Saturday, October 19, 2013

ಬ್ಯಾಚುಲರ್ ಜೀವನ ಮತ್ತು ಸಮಾಜ.

ಇದೊಂದು ರೀತಿಯಲ್ಲಿ ಹಾಸ್ಯಮಯ ಲೇಖನವಾದರು ಕೆಲವು ಘಟನೆಗಳು, ನಾನು ಅನುಭವಿಸಿದ ನೋವು ಇದರಲ್ಲಿದೆ. ಇದು ನನ್ನ ಹಾಗೆ, ನೀವು ಕೂಡ ಇಂಥ ಘಟನೆಗಳನ್ನು ಅನುಭವಿಸಿರುತ್ತಿರಿ. ಆದರೆ ಅದೆಲ್ಲ ಸಾಮಾನ್ಯ ಸಂಗತಿಯೆಂದು ಮರೆತು ಬಿಡುತ್ತಿರಿ ಅಷ್ಟೇ.

ಪ್ರತಿಯೊಬ್ಬ ಗಂಡು ಹುಟ್ಟಿದ ದಿನದಿಂದ ಮದುವೆಯ ೭ ನೇ ಹೆಜ್ಜೆ ಹಾಕುವವರೆಗೂ  ಬ್ಯಾಚುಲರ್ ಆಗಿರುತ್ತಾನೆ. ಆದರೆ, ಈ 'ಬ್ಯಾಚುಲರ್' ಪದಕ್ಕೆ ವಿಶೇಷ ಅರ್ಥ ಹಾಗೂ ಕಲ್ಪನೆಗಳು, ನೋವುಗಳು ಅನುಭವಿಸ ಬೇಕಾಗಿಬರುವುದು ಕಾಲೇಜು ಮುಗಿಸಿ, ಎಲ್ಲೋ ನೌಕರಿಯಲ್ಲಿದ್ದು ಮದುವೆಯಾಗುವರೆಗಿನ ದಿನಗಳಲ್ಲಿ ಮಾತ್ರ. ಇದೆ ದಿನಗಳಲ್ಲಿ ' ಎಲಿಜಿಬಲ್ ಬ್ಯಾಚುಲರ್' ಎಂಬ ಪದಗಳು ನಮ್ಮ ಬಗ್ಗೆ ತಿಳಿದಿರುವ  ಗೆಳೆಯರಿಂದ, ಹಿರಿಯ ಸಹದ್ಯೋಗಿಗಳಿಂದ,ಕುಟುಂಬದ ಹಿರಿಯರಿಂದ ಅಲ್ಲಿ-ಇಲ್ಲಿ ಪ್ರಸಂಶೆಗೆ ಒಳಪಡುತ್ತಲೇ ಇರುತ್ತದೆ.

 'ಎಲಿಜಿಬಲ್ ಬ್ಯಾಚುಲರ್' ಎಂದಾಗ ಸಿಗುವ ಸಂತೋಷ ಅದೆಷ್ಟೆಂದರೆ, ಕಾಲ್ಪನಿಕ ಲೋಕದ ಕವಿ ಮಹಾಶಯರು ವರ್ಣಿಸಿದ ತಿಲೋತ್ತಮೆ, ಉರ್ವಸಿಯಂತ  ಗಂಧರ್ವ ಕನ್ಯೆ ನಮಗೆ ಇವರು ಹುಡುಕುತ್ತಿದ್ದಾರೆ ಎನ್ನುವಷ್ಟು. ಅದಲ್ಲದೆ ಬ್ಯಾಚುಲರ್  ಜೀವನದಲ್ಲಿ  ಸಂತೋಷ ಪಡುವ ಹಲವು ವಿಷಯಗಳಿವೆ- ಆಗತಾನೆ ನೌಕರಿಯಿಂದ ಸಿಕ್ಕ ಹಣ, ಯಾರ ಕಟ್ಟಳೆಯೂ ಇಲ್ಲದೆ ಓಡಾಡಬಹುದಾದ ಸ್ವಾತಂತ್ರ್ಯ, ಅಪ್ಪ-ಅಮ್ಮನಿಗೆ ಕೇಳದೆಯೇ ಜೀವನದ ನಿರ್ಧಾರ ತೆಗೆದುಕೊಳ್ಳಬಹುದಾದ(ನನ್ನ ದುಡ್ಡು,,, ನನ್ನ ಕಾಸು) ಅವಕಾಶಗಳು, ಕಾಲೇಜ್ ಜೀವನದ ಓದು, ಟೈಮ್ ಟೇಬಲ್ ಕಿರಿ ಇಲ್ಲದ  ಸ್ವಾತಂತ್ರದ ರಾತ್ರಿಗಳು(PUC ಯಿಂದ ಇಂಜಿನಿಯರಿಂಗ್ ಮುಗಿಯುವ ತನಕ ಸರಿಯಾಗಿ ನಿದ್ರೆ ಮಾಡಿದ ರಾತ್ರಿಗಳೇ ಇಲ್ಲ ಅನಿಸುತ್ತವೆ). ಹಾಗಾಗಿ ಯಾವ ಬಗೆಯ ಕಿರಿ ಕಿರಿ ಇಲ್ಲದ  'ರೈಟ್ ಟು ಎಂಜಾಯ್ ' ಎಂಬ ಅಧಿಕಾರ ಸಿಕ್ಕಿದೆ ಅನಿಸುತ್ತದೆ.

ಕೆಲವು ತಿಂಗಳ ಹಿಂದೆ, ಗೆಳೆಯನೊಬ್ಬ  ಮದುವೆಯ ನಿಶ್ಚಯವಾದ ವಿಷಯ ಗೆಳೆಯರ ಗುಂಪಿನಲ್ಲಿ ಚರ್ಚೆಗೆ ಒಳಗಾದಾಗ, "ನಗುತ್ತ ಕಳೆಯಬಹುದಾದ ಬ್ಯಾಚುಲರ್ ಅನ್ನುದು ಜೀವನದಲ್ಲಿ ಮದುವೆಯ ಮೊದಲ ದಿನಗಳು ಮಾತ್ರ. ಮದುವೆಯ ನಂತರ ಬ್ಯಾಚುಲರ್ ಆಗಲು ಸಾಧ್ಯವಿಲ್ಲ. ಹಾಗೊಮ್ಮೆ ಆದರು ನೋವಿನ ದಿನಗಳಗಿರುತ್ತವೆ. ಹಾಗಾಗಿ ಮದುವೆಯಾಗುವ ಮುನ್ನ, ಬ್ಯಾಚುಲರ್ ಜೀವನ ಚೆನ್ನಾಗಿ ಅನುಭವಿಸಿಯೇ  ೭ ಹೆಜ್ಜೆ ಹಾಕಲು ನಿರ್ಧರಿಸಬೇಕು". ಈ ಮಾತು ಯಾಕೆ ಹೇಳಿದ, ಯಾರು ಹೇಳಿದ ಎನ್ನುವ ಪ್ರಶ್ನೆಗಳಿಗಿಂತ ಇದರ ನಿಗೂಢ ಅರ್ಥ ಬಹಳ ಯೋಚಿಸಬೇಕಾದುದ್ದೆ.

೩ ವರ್ಷಗಳ ಹಿಂದೆ, ಮಣಿಪಾಲದಲ್ಲಿ ಬಾಡಿಗೆ ಮನೆಗಾಗಿ ಓಣಿ-ಓಣಿಗಲ್ಲಿ  ಬೈಕ್ ಹೊಡಿತ ಇದ್ದೆ. ಅಂತು-ಇಂತೂ ಅಪರಿಚಿತ ಮನೆಗಳ ಮುಂದೆ ನಿಂತು, ಕಾಲಿಂಗ್ ಬೆಲ್ ಬಾರಿಸಿ, ದಿನತೆಯಿಂದ ನಿಂತು, "ನಿಮ್ಮಲ್ಲಿ ಬಾಡಿಗೆ ಮನೆ ಇದೆಯಾ ?" ಎಂದು ಕೇಳುತ್ತ ಸಾಗುತ್ತಿದ್ದೆ. ಮನೆಯ ಮಾಲಿಕರ ಮೊದಲು ಕೇಳುವ ಪ್ರಶ್ನೆ, " ಮನೆಯುಂಟು..! ಆದರೆ ಬ್ಯಾಚುಲರ್ ಗೆ ಕೊಡಲ್ಲ... ನೀವು ಮ್ಯಾರೀಡ್ ತಾನೇ?". ನನಗೆ ಮನೆ ಸಿಗುವ ಚಾನ್ಸ್ ಕಾಣದೆ ಒದ್ದಾಡಿದ್ದೆ. ಹೀಗಿರುವಾಗ, ಒಂದು ರವಿವಾರ ೧೧ ಗಂಟೆಗೆ, ಒಂದು ಮನೆಯ ಮುಂದೆ ನಿಂತಾಗ, ನನ್ನ ಕಂಪನಿಯ ಹೆಸರು ಹೇಳಿದಾಗ ಒಳಗೆ ಕರೆಯಿಸಿ, ಚೆನ್ನಾಗಿ ಮಾತನಾಡಿಸಿ ಕಂಪನಿಯ ಕತೆ, ಪಗಾರು, ರಜೆಗಳ ಕುರಿತಾಗಿ ಒಂದರ ಮೇಲೊಂದು ಪ್ರಶ್ನೆಕೆಳಿದ  ಅಂಕಲ್, ಬ್ಯಾಚುಲರ್ ಆದರೆ ಮನೆ ಕೊಡಲ್ಲರಿ ಎಂದು ಹೇಳಿ ವಿನಯದಿಂದ ಜಾರಿ ಕೊಂಡರು. ಅಷ್ಟು ಚೆನ್ನಾಗಿ ಮಾತನಾಡಿದ ಅವರು ಮನೆ ನನಗೆ ಕೊಡುತ್ತಾರೆ ಎನ್ನುವ ನಂಬಿಕೆ ಬಂದು ಹೋಗಿತ್ತು. ಆದರೆ ಅವರೊಂದು ಗೆಳೆತನ ಇರಿಸಿ ಕೊಳ್ಳುವ ಮನಸ್ಸೆಮ್ಬಂತೆ, ನನ್ನ ಮೊಬೈಲ್ ನಂಬರ್ ಕೇಳಿದ್ದರು; ಕೊಟ್ಟು ಬಂದೆ. ಸುಮಾರು ಎಂಟು ತಿಂಗಳು ಕಳೆದ ಬಳಿಕ, ಅವರು ನನಗೆ ಕಾಲ್ ಮಾಡಿ, "ಹಲೋ ನಮಸ್ಕಾರ, ನಿಮಗೆ ಗೊತ್ತಾಯಿತ್ತಲ್ಲ... ನೀವು ನಮ್ಮ ಮನೆಗೆ ಬಾಡಿಗೆ ಮನೆ ಕೇಳಲು ಬಂದಿದ್ದಿರಿ.. ನಮ್ಮ ಮಗಳು, ಈ ವರ್ಷ ಇಂಜಿನಿಯರಿಂಗ್ ಮುಗಿಸಿದ್ದಾಳೆ, ಕಂಪ್ಯೂಟರ್ ಸೈನ್ಸ್, ನಿಮ್ಮ ಕಂಪನಿ ಯಲ್ಲಿ ಜಾಬ್ ಸಿಗುವುದಾ?". ನನಗೆ ಎಲ್ಲಿಲ್ಲ ಕೋಪ ಬಂತು, "ಇಲ್ಲ ಅಂಕಲ್, ಸಿಂಗಲ್ಸ್ ಗರ್ಲ್ಸ್ ಗಳಿಗೆ ನಮ್ಮ ಕಂಪನಿಯಲ್ಲಿ ತಗೋಳಲ್ಲ" ಎಂದು ಹೇಳಿ ಕಾಲ್ ಕಟ್ ಮಾಡಿದ್ದೆ. ಕಾಲ್ ಕಟ್ ಮಾಡಿದ ಮೇಲೆ ನಾನು ಈ ಹಿರಿಯರಿಗೆ ಇಷ್ಟೊಂದು ಕಡಕ್ ಉತ್ತರ ಕೊಡಬಾರದಿತ್ತು ಅನಿಸಿತ್ತು.

ಅದೆಷ್ಟೋ ಸಾರಿ, ರಾಜಾಂಗಣದಲ್ಲಿ ಕಾರ್ಯಕ್ರಮ  ಮುಗಿಸಿ  ಉಡುಪಿಯ ಯಾವೊದೋ ಹೋಟೆಲ್ ಹೋಗುವಾಗ ನಾನು ಒಬ್ಬನೇ ಇರುತ್ತಿದ್ದೆ. ನನ್ನ ಗೆಳೆಯರಾರಿಗೂ  ಯಕ್ಷಗಾನದಂತ ಕಾರ್ಯಕ್ರಮಗಳು ಇಷ್ಟವಾಗಿರುತ್ತಿರಲಿಲ್ಲ. ಹೀಗಾಗಿ ಹೋಟೆಲ್ ನಲ್ಲಿ ಜಾಗ ಇಲ್ಲದಿದ್ದರೆ, ನೀವು 'ಸಿಂಗಲ್ ತಾನೆ?' ಎಂದು ತಡೆದು, ಮತ್ತೊಬ್ಬ ಪುಣ್ಯಾತ್ಮ ಯಾರೊಬ್ಬ ನನ್ನ ಜೊತೆ 'double  ಅನಿಸಿ' ಕೊಳ್ಳುವ ತನಕವೂ ಕಾಯಬೇಕಾಗಿತ್ತು. ಹೀಗೆ double  ಅನಿಸಿ ಕೊಳ್ಳಲು ನನ್ನ ಟೇಬಲ್ ಗೆ ಬರುವ  ಆ ಸಿಂಗಲ್ ಯಾವ ಮಾತು ಕತೆ ಇಲ್ಲದೆ ತನ್ನ ಪಾಡಿಗೆ ತಾನು ತಿಂದು, ತನ್ನದೇ ಮೊಬೈಲ್ ನಲ್ಲಿ ಆಟವಾಡಿ ಹೋಗುವಾಗ, ನನ್ನ ಮನಸ್ಸಿನಲ್ಲಿ ಹೊರಳುದುತ್ತಿದ್ದ ವಿಚಾರವೆಂದರೆ-' ನಾನು ಯಾಕ್ಷಗಾನ ನೋಡುವಂತ ಹುಡುಗಿನೇ ಮದುವೆಯಾಗಿ ಬಿಟ್ಟರೆ 'ಸಿಂಗಲ್ ತಾನೇ?' ಪ್ರಶ್ನೆಗೆ ಉತ್ತರ  ದೊರಿಕಿತಲ್ಲವೇ?' ಅನ್ನುವಂತ ಕ್ಷಣಗಳು ನಾನು ಅನುಭವಿಸಿದ್ದೇನೆ. ಅದು ಸರಿಯೋ-ತಪ್ಪೋ ಬೇರೆ ವಿಚಾರ.

