯಗಳನ್ನೂ ಹೇಳಿ "....ಹಬ್ಬಗಿಬ್ಬ ಬಂದರೆ ಬಹಳ ಜನ ಅಕ್ಕಂದಿರು, ಸಂಬಂಧಿಕರು ಬರುತ್ತಾರೆ... ಹೇಳಿ ಕೇಳಿ ನಾವೆಲ್ಲ ದೇವರ ಕೆಲಸಗಳಲ್ಲಿ ಇರುವುದೇ ಹೆಚ್ಚು ನೋಡು.....ಆದರೆ, ನನ್ನ ಹೆಂಡತಿ ಕೆಳವರ್ಗದಳು ಅನ್ನುವ ಕಾರಣಕ್ಕಾಗಿ ಕುಟುಂಬದ ಮುಖ್ಯ ಪೂಜೆ-ಭೋಜನಾದಿಗಳಿಗೆ ನಮಗೆ ಪ್ರವೇಶ ಇರುವುದಿಲ್ಲ. ನಾನು ಮದುವೆ ಆದಮೇಲೆ, ಬೇರೆ ಯಾರಾದರು ಇದ್ದರೆ ಮನೆಯ ದೇವರ ಕೋಣೆ ಪ್ರವೇಶ ಮಾಡುವುದೇ ಇಲ್ಲ. ಹೀಗಾಗಿ ನಮ್ಮ ಮನೆಯಲ್ಲಿ ನಾನೇ ಬಾಹ್ಯ ನಾಗಿ ಕಾಣುವ ದಿನ ಬಂತಲ್ಲ ಅಂತ ಸ್ವಲ್ಪ ದುಃಖ ಆಗ್ತಾ ಇದೆ " ಹೇಳುತ್ತಲೇ ಓಂದು ಕಣ್ಣಿನ ಹನಿಯನ್ನು ವರೆಸಿ ಕೈ ಬೆರಳನ್ನು ಬಸ್ಸಿನ ಕನ್ನಡಿಗೆ ಹೊರೆಸಿದ. ನಾನು, ಇಂತದೊಂದು ದುಃಖಿತ ವಿಷಯವೇ? ಆಶ್ಚರ್ಯ ಪಟ್ಟು, " ಅವರು ಹಾಗೆ ಮಾಡಿದ್ರೆ...ನೀನು ಯಾಕೆ ತಲೆ ಕೆಡಿಸಿ ಕೊಳ್ತಿಯಾ?  ದೇವರಿಗೆ ಎಲ್ಲ ತಿಳಿಯುತ್ತೆ" ಎಂದು ಸಮಾಧಾನ ಪಡಿಸಲು ಹೊರಟಾಗ  ಮತ್ತೆ ಮುಂದೆ ವರಿಸಿದ ," ನನಗೆ ಏನು ಅಂತ ಸಮಸ್ಯೆ ಇಲ್ಲ... ಆದರೆ, ಅವಳು(ಹೆಂಡತಿ) ಬಹಳ ಮನಸ್ಸಿಗೆ ಹಚ್ಚಿಕೊಳ್ಳುತ್ತಾಳೆ... ಅವಳು ತಿಂಗಳು ಇದ್ದಾಳೆ (ಹಳ್ಳಿ ಭಾಷೆ)...ಹೊಟ್ಟೆಯಲ್ಲಿನ ಮಗುವಿಗೂ  ತೊಂದರೆ ಅಲ್ವಾ? ಇವತ್ತು ಹೋಗಿ ಹೇಗೆ ಸಮಾಧಾನ ಮಾಡ್ಲಿ ಅಂತ ಯೋಚಿಸ್ತಾ ಇದ್ದೇನೆ". ನಾನು ಬಹಳ ಹೊತ್ತು ಮೌನ ವಹಿಸಿದೆ.
ಕೊನೆಗೆ ಅವನಿಗೆ ಹೇಳಿ ಕಳಿಸಿದ್ದು ಹೀಗೆ: " ನೋಡು, ಯಾರು ಮೇಲು ಕೀಳು ಅಂತ ಇರಲ್ಲ. ಇವೆಲ್ಲ ಜನ ಮಾಡಿದ ಪದ್ಧತಿ. ಉಡುಪಿಯಲ್ಲಿನ ಕನಕನ ಕಿಂಡಿಯ ಕತೆ ಗೊತ್ತಲ್ಲ...!?. ಕೆಳವರ್ಗದವನಾಗಿದ್ದ ಕನಕದಾಸರಿಗೆ ಶ್ರೀ ಕೃಷ್ಣಾ ದರ್ಶನ ಭಾಗ್ಯ ನೀಡಿಲ್ಲವೇ? " . ಆತ ಒಮ್ಮೇ ಸಂತೋಷದ ನಗೆ ಚೆಲ್ಲಿದ್ದ. ಅವನು ನವರಾತ್ರಿ ಹೇಗೆ ಕಳೆದನು ಗೊತ್ತಿಲ್ಲ. ಆದರೆ ನಾನು ಮಾತ್ರ 'ನವರಾತ್ರಿ'  ಕಳೆದೂ ನಂತರದ 'ರಾತ್ರಿ'ಗಳಲ್ಲೂ ಅವನ್ನ ದುಃಖದ ಕುರಿತಾಗಿ ವಿಮರ್ಶೆ ಮಾಡುತ್ತಲಿದ್ದೇನೆ. ದೇವರೇ ಗತಿ.
'ಮದುವೆ ಕೇವಲ ಗಂಡು ಹೆಣ್ಣಿನ ನಡುವೆ ಅಲ್ಲ; ಎರಡು ಕುಟುಂಬಗಳ ನಡುವೆ ' ಅನ್ನುವ ನಮ್ಮವರು ಯಾವಾಗ '...ಎರಡು ಜಾತಿಗಳ ನಡುವೆ' ಎಂಬುದನ್ನೂ ಸೇರಿಸುತ್ತರೋ ಗೊತ್ತಿಲ್ಲ? ಆದರೆ ಅದು ಇಂದಿನ ಅನಿವಾರ್ಯತೆ ಅಂತು ಹೌದು.