ಇಷ್ಟೆಲ್ಲಾ ಹಳೆಯ ಕತೆ ನಾನು ಯಾಕೆ ನೆನಪಿಸಿ ಕೊಂಡೆ ಅಂದರೆ, ನಿನ್ನೆ -ಮೊನ್ನೆಯ ವರೆಗೂ ಆಫೀಸ್ ನಲ್ಲಿ ವೀಕೆಂಡ್ ಸಹಿತ ಕೆಲಸ ಮಾಡಿದ್ದೇನೆ. ನನ್ನ ಹಿರಿಯ ಸಹೋದ್ಯೋಗಿ ಒಬ್ಬರು ಬಂದು, 'ವೆಂಕಟ್, ನೀವು ಹೇಗೂ ಬ್ಯಾಚುಲರ್ ಅಲ್ವ?.. ವೀಕೆಂಡ್ ಆಫೀಸ್ ಗೆ ಬನ್ನಿ. ನಾನು ಉಳಿದವರಿಗೆ ಹೇಳಲ್ಲ(ಅವರೆಲ್ಲ ಮ್ಯಾರೀಡ್ )" ಎಂದು ಹೇಳಿದರು. ಸವಿನಯದಿಂದ, ಬ್ಯಾಚುಲರ್ ಗೆ  'ಎಲಿಜೆಬಲ್' ಪದ ನಾನೇ ಸೇರಿಸಿ, ಒಮ್ಮೆ ಸಂತೋಷದ ನಗೆ ಬಿರಿ...ಬರ್ತೇನೆ ಎಂದು ಹೇಳಿದೆ. ವೀಕೆಂಡ್ಸ ಎಲ್ಲ  ನಿರವ ಮೌನವಾದ ಆಫೀಸ್ ನಲ್ಲಿ ಒಂದು ಕಾಫಿ ಗೂ  ಗತಿಯಿಲ್ಲದೆ, ಒಂದೇ ಸವನೆ ಕೀಬೋರ್ಡ್ ಕುಟುಕಿದ್ದೆ ನನ್ನ ಕೆಲಸ. ಆದರೆ ವಿಕೆಂಡ ನಲ್ಲಿ ಮಾಡಬೇಕಾದ ಬಟ್ಟೆ ವಾಶಿಂಗ್, ಮನೆಯ ಕ್ಲೀನಿಂಗ್,ಚಪ್ಪಲಿ ಜೋಡಣೆ ಇತ್ಯಾದಿ ಕೆಲಸಗಳು ಸರಿಯಾಗಿ ನಡೆಯದೆ, ಸೋಮವಾರ  ರಾತ್ರಿ ೧೦ ಗಂಟೆಗೆ ಬಟ್ಟೆ ವಾಶ್ ಮಾಡಿದ್ದೆ. ವೀಕೆಂಡ್ ಎಂದು ಊರಿಗೆ ಹೋದ ಉಳಿದ  ನನ್ನ ರೂಮೇಟ್ ಗಳಿಂದಾಗಿ ರಾತ್ರಿ ಊಟವು  ಇರಲಿಲ್ಲ. ಊಟಕ್ಕಾಗಿ ಮತ್ತೆ ಹುಡುಕಾಟ. ಇದನೆಲ್ಲ ಯೋಚಿಸುವಾಗ, ಬ್ಯಾಚುಲರ್ ಗಳು ವೀಕೆಂಡ್ ಗಳಲ್ಲಿ ಮಾಡಬೇಕಾದ ಕೆಲಸಗಳು ಒಬ್ಬ ಮ್ಯಾರೀಡ್ ಗಳಿಗಿಂತಲೂ ಜಾಸ್ತಿನೆ ಇರುತ್ತವೆ. ಆದರೆ ಯಾಕೆ ಬ್ಯಾಚುಲರ್ ಗಳು ಅಂದ್ರೆ ಗ್ರಾಂಟೆಡ್ ಅನ್ನುವ ಪ್ರಶ್ನೆ ಮೂಡಿ ಬಿಟ್ಟಿತ್ತು.

ಒಟ್ಟಾರೆ ಬ್ಯಾಚುಲರ್ ಜೀವನ ಒಂದು ರೀತಿಯಲ್ಲಿ ಅತ್ಯಂತ ಸ್ವಾತಂತ್ರ್ಯ ಅನುಭವಿಸಬಹುದಾದ ದಿನಗಳು.ಎಲ್ಲರು ಜೀವನದಲಿ ಈ ದಿನಗಳು ಅನುಭವಿಸಿಯೇ ಮುಂದಿನ ಗೃಸ್ಥ(ಗ್ರಹಸ್ತ) ಜೀವನಕ್ಕೆ ಕಾಲಿರಿಸುತ್ತಾರೆ. ಅದರೂ ಯಾಕೆ ಈ ಅಂಕಲ್ ಗಳು , " ಬ್ಯಾಚುಲರ್ ರಾ?" ಎಂದು ಕೇಳಿ, ಒಂದು  ಬಗೆಯ ಉಪದ್ರದ ಜೀವಿಗಳಂತೆ ನೋಡುತ್ತಾರೋ ಗೊತ್ತಿಲ್ಲ.

Sunday, September 29, 2013

ರವಿ ಮತ್ತು ಸಿಂಹ...!

ನಾನು ಬರೆಯುತ್ತಿದ್ದದು ರವಿ ಬೆಳೆಗರೇ ಹಾಗೂ ಪ್ರತಾಪ್ ಸಿಂಹರ ಬಗ್ಗೆ. ಅವರಿಬ್ಬರೂ ಒಂದೇ ನಾಣ್ಯದ ಎರಡು ಮುಖಗಳು(ಯಾವತ್ತು ಒಬ್ಬರನೊಬ್ಬರು ಒಪ್ಪಿಕೊಲ್ಲಲಾರರು ಎನ್ನುವ ಅರ್ಥದಲ್ಲಿ).ಆದರೆ ನನ್ನ ಬದುಕಿನಲ್ಲಿ ಒಂದು ಒಳ್ಳೆಯ ಕಲ್ಪನೆಗಳ ಹಿಂದೆ ಈ ಲೇಖಕರ  ಭಾಷೆ, ನುಡಿ ಹಾಗೂ ಒಂದು ಬಗೆಯ ಗೌರವವಿದೆ.

ನಾನು PUC  ಮುಗಿಸಿದ ಬಳಿಕ ಮೆಡಿಕಲ್ ಸೇರಬೇಕೆಂಬ ತುಂಬಾ ಆಸೆ ಇತ್ತು. CET ಯಲ್ಲಿ ಒಳ್ಳೆಯ ರಾಂಕ್ ಗಳಿಸುವ ಮೂಲಕ ಬಳ್ಳಾರಿಯ ಮೆಡಿಕಲ್ ಸೀಟ್ ಸಿಕ್ಕಿದ್ದರು ಸೇರಲು ಸಾಧ್ಯವಾಗದೆ ನಂತರ ಕೆಲವು ಮಹನಿಯರ ಕೃಪೆಯಿಂದ(ಮುಂದೊಂದು ದಿನ -ಅವರಿಗಾಗಿ ಹೊಸ ಲೇಖವನ್ನೇ ಬರೆಯುತ್ತೇನೆ.) ಇಂಜಿನಿಯರಿಂಗ್ ಸೇರಿ, ಜಾಬ್ ಸಿಕ್ಕಿ ಆರು ವರ್ಷಗಳೇ ಕಳೆದು ಹೋದವು.

ಹೀಗಿರುವಾಗ, ನಾನು ಮೆಡಿಕಲ್ ಸೇರಲಾಗದ ನೋವು ನನಗೆ ಇಂಜಿನಿಯರಿಂಗ್ ದಿನಗಳಲ್ಲಿ ಬಹಳ ಕಾಡಿತ್ತು. ಆ ದಿನಗಳ, ಮೆಡಿಕಲ್ ಎಂಬ ನೋವಿನ ಪರಿಣಾಮವಾಗಿ ನನ್ನಲ್ಲಿ ಹುಟ್ಟಿದ ಹುಚ್ಚು ಕಲ್ಪನೆಯೆಂದರೆ ನಾನು ಡಾಕ್ಟರ ಒಬ್ಬಳನ್ನೇ ಮದುವೆಯಾಗಬೇಕು ಎಂದು. ಇಂಜಿನಿಯರಿಂಗ್ ಮುಗಿಯುವತನಕವು ಆ ಕನಸ್ಸು ನನ್ನ ರಕ್ತದಲ್ಲಿ ಇದ್ದೆ ಇತ್ತು. ಆದರೆ ಇಂಜಿನಿಯರಿಂಗ್ ಮುಗಿಸಿ, ಜಾಬ್ ಸಿಕ್ಕಿದ ಮೇಲೆ, ಅಂತ ಹುಡುಗಿಯೊಬ್ಬಳು ಸಿಗುವಳೇ ? ನನಗಾರಾದರು ತಿಳಿದವರು ಇರುವರೇ ಇಂತಲ್ಲ ಲೆಕ್ಕ ಹಾಕಿದಾಗ ಮೆಡಿಕಲ್ ಹುಡುಗಿಯೊಬ್ಬಳು ಈ ಬಡಪಾಯಿಗೆ ಸಿಗುತ್ತಲೇ ಅನ್ನುವ ನಂಬಿಕೆಯೇ ಬರಲಿಲ್ಲ. ಆದರೆ ನನ್ನ ಅಜ್ಜ, ನನ್ನ ಅಪ್ಪ ತನ್ನ ಜೀವಿತಾವಧಿಯಲ್ಲಿ ದುಡಿದುದ್ದನ್ನು ಒಂದೇ ವರ್ಷದಲ್ಲಿ ದುಡಿಯಲು ಸಾಧ್ಯವಿರುವ ನಾನು, ಯಾಕೆ ಒಂದು ಒಳ್ಳೆಯ ಹುಡುಗಿಯನ್ನು ನೋಡಿ ಅವಳಿಗೆ ಮೆಡಿಕಲ್ ಓದಿಸಬಾರದು ಎಂದು ಆಲೋಚನೆಗೆ ಬಿದ್ದೆ. ಆಲೋಚನೆಯೇನೋ ಒಳ್ಳೆಯದು.. ಆದರೆ ಮದುವೆಗೆ ಒಪ್ಪಿಸಿ ....ನಾನು ಸಹಾಯ ಮಾಡುತ್ತೇನೆ ಎನ್ನುವುದು ಹೆಣ್ಣನ್ನು ಕೊಂಡು-ಕೊಂಡಂತೆ, ಮತ್ತು ಸಂಸ್ಕೃತಿಯ ಭಾಷೆ  ದೃಷ್ಟಿಯಿಂದ ಸರಿಯಲ್ಲ ಎನ್ನುವ  ನೋವು ನನಗೆ ಧರ್ಮ ಸಂಕಟಕ್ಕೆ ತೊಡಗಿಸಿತ್ತು. ಆದರು, ಮದುವೆಯ ಬಗ್ಗೆ ಸ್ವಲ್ಪವೂ ಓಪನ್ ಆಗಿ ಮಾತನಾಡಲಾಗದ ಆ ದಿನಗಳಲಿ ನನ್ನ ಗೆಳೆಯನೊಬ್ಬನಿಗೆ ನನ್ನ ಕತೆ ವಿವರಿಸಿದಾಗ, " ಹುಚ್ಚು ಕಲ್ಪನೆ....ಸಹಾಯ ಬೇಕಾದರೆ ಮಾಡು ....ಆದ್ರೆ ಮದುವೆ ಮತ್ತು ಸಹಾಯ ಬೇರೇನೆ ಇರಬೇಕು..." ಹೇಳಿದ್ದಲ್ಲದೆ, ರವಿ ಬೆಳೆಗೆರೆಯವರ "ಹೇಳಿ ಹೋಗು ಕಾರಣ" ಕಾದಂಬರಿಯನ್ನು ಓದುವಂತೆ ಸಲಹೆ ನೀಡಿದ. "ಹೇಳಿ ಹೋಗು ಕಾರಣ" ಕಾದಂಬರಿ ಹೀಗೆ ಒಬ್ಬ ಮೆಡಿಕಲ್ ಹುಡುಗಿಯನ್ನು ಓದಿಸಿದ ಒಬ್ಬ ಹಳ್ಳಿಯ ಬಡ ಹುಡುಗನ ದುರಂತ ಜೀವನವನ್ನು ಅಧರಿಸಿರುವಂತ್ತದ್ದು. ಕೆಲವೊಮ್ಮೆ ಸಾಹಿತ್ಯ-ಪುಸ್ತಕಗಳು ಬದುಕಿನಲ್ಲಿ ಎಂಥ  ಭಾವನಾತ್ಮಕ ವಿಚಾರಗಳಿಗೆ ಉತ್ತರವನ್ನು , ಸಮಾಧಾನವನ್ನು ಕೊಡುತ್ತವೆ ಅನ್ನುವುದುಕ್ಕೆ ಇದು ಒಳ್ಳೆಯ ಉದಾಹರಣೆ.

ಈ ಕಾದಂಬರಿಯ ಮೂಲಕ ನಾನು ರವಿ ಬೆಳೆಗೆರೆಯನ್ನು ಬಹಳ ಪ್ರೀತಿಸಿದೆ. ನಾನು ಅವರ ಬಗ್ಗೆ ಇರುವ "ಹಾಯ್ ಬೆಂಗಳೂರು" ಮೂವಿ ನೋಡಿದೆ. ಮುಕ್ತ ಧಾರವಾಹಿಯಲ್ಲಿ ನ್ಯಾಧಿಶರಾಗಿಯು ನೋಡಿದೆ. ಅವರ 'ಓ ಮನಸ್ಸೇ...!" (ಈಗ ಬಂದಾಗಿದೆ) ಪುಸ್ತಕಕ್ಕೆ  ಪ್ರತಿತಿಂಗಳ ಚಂದದಾರನು ಆಗಿಬಿಟ್ಟೆ. ತಾನು ಪ್ರೀತಿಸಿದ ಹುಡುಗಿಗಾಗಿ ೧೭ ವರ್ಷ ಶೂನ್ಯ ಸಂಪಾದನೆಯೊಂದಿಗೆ, ಶೂನ್ಯ ಲೋಕವನ್ನೇ ಸೃಷ್ಟಿಸಿ,ಕುಡಿತ-ಸಿಗರಟ್ ಗೆ ಬಲಿಯಾಗಿಕಳೆದು ಹೋದ ಆಯುಷ್ಯದ ಕುರಿತ  ಅವರ ಜೀವನಗತಿ ಓದಿ ಮರುಕ ಹುಟ್ಟಿತ್ತು

ದುರದೃಷ್ಟ ವಶಾತ್, ಅವರ ಬದುಕಿನ ಪ್ರತಿಯೊಂದು ಘಟ್ಟವನ್ನು ಅವಲೋಕಿಸುವಾಗ ಅವರು ವಯಕ್ತಿಗವಾಗಿ ಬದುಕಿನ  ಮೌಲಿಕ ವಿಚಾರಗಳಲ್ಲಿ ಕೆಲೋಮ್ಮೆ 'ಸರಿಯಲ್ಲ' ಎನ್ನುವ ವಿಚಾರಗಳನ್ನು ಓದಿದ ಮೇಲೆ ನಾನು ಅತಿಯಾಗಿ ನೋವು ಅನುಭವಿಸಿದೆ. ಇವರು ಬರೆಯುವುದಕ್ಕೂ ಇವರು ಇರುವುದಕ್ಕೂ ವತ್ಯಾಸವಿದೆ ಎಂದಾಗ ಅವರ ಸಾಹಿತ್ಯದ ನಂಬಿಕೆ ಕಳೆದುಕೊಂಡದ್ದು ಸತ್ಯ. ಪ್ರತಿಯೊಬ್ಬ ವ್ಯಕ್ತಿ, ಸಾಹಿತಿ ಬರೆದ ಲೇಖನ ಹಾಗೂ ಅವನ ಜೀವನದ ರೀತಿ-ನೀತಿಗಳು ತುಲನಾತ್ಮವಾಗಿರಬೆಕು ಎಂದು ಬಯಸುತ್ತಾನೆ. ಹೀಗಾಗಿ ನನ್ನ ಬದುಕಿನಲ್ಲಿ ಒಂದು  ಹುಚ್ಚು ಕಲ್ಪನೆಗೆ ಉತ್ತರ ನೀಡಿದ ಲೇಖಕ, ಹೆಚ್ಚು ದಿನ ಆದರ್ಶ ಲೇಖಕನಾಗಿ ಇಲ್ಲದಿರುವುದು ದುಖದ ವಿಷಯ.

ಸಿಂಹ... ನನ್ನ ಬದುಕಿನಲ್ಲಿ ಬರೆಯುವುದನ್ನು ಕಳಿಸಿದ ಗುರು. ಎಲ್ಲರು ಬರೆಯುತ್ತಾರೆ, ಎಲ್ಲರು ಮಾತನಾಡುತ್ತಾರೆ...ಆದರೆ ಅದಕ್ಕೊಂದು ಶೈಲಿ ಬೇಕು. ಅದು ಪ್ರತಾಪರಲ್ಲಿದೆ. ಯಾವುದೇ ಲೇಖನ ಓದಲು ಕುಳಿತರೆ... ಲೇಖನವೇ ನಮ್ಮನ್ನು ಓದಿಸುವಂತೆ ಪ್ರೆರಿಪಿಸುತ್ತದೆ.

ರವಿ-ಸಿಂಹ ಜಗಳ ಹೊಸದೇನು ಅಲ್ಲ. ಸಿಂಹದ ನೈತಿಕತೆ, ಮದುವೆಯ ಮುಂಚೆ ಕಾಲು ಕಳೆದು ಕೊಂಡ ಪ್ರೇಯಸಿಯನ್ನು  ಒಂದಿಷ್ಟು ನೋವು ಇಲ್ಲದೆ ಒಪ್ಪಿ ಮದುವೆಯಾಗಿ ಜೀವನ ಮಾಡುತ್ತಿರುವುದು ನನಗೆ ಬಹಳ ಹೆಮ್ಮೆ ಅನಿಸಿತು. ನೈತಿಕತೆಯ ಮುಂದೆ ರವಿ ತಗ್ಗಿ ಹೋದಾಗ, ಸಿಂಹ ನನ್ನ ಹೃದಯದಲ್ಲಿ  ನೆಲೆಸಿದ. ಆದರು ಇಬ್ಬರ ಜಗಳ  ಮಾಡುತ್ತಿರುವುದು ನನಗೆ ಸರಿಯಲ್ಲ ಅನಿಸಿತ್ತು.  'ಗಂಡ-ಹೆಂಡತಿಯ ಜಗಳದಲ್ಲಿ ಕೂಸು ಬಡವಾಯಿತ್ತಂತೆ ' ಅನ್ನುವಂತೆ ಇವರ ಜಗಳ ನನಗೆ ನೋವು ಕೊಟ್ಟಿತ್ತು.  ಕಾರಣ ಇಷ್ಟೇ- ಒಬ್ಬ ಸಾಹಿತಿ ಅಂದಾಗ ಒಳ್ಳೆಯ ನಡತೆ, ಗಾಂಭಿರ್ಯತೆ, ನೈತಿಕ ಸ್ವಚತೆ  ಓದಾಗ ಅಪೇಕ್ಷೆ ಪಡುತ್ತಲಿರುತ್ತಾನೆ. ಇದಕ್ಕೆ ಭಂಗವಾದಾಗ ನೋವು ಸಹಜವೇ.

Tuesday, September 3, 2013

ಹುಬ್ಬಳ್ಳಿ-ಗಿರ್ಮಿಟ್ ಇಲ್ಲದ ಮಾಲ್..!

ಕಳೆದ ತಿಂಗಳು ನಾನು ಹುಬ್ಬಳ್ಳಿಯಲ್ಲಿದ್ದೆ. ನನ್ನ ಗೆಳೆಯನೊಬ್ಬನನ್ನು ಕರೆದುಕೊಂಡು,ಓಯಸಿಸ್  mall ಗೆ ಹೋಗಿದ್ದೆ. ಹುಬ್ಬಳ್ಳಿಯಲ್ಲೇ ಇದು ಮೊದಲ mall ಅನಿಸುತ್ತೆ . ಒಂದೊಂದೇ ಶೋ ರೂಂ ಗಳನ್ನೂ ನೋಡುತ್ತಾ, ಯಾವ ವಸ್ತುವನ್ನು ಕೊಂಡುಕೊಳ್ಳುವ ಆಸಕ್ತಿ ನಮಗಿಲ್ಲದಿದ್ದರು ಪ್ರತಿಯೊಂದು ವಸ್ತುವು ನಮ್ಮದೇ ಅನ್ನುವಂತೆ ನಟಿಸಿದೆವು. ಪ್ಯಾಂಟ್-ಶರ್ಟ್ ಹಾಕಿದೆವು, ಟ್ಯಾಬ್ಲೆಟ್ ಮುಟ್ಟಿ ನೋಡಿ cost  ಎಷ್ಟು? ಬ್ಯಾಟರಿ ಎಷ್ಟು ದಿನ ಬರುತ್ತೆ? ಕ್ರೆಡಿಟ್  ಕಾರ್ಡ್ ಓಕೆ ನಾ ? ಹೀಗೆ ಸುಮ್ಮನೆ ಕೇಳುತ್ತ ಸಾಗಿದುದ್ದು  mall  ಗಳಲ್ಲಿ ಶಾಪಿಂಗ್ ಮಾಡುವ ಸಂಸ್ಕೃತಿಯ ಒಂದು ಭಾಗ. ಅದರಲ್ಲಿ ತಪ್ಪೇನು ಇಲ್ಲ..!

ಆದರೆ, ಹಲವಾರು ಅಂಗಡಿಗಲ್ಲಿ ಹೊಕ್ಕಿ ಹೊರಬರುವಾಗ ನಮ್ಮ ಕೈಯಲ್ಲಿ ಇದ್ದಿದ್ದು ಕೇವಲ ನಮ್ಮದೇ ಮೊಬೈಲ್ ಹಾಗು ಕರ್ಚಿಫ್ ಮಾತ್ರ. ಆದರೆ ಗದ್ದಲ, ಪ್ರತಿ ಮಾತು, ಬೇಡವಾದ ಮ್ಯೂಸಿಕ್, AC  ರೂಂ ನಲ್ಲಿ ಎಡೆಬಿಡದ ನಡೆದಾಟ ಇವುಗಳಿಂದಾಗಿ ಸಂಜೆಯ ಸಮಯದಲ್ಲಿ ಸ್ನಾಕ್ ಬೇಕು ಎಂಬ ಹಂಬಲವಾಗಿ ಸ್ನಾಕ್ ಕಾರ್ನರ್  ನತ್ತ ಹೆಜ್ಜೆ ಹಾಕಿದೆವು.

ಇಂತ mall ವೊಂದು ಇರುವುದು ಹುಬ್ಬಳ್ಳಿಯಲ್ಲಾದರು ಅದರ ವ್ಯವಹಾರ, ಸಿಗುವ ವಸ್ತುಗಳು, ಎಲ್ಲವು ಬೆಂಗಳೂರಿನ mall ಗಳಂತೆ ಇತ್ತು. ಸ್ನ್ಯಾಕ್ ಕಾರ್ನರ್ ಗೆ ಬಂದಾಗ, ಮೆನ್ಯು  ನೋಡಿದರೆ ಅದೇ ಪಿಜ್ಜಾ, ಅದೇ ಕೋಕ್, ಅದೇ ಬ್ರೆಡ್...! ಅದೇ ಮೆನ್ಯು ಮೂರೂ ಬಾರಿ ಓದಿದೆ. ಗೆಳೆಯನಿಗೆ, ಬೆಂಗಳೂರ ಹುಡುಗನ mall  ಒಂದರಲ್ಲಿ  ಸ್ನಾಕ್ಸ್ ಒಂದನ್ನು ಆರ್ಡರ್ ಮಾಡಲಾಗದ ಪರಿಸ್ಥಿತಿಗೆ ನಾಚಿಕೆಯಾಗಿರಬೇಕು.ಅದಕ್ಕೆ, ಅವನು ನನ್ನತ್ತ ತಿರುಗಿ, " ಎನಲೇ, ಒಂದು ಸ್ನಾಕ್ ಆರ್ಡರ್ ಮಾಡಕ್ ಬ್ಯಾಂಕ್ ಅಗ್ರಿಮೆಂಟ್ ಒಂದರ terms and conditions ಕಾಗದ ಓದಿದ ಹಾಗೆ ಒದತ್ತ ಇದ್ದೀಯಲ್ಲ? ಪಿಜ್ಜಾ ಆರ್ಡರ್ ಮಾಡನವ?" ಎಂದ.

ನಾನು ಮೆನ್ಯುನಲ್ಲಿ ಹುಡುಕುತಿದ್ದದ್ದು ಗಿರ್ಮಿಟ್..! ಮೆನ್ಯುನ ಕೊನೆಯ ಹಾಳೆಯ ತನಕ ತಲುಪಿದರು ಗಿರ್ಮಿಟ್ ಇರಲೇ ಇಲ್ಲ.  ಆಮೇಲೆ, ಸ್ನಾಕ್ಸ್ ಕೊಡುವವರನ್ನೇ ಗಿರ್ಮಿಟ್ ಕೊಡಿ ಎಂದು ಬೇಡಿಕೆಯನ್ನೇ ಇಟ್ಟೆ. ಹುಚ್ಚು ಮಂಗ್ಯ ಪೇಟೆಗೆ ಬಂದಿದೆ ಎನ್ನುವಂತೆ, " ಇದು mall ಸರ್ ... ಇಲ್ಲಿ ಗಿರ್ಮಿಟ್ ಇಡಲಿಕ್ಕೆ ಆಗತ್ತಾ..?!...ಪಿಜ್ಜಾ ಇದೆ ನೋಡಿ ಸರ್.." ಎಂದು ತಮ್ಮ ಬರದ ಇಂಗ್ಲಿಷ್-ಫ್ರೆಂಚ್ ಹೆಸರುಗಳನ್ನು ದಡ-ದಡ ಎಂದು ಒಸೆರಿದರು. ನನಗೆ ಅವರ ಮಾತು ಕೇಳಿ ನಗುಬಂತು... " ನೋಡಿ, ಪಿಜ್ಜಾ ಬೆಂಗಳೂರಿನಲ್ಲೂ ಸಿಗುತ್ತೆ, ಮಂಗಳೂರಿನಲ್ಲೂ ಸಿಗುತ್ತೆ...ಆದರೆ ಗಿರ್ಮಿಟ್ ಇಲ್ಲೇ ಸಿಗುದು... ಕರಾವಳಿಯಲ್ಲಿ ಮೀನು, ದಾವಣಗೆರೆಯಲ್ಲಿ ಬೆಣ್ಣೆ ದೋಸೆ, ಮಂಡ್ಯದಲ್ಲಿ ಮುದ್ದೆ,  ಧಾರವಾಡದಲ್ಲಿ ಪೇಡ, ಬೆಳಗಾಂ ದಲ್ಲಿ ಕುಂದ, ಗೋಕಾಕದಲ್ಲಿ ಕರದಂಟು..ಇರಲೇ ಬೇಕು. ಅದು ಲೋಕಲ್ ಐಟಂ ಅಂತ ನೀವು  ಮಾಲ್ ದಲ್ಲಿ ಇಡ್ತಾ ಇಲ್ಲ ಅಷ್ಟೇ? ಆದರೆ ನೀವು ಲೋಕಲ್ ಜನ ತಾನೇ?"  ಇಷ್ಟು ಹೇಳಿದ ಮೇಲೆ, ಅವನ ಬಾಯಿ ಸಣ್ಣದಾಯಿತು..."ಆದರೂ.. ರೂಲ್ ಪ್ರಕಾರ ಇಡಲಿಕ್ಕೆ ಆಗಲ್ಲ ಸರ್..." ಎಂದಾಗ ಎಲ್ಲಿಲ್ಲದ ಅಸಹನೆ ಮೂಡಿತ್ತು. "ನೀವು ಲೋಕಲ್ ಮಂದಿಯಾಗಿ...ಲೋಕಲ್ ಪ್ರಾಡಕ್ಟ್ ಪ್ರೋತ್ಸಾಹ ಕೊಡದಿರುವುದು ಸರಿಯಲ್ಲ.ನಿಮಗೆ ಅಭಿಮಾನವಿರಬೇಕಿತ್ತು" ಎಂದಾಗ , "next  ಟೈಮ್ ಟ್ರೈ ಮಾಡ್ತಿವಿ ಸರ್" ಎಂದು ಹೇಳಿದ. ಗೆಳೆಯನ ಸಲಹೆಯ ಮೇರೆಗೆ ಪಿಜ್ಜಾ ತಿಂದು, ಕೊಕ್ ಕುಡಿದು ಹೊರಬಂದೆ.

ಆದರೆ, ಇಲ್ಲಿ ಪ್ರಶ್ನೆ " ನಾನು ಹೀಗೆ ಪ್ರಶ್ನೆ ಮಾಡಿದೆ" ಅನ್ನುವುದಲ್ಲ. ಬದಲಾಗಿ ನಮ್ಮ ಲೋಕಲ್ ಅನಿಸಿಕೊಂಡಿರುವ ವಸ್ತು ಸ್ಥಿತಿಗಳ ಬಗ್ಗೆ ನಮ್ಮ ಜನಕ್ಕೆ ಸ್ವಲ್ಪವೂ ಅಭಿಮಾನ ಇಲ್ಲ ಯಾಕೆ? ಬೇರೆ ದೇಶದಿಂದ ಬಂದದೆಲ್ಲ ಅಮೃತ ಅಂತ ಭಾವಿಸುತ್ತರಲ್ಲ? ಗಿರ್ಮಿಟ್ ಏನು ಪಿಜ್ಜಾ ಗಿಂತ ಕಡಿಮೆಯೇ? ಒಂದು ನೆನಪಿಟ್ಟು ಕೊಳ್ಳಿ...."ಒಂದು ಕಡಿಮೆಯ ಬೆಲೆಯ ಪಿಜ್ಜಾ ಬೆಲೆಯಿಂದ ೧೦ ಜನ ಗಿರ್ಮಿಟ್ ತಿನ್ನಬಹುದು". ದೇಶಿಯ ಮಾರುಕಟ್ಟೆಗೆ ಉತ್ತೇಜನ ನಿಡದಿರುವ ಪರಿಣಾಮವಾಗಿಯೇ ಎಂದು ರುಪಾಯಿ ಕುಸಿಯುತ್ತಿರುವುದು. ವಿದೇಶಿ ವಸ್ತುಗಳ ಹಿಂದೆ ನಾವು ಹೋಗುವುದರಿಂದ ನಮ್ಮ ಹಣ ವಿದೇಶಿಗರ ಹಿಂದೆ ಹೋಗುತಿದೆ.

Saturday, August 31, 2013

ಬೆಂಗಳೂರಿ"ನಲ್ಲೇ" ಸೆಟ್ಲ್ ಆಗ್ತಿರಾ?

ಬೆಂಗಳೂರು ಅಭಿವೃದ್ದಿಗೆ  ಹಲವಾರು  ಸಂಸ್ಥೆಗಳಿವೆ :ಬೆಂಗಳೂರು ಮಹಾನಗರ ಪಾಲಿಕೆ ಹಾಗೂ BDA ಇರುವುದು ನಿಮಗೆಲ್ಲ ಗೊತ್ತೇ ಇದೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ ಬೆಂಗಳೂರಿನ ಕುರಿತಾಗಿ ಸಮಗ್ರವಾಗಿ(a  holistic approach  in thinking ) ಯೋಚಿಸುವ ವ್ಯಕ್ತಿಗಳು ಎಂದರೆ ಹೊಸದಾಗಿ ಬೆಂಗಳೂರಿಗೆ ಬಂದು ಜೀವನ ಸಾಗಿಸಬೇಕು ಎಂದು ಕೊಂಡವರು. ನನ್ನ ಅನುಭವದಿಂದ ಹೇಳುವ ಮಾತೆಂದರೆ, ಇಂಥ ಹೊಸ ವ್ಯಕ್ತಿಗಳು ಬೆಂಗಳೂರಿನ ಭವಿಷ್ಯದ ಬಗ್ಗೆ ಬಹಳ ಯೋಚನೆ ಮಾಡುತ್ತಾರೆ ಅನಿಸುತ್ತದೆ.

ನನಗೆ ಮೊದಲಿಂದಲೂ ಬೆಂಗಳೂರಿನ ಬಗ್ಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಅದಕ್ಕೆ ಕಾರಣ, ಹಳ್ಳಿಯಲ್ಲಿ  ಏಳೆಂಟು ಎಕರೆ ತೋಟ-ಗದ್ದೆಗಳಲ್ಲಿ ಓಡಾಡಿ ಕೊಂಡು ಬೆಳದು, ಊರಿನ ಯಾವ ಮನೆಯ ಒಲೆಯ ಮೇಲಿನ ಅನ್ನವಾದರು ಪರವಾಗಿಲ್ಲ ಎನ್ನುವಂತೆ ಬೆಳೆದು,  ಬೆಂಗಳೂರಿನ ೬ x  ೩ ಅಡಿ ಜಾಗದಲ್ಲಿ ಜೀವನ ಮಾಡಬೇಕು ಅಂದರೆ ಹೇಗೆ ಸಾಧ್ಯ? ಆ ಮನಸ್ಸು ಹೇಗೆ ಕುಗ್ಗಿಸಬೇಕು? ನೂರಾರು ಅಡಿ ರಸ್ತೆಗಳಿದ್ದರೂ ಬೈಕ್ ಓಡಿಸಲು ಬೇಕಾದ ೨ ಅಡಿಗೂ ಗುದ್ದಾಡಬೇಕು..:! 

ಹಾಗೆಂದು ಬೆಂಗಳೂರಿಗೆ ಬಂದ ಮೊದಲ ದಿನ ಒಂದು ವಿಶೇಷ ಅನುಭವವೇ... ನಾನು ರಾಜಧಾನಿ ನಗರಿಯಲ್ಲಿ ಓಡಾಡುತ್ತಿದ್ದೇನೆ ಎನ್ನುವುದು ಒಂದು ರೀತಿಯಲ್ಲಿ (ಹಳ್ಳಿಯಲ್ಲಿ) ಗೌರವದ ವಿಷಯ. ಇನ್ನು ನನ್ನ ಹಿತೆಶಿಗಳಿಗೆ ಬೆಂಗಳೂರಿಗೆ ಹೋಗುತ್ತೇನೆ ಅಂದಾಗ, "ಹೌದಾ, ಬೆಂಗಳೂರಿನಲ್ಲಿ ಇದ್ದೀರಿ ಅಂದ್ರೆ.... ನಿಮಗೆ ಕನ್ಯಾ ದಾನ ಮಾಡುವರ ಸಂಖ್ಯೆ ಕೂಡ ಹೆಚ್ಚಾಗುತ್ತೆ...!" ಎಂದು ಹಾಸ್ಯ ಚಟಾಕಿಯನ್ನೇ ಹಾರಿಸಿದ್ದರು. ಬೆಂಗಳೂರಿನ ಫ್ಲೈಓವರ್ ಗಳ ಮೇಲೆ  AC ಬಸ್ಸಿನಲ್ಲಿ ಓಡಾಡುವಾಗ ಸುಖವೇ ಬೇರೆ. ರಸ್ತೆಯ ಪಕ್ಕದಲ್ಲಿ ನಿಲ್ಲಿಸಿರುವ ಬಿಲ್ ಬೋರ್ಡ್ಸ ಗಳು, ವಿವಿಧ ದೀಪಾಲಂಕರಗಳು  ನೋಡುವಾಗ ಅದ್ಭುತ ಸೌಂದರ್ಯ ಲೋಕದ ಅನುಭವಾಗುತ್ತದೆ. AC  ಶಾಪಿಂಗ್ ಮಾಲ್ ಗಳು, ಸ್ವಿಚ್ ಒತ್ತಿದರೆ ಸಿಗುವ ಕಾಫಿ, ಕೈ ಹಿಡಿದರೆ ನೀರು ಬಿಡುವ ನಲ್ಲಿಗಳು ಎಲ್ಲವು ವಿಶೇಷವೇ..!

ಆದರೆ, ವಾರವೊಂದು ಕಳೆಯುತ್ತಿದ್ದಂತೆ ಬೆಂಗಳೂರು ಎಂದರೆ ಏನು? ರಾಜಧಾನಿಯ ಅಂತರಾಳದ ನೋವು ಏನು ಎನ್ನುವುದು ತಿಲಿಯಲಾರಮ್ಬಿಸಿತು. ಮೂಗನ್ನು ಪ್ರವೇಶ ಮಾಡುತ್ತಿರುವ ಧೂಳು ಕಣ್ಣಗಳು,ಕಿವಿಯನ್ನು ಕೆಂಗಡಿಸುತ್ತಿರುವ ವಾಹನಗಳ ಶಬ್ಧ, ಎತ್ತಿ-ಎತ್ತಿ ಬಿಸಾಡುವ ವಾಹನದ ಗಾಲಿಗಳು-ಕೆಟ್ಟಿರುವ ರಸ್ತೆಗಳು, ಮಾತನಾಡದ ಜನಗಳು, ಟ್ರಾಫಿಕ್ ನಲ್ಲಿ ಸಿಕ್ಕಿ ಹಾಕಿಕೊಂಡಿರುವ ಆಂಬುಲೆನ್ಸ್ ಗಳು, ರಸ್ತೆಯಲ್ಲಿ ಹರ ಸಾಹಸ ಮಾಡುತ್ತಿರುವ ಟ್ರಾಫಿಕ್ ಪೋಲಿಷ್ ಗಳು, ರಸ್ತೆಗಿಳಿದು ಕೆಲಸ ಹಗಲು-ರಾತ್ರಿ ದುಡಿಯುವ BBMP ನೌಕರು, ಕೆಟ್ಟ ವಾಸನೆಯಿಂದ ಸಹನೆಯನ್ನೇ ಪ್ರಶ್ನಿಸುವಂತ  ಕಸದ ರಾಸಿಗಳು, .....<removed>, ಈ ಜಗತ್ತೇ ತಮಗೆ ಸಂಬಂಧವಿಲ್ಲದಂತೆ AC ಬಸ್ಸಿನಲ್ಲಿ ಕಿವಿಗೆ earphone  ತುರುಕಿ, ಕಣ್ಣುಗಳನ್ನು ಮೊಬೈಲ್ ಸ್ಕ್ರೀನ್ ಗೆ ನಾಟಿಸಿ ಕುಳಿತುಕೊಳ್ಳುವ ಯೌವನದ ಯುವಕ-ಯುವತಿಯರು.... ಹೀಗೆ ಸಾವಿರಾರು ಬಗೆಯ ದೃಶ್ಯಗಳು ನಿತ್ಯ ಇಲ್ಲಿ ಲಭ್ಯ.

ಬೆಂಗಳೂರು ನಗರದಲ್ಲಿ ಬದುಕು ಒಂದು ವಿಪರ್ಯಾಸದ ಸಂಕೇತ. ಬಸ್ಸುಗಳಲ್ಲಿ ಹತ್ತಿದರೆ ಆಸನ ಸಿಕ್ಕೀತು ಎನ್ನುವ ಭರವಸೆ ಇಲ್ಲ. ಜನ ಜನ್ಗಳುಲಿಯ ಮಧ್ಯೆ ಯಾರು ಮೊಬೈಲ್, ಪಾಕೆಟ್ ಗೆ ಕೈ ಹಾಕುತ್ತಾರೆ ಅನ್ನುವ ವಿಚಾರದಲ್ಲೇ ತಲೆ ಕೆಡಿಸಿ ಕೊಂಡಿರಬೇಕು. ಅದರಲ್ಲೂ ಈ BMTC  ಕಂಡಕ್ಟರ್ ಗಳು ಕೊಡಬೇಕಾದ ಚಿಲ್ಲರೆ ಹಣವನ್ನು  ಟಿಕೆಟ್ ಮೇಲೆ  ಬರೆದು ಕೊಟ್ಟರೆ ಅಂದರೆ ಬಹಳ  ಗಮನದಲ್ಲಿ ಇಟ್ಟು ಕೊಂಡಿರಬೇಕು. ಒಂದೊಮ್ಮೆ  ಇಳಿಯುವ  ಸ್ಥಳದ ಕುರಿತಾದ ಚಿಂತೆ, ಟ್ರಾಫಿಕ್ ಕಿರಿ ಕಿರಿ ಮಧ್ಯೆ ನಿವೇನಾದರು ಚಿಲ್ಲರೆ ಹಣ ಮರೆತಿರೋ... ಕೃಷ್ಣಾರ್ಪಣ ಅನ್ನಬೇಕು ಅಷ್ಟೇ. ರಾತ್ರಿ ೯ ಗಂಟೆಯಾಗಿದೆ ಅಂದರೆ ಗಂಡಸರಾದ  ನಮ್ಮಂತವರಿಗೂ ನಡೆದಾಡಲು ಒಳ್ಳೆಯ ನಗರ ಅಲ್ಲ. ಕುಡುಕ ಪುಂಡರ ಮಧ್ಯದಲ್ಲಿ ಒಮ್ಮೆ ಸಿಕ್ಕಿ ಹಾಕಿಕೊಂಡು ನಾನು ಹಾಗೂ ನನ್ನ ಗೆಳೆಯರು ಕಸಿ-ವಿಸಿ ಅನುಭವಿಸಿದ್ದೇವೆ.

ಬೆಂಗಳೂರು ನಗರದಲ್ಲಿ ಇರುವುದು ಹಣ ಮಾತ್ರ; ಮಾನವೀಯತೆಗೆ ಬೆಲೆ ಇಲ್ಲ; ನೀರು ಇಲ್ಲ; ರಸ್ತೆಗಳು ಸಾಕಾಗುತ್ತಿಲ್ಲ; ವಿಸ್ತಾರವಾದ ಮನೆಗಳಿಲ್ಲ. ಹಾಗೆಂದು ಎನೂ ಇಲ್ಲವೆಂದು ಹುಬ್ಬೇರಿಸಲು ಹೋಗಬೇಡಿ...! ೨೦೦ ಇಂಜಿನಿಯರಿಂಗ್ ಕಾಲೇಜ್ ಗಳಿವೆ, ವಿಧಾನ ಸೌಧವಿದೆ, ಸರ್ಕಾರದ ಸಂಸ್ಥೆಗಳಿವೆ, ಸಾಂಸ್ಕೃತಿಕ ನೆಲೆಯಲ್ಲಿ ಹುಟ್ಟಿರುವ ಪುರಭವನದಂತ ಸ್ಥಗಳಿವೆ, ರಾಜ-ಮಹಾರಾಜರ ನೆನಪಿನ ಅರಮನೆ ಇದೆ; ದೇಶದ ಪ್ರತಿಷ್ಥಿತ DRDO , ಇಸ್ರೋ ದಂತಹ ಸಂಸ್ಥೆಗಳಿವೆ,   ಸಾವಿರಾರು ಹೋಟೆಲ್ ಗಳಿಗಳಿವೆ, ಸಕಲ ಸೌಲಭ್ಯದಿಂದೊದಗುಡಿದ ಆಸ್ಪತ್ರೆಗಳಿವೆ. ಆದರೆ ಇವೆಲ್ಲ ಇದ್ದು  ಕಣ್ಣಿಗೆ ಕಾಣುತ್ತಿದ್ದರೂ, ಅತಿ ಕಡಿಮೆ ದೂರದಲ್ಲಿದ್ದರು ವಾಹನ ಸಂದಣಿಯ ಮಧ್ಯೆ ಯಾವುದು ಕೂಡ ಸರಳವಾಗಿ ಲಭ್ಯವಾಗುವಂತದಲ್ಲ. ಕೆಲವೊಮ್ಮೆ, ಗುಯಂ ಗುಯಂ ಎಂದು ಹಾರ್ನ ಮಾಡುತ್ತ ಟ್ರಾಫಿಕ್ ನ ಮಧ್ಯೆ ಸಿಕ್ಕಿ ಹಾಕಿಕೊಂಡು ಒದ್ದಾಡುವ ಆಂಬುಲೆನ್ಸ್ ಗಳನ್ನೂ ನೋಡಿದಾಗ, ನಗರದಿಂದ ೫೦ ಕಿಮಿ ದೂರದಲ್ಲಿ ಇರುವ ನಮ್ಮ ಹಳ್ಳಿಯ ಜನ ಬೆಂಗಳೂರಿನ ಜನಕ್ಕಿಂತಲೂ ಬೇಗ ಆಸ್ಪತ್ರೆಗೆ ತಲುಪತ್ತಾರೆ ಅನಿಸುತ್ತದೆ.

ಬೆಂಗಳೂರಿನಲ್ಲಿ ಪೂರ್ಣವಾಗಿ ಸೆಟ್ಲ್ ಆಗಬೇಕು ಅಥವಾ ಆಗುತ್ತಿರುವ ನನ್ನ ಸಹೋದ್ಯೋಗಿಗಳ ವಿಷಯಗಳನ್ನು ತಿಳಿದಾಗ ಬಹಳ ಸಾರಿ ನಾನು ಏನು  ಮಾಡಬೇಕು ಎಂದು ಪ್ರಶ್ನಿಸಿ ಕೊಂಡಿದ್ದೇನೆ.ಬೆಂಗಳೂರಿನಲ್ಲಿ ಒಂದು ಸಾಮಾನ್ಯ ಅರ್ಧ ಹಳ್ಳಿಯನ್ನೇ ಕೊಂಡುಕೊಳ್ಳಬಹುದಾದಷ್ಟು ಹಣವನ್ನು 35 x 40 ಸೈಟ್ ಗೆ ಸುರಿಯ ಬೇಕು. ಅದರ ಜೊತೆಗೆ ತಮಿಳುನಾಡು-ಕರ್ನಾಟಕ ಪ್ರೀತಿಯಿಂದ ವರ್ತಿಸಿದರೆ, ವರುಣ ದೇವನು ಕೃಪೆ ತೋರಿಸಿದರೆ ಮಾತ್ರ ನೀರು..ಇಲ್ಲಾಂದರೆ ಬೆಂಗಳೂರು ಥಾರ್ ಮರುಭೂಮಿಯೇ..! ಬೈಕ್ ನಲ್ಲಿ ಓಡಾಡುವುದು ಕಷ್ಟ.. ಕಾರಗೆ ರಸ್ತೆಯು ಇಲ್ಲ; ಪಾರ್ಕಿಂಗ್ ಜಾಗವು ಇಲ್ಲ. ಟ್ರಾಫಿಕ್ ಮಧ್ಯೆ ಸಿಕ್ಕಿ ಹಾಕಿಕೊಂಡು ಕೋಪಗೊಂಡು, "ಬಿಡ್ರಲೇ ನನ್ನ" ಅನ್ನುವುದರ  ಪರಿಣಾಮವಾಗಿ "BDA " ಎಂಬ ಶಬ್ಧ ಬಂದಿದೆಯೋ ಏನೋ !

ಬೆಂಗಳೂರಿನ ಪರಿಸ್ಥಿಗೆ ಉತ್ತರವಿಲ್ಲ. ಇಲ್ಲಿಯ ಬದುಕು ಪೂರ್ಣವಾಗಿ ಪೆಟ್ರೋಲಿಯಂ  ಹಾಗೂ ವಿದ್ಯುತ್ ಮೇಲೆ ಆಧಾರಿತ(ಎಲ್ಲ ನಗರಗಳು ಅಷ್ಟೇ). ಆದರೆ ಪೆಟ್ರೋಲಿಯಂ ಅಗಲಿ ವಿದ್ಯುತ ಅಗಲಿ ಯಾವತ್ತು ಸಿಗುತ್ತಲೇ ಇರುವ ವಸ್ತುಗಳಲ್ಲ. ಇದರಿಂದಾಗಿ ಕೆಲವೇ ವರ್ಷಗಳಲ್ಲಿ $ ಏರು ಮುಖ, ಎಣ್ಣೆಯ ಅತಿ ಹೆಚ್ಚು ಕರ್ಚುಗಳಿಂದ ಬೆಂಗಳೂರಿನ ಜೀವನ ಬಹಳ ಕಷ್ಟವಾಗಲಿದೆ ಅನ್ನುವ ಒಂದು ಲೆಕ್ಕಾಚಾರ ಕೂಡ ನನ್ನ ತಲೆಯಲ್ಲಿದೆ. ಅದರಲ್ಲೂ, "Small is Beautiful" ಪುಸ್ತಕದ ಕೆಲವು ಹಾಳೆಗಳನ್ನು ತಿರುವಿ ಹಾಕಿದಾಗ ಮಾನವ ಜಗತ್ತು  ಅತಿ ಹೆಚ್ಚಾಗಿ ನವಿಕರಿಸಲಾಗದ ಶಕ್ತಿಗಳ ಮೇಲೆ ಅವಲಂಬಿಸಿರುವುದರ ಪರಿಣಾಮವಾಗಿ ನೋವು ಕಟ್ಟಿಟ್ಟ ಬುತ್ತಿ ಎನ್ನುವುದು ಅರಿವಿಗೆ ಬಂದಿದೆ.

ಬೆಂಗಳೂರಿನ ಸಮಸ್ಯೆಗಳಿಗೆ ಜನ-ಸರ್ಕಾರಗಳು ಬಹಳ ಉಪಾಯ-ತಂತ್ರಜ್ಞಾನ ಕಂಡುಕೊಂಡಿರುವುದಂತು ನಿಜ. ಅಗಲವಾದ ರಸ್ತೆಗಳು, ಫ್ಲ್ಯವೆರ್ ಗಳು, ಮೆಟ್ರೋ, ಅಪಾರ್ಟ್ ಮೆಂಟ್ ಗಳು. ಆದರೆ ವರುಣ ಅವಕೃಪೆ ಯಾದರೆ ಉತ್ತರ ವಿದೆಯೇ? ಮಳೆಯಿಲ್ಲದಿದ್ದರೆ ಬೆಂಗಳೂರಿಗೆ ಯಾವ ತಂತ್ರಜ್ಞಾನವು ನೀರು ತರಲಾರದು. ಅತಿ ಮಳೆ, ಭೂಕಂಪನ ದಂತ ಸಣ್ಣ  ಸಣ್ಣ ವಿಷಯಕ್ಕೂ ನಗರದ ಜೀವನ ಅಸ್ತವ್ಯಸ್ತ ಗೊಳ್ಳುತ್ತದೆ. ಒಂದೊಮ್ಮೆಇಡಿ ನಗರ ಮರು ನಿರ್ಮಾಣ ಮಾಡಬೇಕಾದಾರೆ  ಊಹಿಸಿ ಕೊಳ್ಳಲು ಸಾಧ್ಯವಾಗದಷ್ಟು ನೋವು ಇಲ್ಲಿ ಬರಲಿದೆ. ಹಾಗೆ ಆಗದೆ ಇರಲಿ ಅನ್ನೋದೇ ನನ್ನ ಆಶಯ. ಆದರೆ ಸರ್ಕಾರಗಳು  ಸರಿಯಾಗಿ ಗಮನ ಹರಿಸದಿದ್ದರೆ, ಅಮೆರಿಕಾದ ಡೆಟ್ರಾಯಿಟ್ ನಗರದಂತೆ ಬೆಂಗಳೂರಿನ ಸ್ಥಿತಿ ತಲುಪುದಂತು ನಿಜ.

ಹೀಗೆ ಸಾವಿರಾರು ಸಮಸ್ಯೆಗಳನ್ನು ನಾನು ಪಟ್ಟಿ ಮಾಡಬಲ್ಲೆ. ಆದರೆ ನನ್ನ ಹಾಗೆ ಸಾವಿರಾರು ಜನ ಬೆಂಗಳೂರಿನಲ್ಲಿ ಇಲ್ಲವೆ? ಅದರ ಜೊತೆಗೆ ನಾನೇ ಕೆಲವು ವಾಕ್ಯಗಳನ್ನು ಜೋಡಿಸಿ ಕೊಂಡಿದ್ದೇನೆ, "ಕೋಟಿಗಟ್ಟಲೆ ಜನ ಇರುವ ನಗರಕ್ಕೆ ನಾನೊಬ್ಬ ಭಾರವೇ?", "ಹುಟ್ಟಿಸಿದ ದೇವರು ಹುಲ್ಲು ಮೇಯಿಸಿಯನೆ?(ದೇವರು ನನಗೂ ಇಲ್ಲಿ ಒಂದು ಮನೆ ಕೊಟ್ಟಾನು)," ನೂರು ವರ್ಷದ ಬಾಳುವೆಗಾಗಿ ಇಷ್ಟೊಂದು ಚಿಂತೆಯಾಕೆ?". ಹೀಗೆಲ್ಲ ಯೋಚಿಸಿ...ಕೊನೆಗೂ ನಾನು ಬೆಂಗಳೂರು ನನ್ನದಲ್ಲ ಅನ್ನುತ್ತಲೇ ನಾನು ಬೆಂಗಳೂರಿನವನಾಗುತ್ತಿದ್ದೇನೆ. ಬೆಂಗಳೂರಿಗೆ ಬಂದು ೯ ತಿಂಗಳು ಕಳೆದಿವೆ(ನವ ಮಾಸ ತುಂಬಿದೆ).

ಹುಟ್ಟೂರು ದೂರ ಉಳಿಯಿತು;ಉಡುಪಿ  ಮರೆಗೆ ಸರಿಯಿತು; ಹೊಸ ಬದುಕು-ಹೊಸ ಕಲ್ಪನೆ. ಜೀವನಕ್ಕೆ user guide, reference guide ಇರಲ್ಲ ನೋಡಿ. ಬದುಕು ಹೇಗಾದರೂ ನಡಿತನೇ ಇರುತ್ತೆ... ಏನಂತಿಯ ಮಗಾ? ಆದರೆ, ನನ್ನ ದೊಡ್ಡ ಚಿಂತೆ, "ನೀವು  ಬೆಂಗಳೂರಿ"ನಲ್ಲೆ" ಸೆಟ್ಲ್ ಆಗ್ತಿರಾss...?!" ಅಂತ ಕೇಳ್ತಾರಲ್ಲ... ಅವರಿಗೆ ಏನು ಹೇಳುದು? ಹೇಗೆ ಹೇಳುದು?

Thursday, August 22, 2013

ಒಂದು ವರ್ಷ..!

ಇವತ್ತು ನನ್ನ ಈ ಕನ್ನಡ ಬ್ಲಾಗ್ ಗೆ ಒಂದು ವರ್ಷ..! 

ಅಂಗಡಿಯವನಿಗೆ  ಗಿರಾಕಿ, ಮಠಕ್ಕೆ ಸ್ವಾಮಿ,ದೇಶಕ್ಕೆ ರಾಜಕಾರಣಿ, ಭೂಮಿಗೆ ರೈತ ಇರುವಂತೆ  ಒಬ್ಬ ಬರಹಗಾರನಿಗೆ ಓದುವ ಒಬ್ಬ ಓದುಗ ಬೇಕೇ ಬೇಕು. ಹಾಗಾಗಿ ನನ್ನ ಓದುಗ ಮಿತ್ರರಿಗೆ  ಬರಹಗಳನ್ನು ಸರಿಯಾಗಿ,ಕನಿಷ್ಠ ಪ್ರಯತ್ನದಿಂದ ಓದುವಂತೆ ಸಹಾಯವಾಗಲು ನನ್ನ ಬ್ಲಾಗ್  www.heartwaves4u.blogspot.in ಆದರದಿಂದ ಸ್ವಾಗತಿಸುತ್ತಿದೆ. 'ಓದುಗ' ಗಿರಾಕಿಗೆ ನನ್ನ ನಮಸ್ಕಾರಗಳು. ಒಬ್ಬನು ಬಂದು ನನ್ನ ಬರಹ ಓದಬೇಕು ಎಂಬ ತುಡಿತ, ಬಯಕೆ ಒಬ್ಬ ಬರಹಗಾರನಿಗೆ ಇರುವ ಅತಿ ದೊಡ್ಡ ಹುಚ್ಚು. ಅದರಲ್ಲೂ ನಾನು ಬರೆಯುವುದು ಹಣಕ್ಕಾಗಿಯಲ್ಲ; ಬರಹದ  ಜೊತೆ ನೋವು ಇದೆ, ಆಕಾಂಕ್ಷೆ ಇದೆ; ಹುಚ್ಚು ಕಲ್ಪನೆಗಳಿವೆ. ಇಂಥದೊಂದು ಮನಸ್ಸಿನ ತುಡಿತವನ್ನು ತೆರೆದಿಡುವುದಕ್ಕೆ  ಬರಹಕ್ಕಿಂತ ಒಳ್ಳೆಯ ದಾರಿಯವುದು ನನಗೆ ಕಾಣದು.

ನಾನು ಬರೆಯಲು ಸುರು ಮಾಡಿ ನಾನು ನೌಕರಿಗೆ ಸೇರಿದಷ್ಟೇ ವರ್ಷಗಳು(೬ ವರ್ಷಗಳು) ಆಗಿ ಹೋದವು. ಮೊದಲು ಡೈರಿ ಎಂದು ನೋಟ್ ಬುಕ್ ಮೇಲೆ ಗಿಚುತಿದ್ದೆ. ಅದರಲ್ಲಿ ಅಮ್ಮ ನಿಂದ ದೂರ ಬಂದ ದುಖ, ಹೋಂ ಸಿಕ್ನೆಸ್ಸ್ , ಮೊದಲ ಕೃಷ್, ಗೆಳೆಯರ-ಆಫೀಸ್ ನಲ್ಲಿ ನಡೆದ ಯಾವುದೇ ಸಣ್ಣ ನೋವಿನ ಸಂಗತಿಯಿದ್ದರು ದಾಖಲಿಸುತಿದ್ದೆ. ಆದರೆ ಅದೊಂದು ದಿನ  ಡೈರಿ ತಿರುವಿಹಾಕಿದಾಗ, ನಾನೇ ನನ್ನ ಬರಹಕ್ಕೆ ಹೌಹಾರಿದೆ. ಒಂದೊಮ್ಮೆ ನಾನು ಬದುಕಿರುವಾಗಲೇ ಯಾರಾದರು ಡೈರಿ ಓದಿದರೆ, ತೀರ ನನ್ನ ವಯಕ್ತಿಕ ಅನಿಸುವ ವಿಷಯಗಳು ನನ್ನ ಕೈ ಬರಹದಲ್ಲೇ ಮೊತ್ತೊಬ್ಬ ಓದಿದರೆ ಬಹಳ ಅಸಹ್ಯ ಅನಿಸಲಾರದೆ ? ಅದನ್ನೇ ನಮ್ಮ ವಿಕ್ನೆಸ್ಸ್ ಎಂದು ಜನ ಭಾವಿಸಲಾರರೆ ? ಗಲಿಬಿಲಿಯಾದೆ. ಒಂದು ದಿನ ಡೈರಿ ಬೆಂಕಿಗೆ ಅಹುತಿಯಾತು. ಅಲ್ಲಿಗೆ ಬದುಕಿನ ಕುರಿತಾಗಿ ಸಿಲ್ಲಿಯಾಗಿ ಬರೆಯುವುದನ್ನು ನಿಲ್ಲಿಸಿದೆ. ಆದರು ಮನಸ್ಸು ಕೇಳಬೇಕಲ್ಲ. ಅದಕ್ಕೆ ಬ್ಲಾಗ್ ಒಂದನ್ನು ಸುರು ಮಾಡಿದೆ.

ಆದರೆ  ಬ್ಲಾಗ್ ವೊಂದನ್ನು ತೆರೆದು, ಪಬ್ಲಿಕ್ ಆಗಿ ನನ್ನ ಬರಹ ನೀಡುವುದಕ್ಕೆ ಹೆದರಿಕೆಯಾಗಿತ್ತು. ನಾನು ಆಡುವ ಭಾಷೆ, ನನ್ನ ಅಕ್ಷರ ತಪ್ಪುಗಳು, ಯಾವುದೇ ಒಂದು ವಿಷಯವೆಂದಾಗ ಅಲ್ಲಿ ಭಿನ್ನಾಭಿಪ್ರಾಯಗಳು ಏಳುತ್ತವೆ, ಅಂತ ಸಮಯದಲ್ಲಿ ಹೇಗೆ ಬಗೆಹರಿಸಲಿ ಅನ್ನುವ ತೊಡಕು  ನನ್ನನ್ನು ಅಡಗಿಕೊಂಡಿರುವಂತೆ ಮಾಡಿತು.ನಾನು ಪರಿ ಪೂರ್ಣ ವ್ಯಕ್ತಿಯಾದಾಗ ಬರೆದರಾಯಿತು ಎನ್ನುವ ಕಲ್ಪನೆ ಇತ್ತು. ಆದರೆ ೧೬ ವರ್ಷಗಳ ಶಿಕ್ಷಣ ಮುಗಿಸಿ, ೬ ವರ್ಷಗಳೇ ಸಂದು ಹೋದರು ಪರಿಪೂರ್ಣತೆ ಅದೆಷ್ಟೋ ದೂರದಲ್ಲಿ ಇದೆ..! ಬಹುಶ: ಎಲ್ಲಿ ಆಕಾಶ ಭೂಮಿಯನ್ನು ಸಂಧಿಸುತ್ತದೋ ಅಲ್ಲಿರಬಹುದೋ ಏನೋ ? ಆದರೆ, facebook  ಮೂಲಕ ಓದುಗರು ನೀಡಿದ ಪ್ರತಿಕ್ರಿಯೆ ಧನಾತ್ಮವಾಗಿದ್ದರಿಂದ ಏನೋ ಒಂದು ಧೈರ್ಯ ಬಂತು. ಈ ಸಂದರ್ಭದಲ್ಲಿ ನನ್ನ ಬ್ಲಾಗ್ ನ ಪ್ರಥಮ ವರ್ಷಾಚರಣೆಯನ್ನು ಆಚರಿಸುವಲ್ಲಿ ನಿಮಗೂ ಸ್ವಾಗತಿಸುತ್ತೇನೆ.

ಇಂಥ ಬರಹಗಳ ನಡುವೆ ನನಗೆ ದು:ಖವಿದೆ, ಖೇದವಿದೆ. ಉಡುಪಿಯೆಂಬ ಊರಿನಲ್ಲಿ ನಾನು ಹುಟ್ಟದಿದ್ದರೂ ಆ ಊರಿನ ಸಂಸ್ಕೃತಿ, ಕಲೆ, ಸಾಹಿತ್ಯ, ಊಟ, ಶಿಕ್ಷಣ ಇತ್ಯಾದಿಗಳ ಕಾರಣಗಳಿಂದಾಗಿ ನಾನು ಕಂಡ ಕನಸುಗಳು ಅಷ್ಟೇ ಸೊಗಸಾಗಿದ್ದವು. ಜಾನ್ ಮರ್ಫಿ ಹೇಳುವಂತೆ, ಮನಸ್ಸಿನಲ್ಲಿ ಆಳವಾಗಿ ಕಾಣುವ "subconsicous mind" ಎಂದು ಒಂದು ಇರುತ್ತದೆಯಂತೆ. ಬಹುಶ ಆ ಭಾಗದ ಮನಸ್ಸಿನಲ್ಲಿ ನನ್ನ ಕನಸುಗಳು ಸೇರಿಕೊಂಡು ಇತ್ತ ಸಾಧಿಸಲಾಗದ-ಅತ್ತ ಬಿಟ್ಟು ಬದುಕಲಾರದ ನೋವು ನನಗೆ ಕಾಡಿತ್ತು. ಅದೊಂದು ದಿನ ರಾತ್ರಿ ಅತ್ತು ಬಿಟ್ಟೆ. ಮನಸ್ಸಿನಲ್ಲಿ ಬಹಳ ನೋವು, ಏನೋ ಒಂದು ಸಾಧಿಸಲಾಗದ ಗುರಿ, ಯಾರೊಂದಿಗೂ ಹೇಳಲಾಗದ ಯಾತನೆ, ಅಲ್ಪ-ಸ್ವಲ್ಪ ನನ್ನ ಬಗ್ಗೆ ತಿಳಿದ ಗೆಳೆಯರಿಂದಲೂ ತಾತ್ಸಾರ. ಇವೆಲ್ಲದರ ನೋವಿನಿಂದ ಹೊರಬರಲು ನನಗೆ ಯಾವ ದಾರಿಯು ಇರಲಿಲ್ಲ. ದು:ಖದ ಮಡುವಿನಲ್ಲಿ ಅರಳಿದ್ದೆ ಈ ಕನ್ನಡ ಕಥೆಗಳ ಒಂದು ಬ್ಲಾಗ್.

ಕನಸು-ಕಲ್ಪನೆಗಳು ಕೈಗೆ ನಿಲುಕದ  ವಿಚಾರಗಳು,
ಮನದಿಂದ ಕಿತ್ತೆಸೆದೆ ಉಡುಪಿಯೆಂಬ ಭಾವ,
ಮನಸ್ಸು ಇದ್ದರೆ ಬದುಕುವೆ ಸಾಧನೆಯ ಗೈದು..!,
ಕನಸುಗಳು ದೂರ ಸರಿಸಿ ಸರಿಸಿ  ಮೊತ್ತೊಮ್ಮೆ ಸರಿಸಿ.

ನನ್ನ ಬರಹಗಳು ಇಲ್ಲಿಯವರೆಗೆ ಸುತ್ತ ಮುತ್ತಣ ಸಣ್ಣ ವಿಷಯಗಳ ಕುರಿತಾಗಿ ಮಾತ್ರ ವಾಗಿತ್ತು. ಪ್ರೀತಿ-ದೇಶ-ಜಾತಿ-ಭಾವನೆಗಳು ಇವುಗಳೇ ನನ್ನ ಬರಹದ ಮುಖ್ಯ ವಿಷಯಗಳು. ಇನ್ನು ಮುಂದೆ ಇನ್ನು ಅನೇಕ ವಿಷಯಗಳನ್ನು ಬರೆಯ ಬೇಕು ಎಂದು ಕೊಂಡಿದ್ದೇನೆ.

ನನ್ನ ಕೆಲವು ಗೆಳೆಯರು ಪತ್ರಿಕೆಗಳಿಗೆ ಬರೆಯಲು ಸಲಹೆ ನೀಡಿದ್ದಾರೆ.ಆದರೆ, ಸಧ್ಯ ನಾನು ಉದುಪಿಯಂಬ ಊರಿನ ನೆರಳಿನಿಂದ ಸಂಪೂರ್ಣವಾಗಿ ಹೊರ ಬಂದಿಲ್ಲ... ಶ್ರೀ ಕೃಷ್ಣ ಮಠದ ಸಭಾಂಗಣದ ಸಾಂಸ್ಕೃತಿಕ ಪ್ರಪಂಚ ವಾರದ ಕೊನೆಗೊಮ್ಮೆಯಾದಾರು ನನ್ನ ಕಣ್ಣ ಮುಂದೆ ನಾಟ್ಯ ಮಾಡುತ್ತಲೇ ಇದೆ. ಎಲ್ಲಿಯ ತನಕ ಉದುಪಿಯೆಂಬ ಕಲ್ಪನೆಗಳು ನನ್ನ ಸ್ಮೃತಿ ಪಟಲದಿಂದ ದೂರ ಸರಿಯುವದಿಲ್ಲವೋ ಅಲ್ಲಿಯ ತನಕ ನಾನು ನೋವನ್ನೇ ಬರೆಯುತ್ತೇನೆ ಅನಿಸುತ್ತಿದೆ. ಏನೇ ಇದ್ದರು ನನ್ನ ಓದುಗರ ಆಕಾಂಕ್ಷೆಗೆ ನಾನು ಭಂಗವನ್ನುಂಟು ಮಾಡಲಾರೆ... ಮುಂದೊಂದು ದಿನ ನಿಮ್ಮ ಆಸೆಯನ್ನು ಪೋರೈಸುತ್ತೇನೆ.

ಇವತ್ತು ತುಂಬಾ ಬ್ಯುಸಿ ಯಾಗಿದ್ದೇನೆ. ಕೆಲಸ ಹಾಗೂ ಇನ್ನು ಕೆಲವು ವಿಶೇಷ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಂತದಲ್ಲಿದ್ದೇನೆ. ಮುಂದಿನ ದಿನಗಳಲ್ಲಿ ಒಳ್ಳೆಯ ಬರಹದೊಂದಿಗೆ ಬರುತ್ತೇನೆ.

ಸದಾ ನನ್ನ ಜೊತೆ ಇರ್ತಿರಲ್ವಾ?

                                                                                            ಇಂತಿ ನಿಮ್ಮ ಪ್ರೀತಿಯ ಭಾವಜೀವಿ
                                                                                                                        ವೆಂಕಿ.

Saturday, August 10, 2013

ಬದುಕು ಪುಸ್ತಕಗಳಿಲ್ಲ, ಮಾರ್ಕ್ಸ್ ಗಳಲಿಲ್ಲ ಕಣೋ..!

ಕಳೆದೆರಡು ವಾರಗಳಿಂದ ಹುಬ್ಬಳಿ, ಅಂಕೋಲಾ, ಮಣಿಪಾಲ ಹೀಗೆ ಹಲವಾರು ಊರುಗಳನ್ನು ಸುತ್ತುದಿದ್ದೇನೆ. ಬಿಡುವಿಲ್ಲದ ಸಂಚಾರದ ಪರಿಣಾಮವಾಗಿ ಬರೆಯಲು ನನಗೆ ಸಮಯ ಹಾಗೂ ಮಾನಸಿಕವಾದ ಅವಕಾಶ ಸಿಗಲೇ ಇಲ್ಲ. ಮತ್ತೆ ತಿರುಗಿ ಬೆಂಗಳೂರಿಗೆ ಬಂದು ಸಾವಿರಾರು ಜನರ ಮಧ್ಯೆ ನಾನು ಒಬ್ಬನೇ, ಏಕಾಂಗಿ ಅನ್ನುವ ಮನೋಭಾವ ತಲೆ ದೋರಿದೆ.

ನಾನು ಹುಬ್ಬಳ್ಳಿಗೆ ಹೋದಾಗ, ನನ್ನ ಹಳೆಯ ಗೆಳೆಯನೊಬ್ಬನನ್ನು ಭೇಟಿಯಾಗಿದ್ದೆ.ಅವನು ತನ್ನ ಗೆಳೆಯನೊಬ್ಬನ ಕೂಡಿಕೊಂಡು ಸಂಜೆಯ ಸ್ನಾಕ್ಸ್ ಗೆಂದು ಅಯೋಧ್ಯ ಹೋಟೆಲಿಗೆ ಬಂದ. ಅದೇ ದಿನ ರಾತ್ರಿ ೮ ಗಂಟೆಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ನನ್ನ ಪ್ರಯಾಣ ನಿಗದಿಯಾಗಿತ್ತು.

ಬಹಳ ದಿನಗಳ ನಂತರ ಒಂದಡೆ ಸೇರಿದ ನಮ್ಮಲ್ಲಿ ಬಹಳ ವಿಷಯಗಳು ಇದ್ದವು. ನಾವು ಗೆಳೆಯರು ಅನಿಸಿಕೊಂಡರು ಫೋನ್ ನಲ್ಲಿ ಮಾತನಾಡುವುದು ಅಪರೂಪವೇ. ಅವನ ಗೆಳೆಯನು ಸೇರಿದ್ದರಿಂದಲೂ ಹೊಸ ವ್ಯಕ್ತಿಯ ಪರಿಚಯ, ಮಾತನಾಡಲು  ಹಲವಾರು ವಿಷಯಗಳು ಇದ್ದವು. ತಿಂಡಿ-ಪಾನೀಯಗಳು ಮುಗಿಸಿ ಇಂದಿರಾ ಗಾಜಿನ ಮನೆಯ ಹುಲ್ಲುಗಾವಲಿನ ಮೇಲೆ ಕುಳಿತು ಕುಶಲೋಪರಿ ಪರಿಭಾಷೆಯಲ್ಲಿ ತೊಡಗಿದಾಗ, ನೌಕರಿ, ಮನೆ, ಅಪ್ಪ-ಅಮ್ಮ, ಮದುವೆ ಹೀಗೆ ಹಲವಾರು ವಿಷಯಗಳು ಬಂದು ಹೋದವು. ಒಟ್ಟಾರೆ, ಒಂದೇ ವಾಕ್ಯದಲ್ಲಿ ಹೇಳುವುದಾದರೆ, "ಸೆಟ್ಲ್ ಅದೇನ್ಲೇ ಮಗನೆ ?".

ಆದರೆ ಮದುವೆ ವಿಷಯ ಬಂದಾಗ, ಆ ವಿಷಯದ ವಿಸ್ತಾರ, ಅಳ ಎಷ್ಟೊಂದು ಇರುತ್ತದೆ ಅನ್ನುವುದು ಹೇಳಲು ಸಾಧ್ಯವಿಲ್ಲ. ಮದುವೆಯೊಂದು "ಸರಿಯಾದ ನಾರಿಯೊಂದಿಗೆ" ನಡೆದರೆ ಬದುಕು, ಅದೊಮ್ಮೆ " ವೈರಿಯಾದ ಮಾರಿಯೊಂದಿಗೆ" ನಡೆದರೆ? ಜೀವನ ಮುಕ್ತಯವೋ ಅಥವಾ ಮತ್ತೊಂದು ರೀತಿಯ ಆರಂಭವೋ? ನನಗೆ ಗೊತ್ತಿಲ್ಲ. ಆದರೆ, ನನ್ನ ಗೆಳೆಯನ- ಗೆಳೆಯನ ಬದುಕಿನಲ್ಲಿ ನಡೆದ ಕತೆ, ಹುಬ್ಬಳಿಯ ಗಾಜಿನ ಮನೆಯ ನವಿರಾದ ಹುಲ್ಲುಗಾವಲಿನ ಮೇಲೆ ತಂಗಾಳಿ ಸೇವಿಸುತ್ತ, ಗೆಳೆತನದ  ರೋಮಾಂಚನಕಾರಿ ಮಾನಸಿಕ ಉಲ್ಲಾಸದ ನಡುವೆಯೂ ಕಣ್ಣೀರು ತರಿಸಿದ ಕತೆ.

ಆತ ಪಕ್ಕ ಉತ್ತರ ಕನ್ನಡಿಗ. ಭಾಷೆಯ ಗಡಸುತನ, ಬಳಸುವ ಶಬ್ಧಗಳು, ಅಮ್ಮ ಅನ್ನುವ ಬದಲಾಗಿ "ಅವ್ವ" ಎನ್ನುವ ಮಾತು ಎಲ್ಲವು "ಆ ನನ್ನ ಮಗ" ಉತ್ತರ ಕರ್ನಾಟಕದವನು ಎಂದು ಹೇಳಲು ಸಾಧ್ಯವಿತ್ತು. ಗೆಳೆಯನ ಗೆಳೆಯ ನನಗೂ ಗೆಳೆಯ ತಾನೇ? ಅಂತೂ ನಾವು ಮೂರೂ ಜನ ಗೆಳೆಯರು. ಆತ MBA ಪಧವಿ ಧರ. ಪ್ರತಿಷ್ಟಿತ ಬ್ಯಾಂಕವೊಂದರಲ್ಲಿ  "Financial Analysyst". ಹಾಗಂದೆರೆನು? ನನಗೆ ಗೊತ್ತಿಲ್ಲ. ಅವನು ಒಳ್ಳೆಯ ಕುಟುಂಬದ  ವ್ಯಕ್ತಿ. ಅವನಿಗೆ ಕಾಲೇಜಿನಲ್ಲಿ ಒಂದು crush ಇದ್ದಿತ್ತಾದರು , ಮಾನ-ಮರ್ಯಾದೆ, ಮನೆತನದ ಗೌರವ ಇತ್ಯಾದಿ ಕಾರಣಗಳಿಂದಾಗಿ ಅವನು ಸ್ವಲ್ಪವೂ ಪ್ರಯತ್ನ ಮಾಡಿರಲಿಲ್ಲ. ಒಳ್ಳೆಯ ಓದು ಮುಗಿಸಿ, ಒಳ್ಳೆಯ ಬ್ಯಾಂಕ್ ಒಂದರಲ್ಲಿ ಒಳ್ಳೆಯ ಸ್ಯಾಲರಿ ಪಡೆಯುತಿದ್ದ ನಮ್ಮ ಒಳ್ಳೆಯ ಗೆಳೆಯ. "ಮಗನೆ, ಮೂವತ್ತು ದಾಟುತ್ತ ಇದೆ(೨೬ ವಯಸ್ಸು), ಬೇಗ ಒಂದು  ಸೊಸೆ ತರಬೇಕು" ಎಂದು ಮನೆಯವರೆಲ್ಲ ಹೇಳಿದ ಮೇಲೆ, ಸಹಜವಾಗಿ ಒಪ್ಪಿಕೊಂಡು, ೨ ವರ್ಷಗಳ ಹಿಂದೆ ಹುಡುಗಿಯನ್ನು ಹುಡುಕಲು ಪ್ರಾರಂಭ ಮಾಡಿದರಂತೆ. "MBA  ಪದವಿಧರ...! ಪದಾ ರಹೇ ಹೈ"....ಎನ್ನುವಂತೆ,  ಅಕ್ಕ, ಅವ್ವ, ಸೋದರ ಮಾವ, ಮತ್ತೊಬ್ಬ ಹಿರಿಯ ಒಳಗೊಂಡ ಕೋರ್ ಕಮಿಟಿ ನಿರ್ಧಾರವಾಗಿ ಮೂರುಜನ ಹುಡುಗಿಯರನ್ನು ತೋರಿಸಿಯೂ ಆಯಿತು. "ನೋಡಲು ಚೆನ್ನಾಗಿರುವ ಒಳ್ಳೆಯ ಗುಣದ ಒಂದು ಹುಡುಗಿ ಇದ್ದಾರೆ ಸಾಕು" ಎನ್ನುವುದ ಮಾತ್ರ ಇವನು ಕೋರ್ ಕಮಿಟಿಗೆ ಮಾಡಿದ ಶಿಪಾರಷು. ಇವನು ನೋಡುವುದು ಮಾತ್ರ- ಕಾಲು ಗುಣ, ಕೈ ಗುಣ, ಹವ್ಯಾಸಗಳು ಎಲ್ಲದರ ಬಗ್ಗೆ ಅವ್ವ ನೋಡಿಕೊಳ್ಳುತ್ತಿದ್ದರೆ;  ಆಕಾಶದಲ್ಲಿದ ಗ್ರಹಗಳು ಪೇಪರ್ ಮೇಲೆ ಹೇಗೆ ಕುಣಿಯುತ್ತವೆ ಎಂದು ಹಿರಿಯರು ನೋಡಿಕೊಳ್ಳುತಿದ್ದರು. ಕೆಲವೊಮ್ಮೆ ಇವೆಲ್ಲ ಯಾಕಪ್ಪ ಅನ್ನುವ ನೋವು ಅವನಿಗೆ ಅನಿಸಿದ್ದರು ಸಂಪ್ರದಾಯದ ವಿರುದ್ಧ ಬಂಡಾಯ ಏಳುವ ಮನಸ್ಥಿತಿ ಅವನದಲ್ಲ. ಇಂಥ ವಿಷಯದಲ್ಲಿ ಬಹಳ ವಿಚಾರ ಮಾಡಬೇಕು-ಹಿರಿಯರಿಂದ ಸೈ ಎನಿಸಿಕೊಳ್ಳಬೇಕಾದರೆ  ಅವರಾಡುವ ನಾಟಕಗಳಿಗೆ ನಾವು ತಲೆದೂಗ ಬೇಕು , ಇಲ್ಲ ಅಂದರೆ  "ವಿದ್ಯಾ ವಿನಯ ಸೋಭತೆ:", "ಈಗಿನ ಕಾಲದ ಹುಡುಗರಿಗೆ ಒಂದಿಷ್ಟು ಡಿಗ್ರೀ ಸಿಕ್ಕರೆ ಸಾಕು, ಎಲ್ಲವು ತಮಗೆ ಗೊತ್ತಿದೆ ಅಂತರೆ" ಹೀಗೆ ಹಲವಾರು ವಾಕ್ಯಗಳು ಕೇಳಿ ಬಿಸಿ ರಕ್ತ ಕಂಟ್ರೋಲ್ ಮಾಡಿಕೊಳ್ಳುವ ಕಲೆ ಗೊತ್ತಿರಬೇಕು.

ಮೂರನೆಯ ಹುಡುಗಿಯ ಮನೆಯ ಬಾಗಿಲು ಇಷ್ಟವಾಯಿತು; ಮನೆಯ ಸ್ಟೇಟಸ್ ಒಪ್ಪಿತವಾಯಿತು; ಆಕಾಶದ ಸೂರ್ಯ-ಚಂದ್ರಾದಿಗಳು  ಇನ್ನು ಮುಂದೆ  ತಮ್ಮ  ಹೆಸರು ಹಾಳುಮಾಡಬೇಡಿ ಅನ್ನುವಂತೆ ಎಲ್ಲವು ಸರಿಯನಿಸಿದರು..ಅರ್ಥಾತ್ ಜಾತಕ ಕೂಡಿತು, ಮೊದಲು ಪರಿಚಯವಿಲ್ಲದ ಮನೆ, ನೆಂಟರು ಎಂಬ ಭಾವದಿಂದ, ಮನೆಯ ಪ್ರತಿಯೊಂದು ವಿಷಯವು ಗೌರವದಿಂದ ನೋಡುವ ಕಾಲ ಬಂತು. ಅದೊಂದು ದಿನ ಗುರು-ಹಿರಿಯರ ಸಮ್ಮುಖದಲ್ಲಿ  ವಿವಾಹ ನಿಶ್ಚಯ ಮಾಡಿ, ಉಂಗುರ ಬದಲಾವಣೆ ನಡೆದು ಹೋಯಿತು. ಅಂತೂ ಕೊನೆಗೂ ಹುಡುಗನಿಗೆ ಹುಡುಗಿಯ ಜೊತೆ ಮಾತನಾಡುವ ಯೋಗ ಬಂತು. ಇಬ್ಬರು ಮಾತನಾಡಿದರು. ಫೇಸ್ಬುಕ್ ನಲ್ಲಿ ಫೋಟೋ ಅಪ್ಲೋಡ್ ಆದವು, ಗೆಳೆಯರಿಂದ " made for each other", "Very nice pair", "settled man...congrats", "looking so beatiful" ... ಹೀಗೆ ಸಾವಿರಾರು ಕಾಮೆಂಟ್ಸ್ ಗಳು ತುಂಬಿದವು.  ಮದುವೆಯ ಟೈಮರ್ ಕೌಂಟ್ ಡೌನ್ ಆರಂಭಿಸಿತ್ತು.

ಆದರೆ,
     ಆ ಹುಡುಗಿ ಪದವಿಧರೆಯಾದರು ತನ್ನ ಅಂತರಂಗದ ವಿಷಯಗಳನ್ನು ಹುಲಿಯಂತಿದ್ದ ತನ್ನ ಅಪ್ಪನ ಮುಂದೆ ಬಿಚ್ಚಿ ಹೇಳುವ ಹಾಗಿರಲಿಲ್ಲ. ಅಮ್ಮನ ಮುಂದೆ ಹೇಳಿಕೊಂಡಿದ್ದರು ಪ್ರಯೋಜನವಾಗುತ್ತಿರಲಿಲ್ಲ. ಮದುವೆಯ ಗಂಡುಗಳು ಬಂದು ಹೋದರು ತನ್ನ  ಅಂತರಂಗದಲ್ಲಿ ತನ್ನ ಕಾಲೇಜಿನ ಗೆಳೆಯನೊಬ್ಬನಿಗೆ  ನೆಲೆ ನೀಡಿದ್ದೇನೆ ಎಂದು ಎಲ್ಲಿಯೂ ಬಿಚ್ಚಿ ಹೇಳಲಿಲ್ಲ. ಅಪ್ಪ-ಅವ್ವನಾ  ಮಾತಿಗೆ ಒಪ್ಪಿಕೊಂಡು, ಮನೆಯಲ್ಲಿ  ಕೊನೆಯ ದಿನ ಕಳೆಯುವ ತನಕವೂ ಸದ್ಗುಣ ಸಂಪನ್ನೆ ಎಂದೇ ಸಾರಿದಳು.

   ಪಾಪ, ಆ ಭಾವಿ ಗಂಡ ತಂದುಕೊಟ್ಟ ಬೆಲೆ ಬಾಳುವ ಮೊಬೈಲ್ ಗಿಫ್ಟ್, ಮನೆಯ ಒಂದು  ಮುಲೆಯಲ್ಲಿರಿಸಿದ್ದಳು. ಅವನು ಕೇಳಿದರೆ ಮದುವೆ ಯಾದ ಮೇಲೆ ಎಂದು ಬಳಸುವುದಾಗಿ ಹೇಳಿ  ಆ ಗಿಫ್ಟ್ ವಿಷಯದಿಂದ ನುಣುಚಿ ಕೊಳ್ಳುತಿದ್ದಳು. ಅವನ ಕಾಲ್ ಮಾಡಿದಾಗಲೆಲ್ಲ, wait  ಎಂದು ಮೆಸೇಜ್ ಕಲಿಸುತಿದ್ದಳು ಅಥವಾ ಇವಳ ಮೊಬೈಲ್  ಬ್ಯುಸಿ ಸಂದೇಶ ಕೊಡುತ್ತಿತ್ತು. ಇಷ್ಟು ಸಣ್ಣ ವಿಷಯಕ್ಕೆಲ್ಲ ಅವಳಿಗೆ ಪ್ರಶ್ನಿಶ ಬಾರದೆಂದು ಸುಮ್ಮನಾಗಿದ ಗೆಳೆಯ ಮದವೆಯ ಟೈಮರ್ ೧೫ ದಿನಗಳ ಕೌಂಟರ್ ಡೌನ್ ತೋರಿಸುವಾಗ ನೇರವಾಗಿ ಅವಳ ಮನೆ ಪ್ರವೇಶ ಮಾಡಿ, ಮದುವೆಯ ಕುರಿತಾಗಿ ಮಾತನಾಡುತ್ತಾನೆ. ಆದರೆ, ಪ್ರೀತಿಯಿಂದ ಹುಡುಗಿ ಮನೆಯ ಮಹಡಿ ಮೇಲೆ ಕರೆಯಿಸಿ ಹೇಳಿದ್ದೇನು ಗೊತ್ತೇ," ನನಗೊಂದು ಭಾಷೆ ಕೊಡ್ತಿಯ?"  ಅವನು, ನಾಳೆ ಹೆಂಡತಿಯಾಗಿ ಬರುವಳು ಏನು ಕೇಳಿಯಾಳು ಎಂದುಕೊಂಡು ನಗುತ್ತಲೇ ಹೇಳು ನಿನ್ನ ಭಾಷೆ ಎಂದು ಕೈ  ಒಡ್ಡಿದ, " ನಾನು ಹೇಳುವ ವಿಷಯ  ಮದುವೆಯ ಮುಹೂರ್ತ ಮುಗಿಯುವವರೆಗೆ ಯಾರಿಗೂ ಹೇಳುವ ಹಾಗಿಲ್ಲ. ನಾನು ಇವಗಲೇ ಒಬ್ಬನನ್ನು ಪ್ರೀತಿಸ್ತ ಇದ್ದೇನೆ. ನಾನು ಅಪ್ಪ-ಅಮ್ಮನಿಗೆ ಹೆದರಿ ಈ ವಿಷಯ ಹೇಳಿಲ್ಲ. ದಯವಿಟ್ಟು ಈ ಮದುವೆ ನೀನೆ ಕ್ಯಾನ್ಸಲ್ ಮಾಡಬೇಕು. ನಾನಂತೂ ನಿನ್ನ ಮದುವೆಯಾಗುವುದಿಲ್ಲ". 

ನಾಲ್ಕು ತಿಂಗಳಿಂದ  ತನ್ನ ಹೆಂಡತಿಯಾಗುವಲೆಂದು ಯೋಚಿಸಿ, ಸಾವಿರಾರು sms  ಮಾಡಿ, ಗಿಫ್ತನ್ನು  ಕೊಟ್ಟು, ತನ್ನ ಹೆಂದಿತಿಯಾಗುವ ಹುಡುಗಿಯನ್ನು ಫೇಸ್ಬುಕ್ ಮೂಲಕ ಎಲ್ಲರಿಗು ತೋರಿಸಿ ಇದ್ದ ಇವನಿಗೆ ಅವಳ ಮಾತು ನಂಬುವುದು ಸುಲಭದ ವಿಷಯವಾಗಿರಲಿಲ್ಲ. ಮುಂದಿನ ಕ್ಷಣದಲ್ಲಿ ಏನಾಗುವುದೋ ತಿಳಿಯದ ಆತ ಹೇಗಾದರೂ ಆ ಮನೆ ಖಾಲಿ ಮಾಡಬೇಕೆಂದು ವೇಗಾವಾಗಿ ತನ್ನ  ಮನೆಗೆ ಬಂದ. ಮುಂದಿನ ಮೂರೂ ತಿಂಗಳು ಅವನ ಬದುಕು ಹೇಗಿತ್ತು, ಹೇಗಾಯಿತು ಆ ಕಥೆ ಭಯಾನಕ. ಯಾವುದಾದರು ಒಂದು ಸಿನೆಮಾದ ದುರಂತ ಕತೆ ನೆನಪಿಸಿಕೊಳ್ಳಿ.

ಈ ಮದುವೆ ನಡುಯುವುದಿಲ್ಲ ಎಂದು ಮನೆಯಲ್ಲಿ ತಿಳಿಯುತಿದ್ದಂತೆ ಹುಲಿ ಅಪ್ಪನಿಗೆ ಪಂಗನಾಮ ಹಾಕಿ, ತನ್ನ ಪ್ರಿಯಕರನ ಜೊತೆ ಒಡಿ ಹೋಗಿ, ಕೆಲವು ತಿಂಗಳು  ಅಲ್ಲಿ-ಇಲ್ಲಿ ಅಲೆದಾಡಿ, ಕರುಳ ಕುಡಿಯ ನಿರ್ಧಾರ ಒಳ್ಳೆಯದೇ ಇರಬಹುದು ಎಂದು  ಮಗಳನ್ನು ಮತ್ತೆ ಕ್ಷಮಿಸಿ ಅವಳ ಪ್ರಿಯಕರನನ್ನು ಅಳಿಯನೆಂದು ಸ್ವೀಕರಿಸಿದರು. ಅಲ್ಲಿಗೆ ಅವಳ ಜೀವನ ಮುಂದುವರಿಯಿತ್ತು.

ಕೆಲವು ತಿಂಗಳು ಮುಗಿದ ಬಳಿಕ, ಅವಳನ್ನು ಮರೆತು ಮತ್ತೆ, ಹುಡುಗಿಗಾಗಿ ಪರದಾಟ. ಗ್ರಹಗಳು ದೂರವಾಗಿ ಎಲ್ಲ ಕೂಡಿದರೂ-" ಹಿಂದೆ ಒಂದು engangement  cancel  ಆಗಿತ್ತಂತೆ" ಎಂಬ ವಿಷಯ ಭಾವಿ ಮಾವನ ಮನೆ ಮಂದಿಯ ಕಿವಿಗೆ ಬಿಳುತಿದ್ದಂತೆ ಎಲ್ಲರು ಶನಿ ಗ್ರಹ ದಂತೆ ಕಾಡಿ,  ಹುಡುಗಿಗೆ ಒಪ್ಪಿತವಲ್ಲ ಎಂಬ ಸಂದೇಶದೊಂದಿಗೆ ಹಿಂತಿರುಗುತ್ತಿದ್ದ. ಹಾಗೆ ಅವನು ನೋಡಿದ ಹುಡುಗಿಯರ ಸಂಖ್ಯೆ "ಕೇವಲ" ೬೧; ಆದರೂ ಅವನನ್ನು ಹಿಂಬಾಲಿಸುವಳು ಒಬ್ಬಳು ಇರಲಿಲ್ಲ.

ಇನ್ನು ಹುಡುಗಿ ನೋಡಲೋ ಬೇಡವೋ ಎಂಬ ತನ್ನ ನಿರ್ಧಾರದ ಕುರಿತಾಗಿ ತನ್ನ ಗೆಳೆಯನ ಜೊತೆ ಮಾತನಾಡಲು ಹುಬ್ಬಳಿಗೆ ಬಂದಿದ್ದ. ಇಷ್ಟು ಕತೆ ಕೆಳುತಿದ್ದಂತೆ, " ನಿನ್ನ ಬಾಳು ಹಾಳು ಮಾಡಿದವಳು  ಮೊದಲು ಮದುವೆಯಾಗಲು ಒಪ್ಪಿದ ಹುಡುಗಿ ತಾನೆ?. ಅವಳು ಎಲ್ಲಿದ್ದಾಳೆ ?, ಅವಳಿಗೆ ಮೊದಲು ಬುದ್ದಿ ಕಲಿಸಬೇಕು" ಎಂದು ನನ್ನ ಗೆಳೆಯ ಕೋಪಾವೇಶದಿಂದ ನುಡಿದಾಗ, " ಅಲ್ಲಲೇ, ನಿನ್ಯಾಕೆ ಅವಳ ಬಗ್ಗೆ ದ್ವೇಷ ಕಾರ್ತಿಯಾ?, ಅವಳು ತನ್ನ ಆಯ್ಕೆ ಮೊದಲೇ ಮಾಡಿದ್ದಳು. ಆದರೆ ಅಪ್ಪ-ಅಮ್ಮಗೆ ಹೆದರಿ ಹೀಗೆ ಮಾಡಿದ್ದಾಳೆ. ಅವಳು ಬದುಕಲಿ ಬಿಡು. ತಪ್ಪು ನನ್ನದು... ಕೇವಲ ಮಾರ್ಕ್ಸ್ ಶೀಟ್ ನೋಡಿ ಬದುಕು ನಿರ್ಧರಿಸಲು ಹೊರಟವನು ನಾನು...! ಅದೊಮ್ಮೆ ಕಾಲೇಜ್ ಡೇಸ್ ನಲ್ಲಿ ನನ್ನದು ಅಂತ ಒಂದು ಪ್ರೀತಿ ಇದ್ದಿದ್ದರೆ, MBA ಪದವಿಧರ  ಇವತ್ತು ೬೧  ಹುಡುಗಿಯರನ್ನು  ನೋಡಿ ಮದುವೆ ಬೇಕಾ ಬೇಡ್ವಾ ಅನ್ನುವ ಸಿದ್ಧಾಂತಕ್ಕೆ ಬರುವ ಸಾಧ್ಯತೆ ಗಳಿರಲಿಲ್ಲ. ಬದುಕು ಪುಸ್ತಕಗಳಿಲ್ಲ, ಮಾರ್ಕ್ಸ್ ಗಳಲಿಲ್ಲ  ಕಣೋ. ಬರ್ತೀನಿ" ಎಂದು  ಹೊರಟೆ ಹೋದ. ಇದೆ ಮೊದಲ ಬಾರಿಗೆ ಅಪರೂಪದ ಪ್ರೀತಿಯ ಸಿದ್ಧಾಂತಕ್ಕೆ ನನ್ನ ಒಂದು ಕಣ್ಣಿರ ಹನಿ ನೆಲಕ್ಕೆ ಬಿತ್ತು.

ಇಲ್ಲಿ ಯಾರದು ತಪ್ಪು ? ಯಾವುದು ಪ್ರಶ್ನೆ? ಯಾವುದು ಉತ್ತರ? ನನಗೆ ತಿಳಿಯಲಿಲ್ಲ. ಇನ್ನು  ನನ್ನ ಬಸ್ಸು ಹತ್ತಲು ೧೫ ನಿಮಿಷಗಳಿದ್ದವು. ಮೌನಕ್ಕೆ ಶರಣಾಗಿದ್ದ ಗೆಳೆಯನ ಹೆಗಲು ಮುಟ್ಟಿ, " ಪ್ರೀತಿ ಪ್ರೇಮದ ವಿಷಯದಲ್ಲಿ ಈ ಜಗತ್ತೇ ಹೋರಾಟದಲ್ಲಿದೆ. ಯಾವ ವಿಜ್ಞಾನ ಕೂಡ ಉತ್ತರ ಹೇಳಲ್ಲ. ೫೦ ನೆ ಶತಮಾನ ಬಂದರು ಇಂಥ ಸಮಸ್ಯೆಗಳು ಇರುತ್ತವೆ ಅನಿಸುತ್ತಾ ಇದೆ" ಎಂದು ಹೇಳಿ, ಒಮ್ಮೆ watch ನೋಡಿ, ಅವನಿಗೆ ಬಸ್ಸಿನ ಸಮಯವಾಗಿದೆ ಎಂದು ಅರಿವು ಮಾಡಿಸಿ ಬಸವ ವನಕ್ಕೆ ಬಂದು ಬಸ್ಸು ಹತ್ತಿದೆ.

Sunday, July 21, 2013

ಮೋದಿಯ ಹಾದಿ ಗದ್ದುಗೆ ಯತ್ತ...!

ಇತ್ತೀಚಿಗೆ facebook,twitter ಗಳಿಂದ ಹಿಡಿದು ಎಲ್ಲ  ಸಮೂಹ ಮಾಧ್ಯಮಗಳು ನರೇಂದ್ರ ಮೋದಿಯ ಬಗ್ಗೆ ಬಹಳ ಹೋಗುಳುತ್ತಿವೆ;ಬಹಳ ಜನ ಈ ವಿಷಯದ ಕುರಿತಾಗಿ 'ಚಿಂತನೆ'ಗೊಳಗಾಗಿರುವುದು ಕಂಡು ಬಂದರೆ, ಕಾಂಗ್ರೆಸ್ಸಿಗರು ಮಾತ್ರ 'ಚಿಂತೆ'ಗೆ ಒಳಗಾಗಿದ್ದಾರೆ. ಮತದಾರ ಯಾವತ್ತು ಪಕ್ಷ, ವ್ಯಕ್ತಿಯನ್ನು ಗಮನಿಸುವುದಿಲ್ಲ ಬದಲಾಗಿ ಪುಂಕಾನುಪುಂಕವಾಗಿ ರಾಜಕೀಯ ನಾಯಕರ ಬಾಯಿಯಿಂದ ಬರುವ ಪ್ರಣಾಳಿಕೆಗಳಲ್ಲಿ ಯಾವದನ್ನು ಭರವಸೆದಾಯಕವೆಂದು ಗಮನಿಸುತ್ತ ಇರುತ್ತಾನೆ. ಹೀಗಾಗಿ,"ಮಾತುದಾರ(ರಾಜಕಾರಣಿ)" ರ ಬಗ್ಗೆ ಗಮನವಿಟ್ಟು ನೋಡುತ್ತಾನೆ ಒಳ್ಳೆಯ "ಮತದಾರ". 'ಪ್ರಣಾಳಿಕೆಯ  ಜೊತೆಗೆ ಅದನ್ನು ಇಡೆರಿಸುತ್ತೇನೆ'  ಎಂಬ ರಾಜಕೀಯ ಇಚ್ಚಾಶಕ್ತಿಯ  ಪ್ರದರ್ಶನ  ಇಂದಿನ ಅವಶ್ಯಕತೆ.

೬೦ರ ಸಂಭ್ರಮದಲ್ಲಿರುವ ಭಾರತಿಯ ಪ್ರಜಾಪ್ರಭುತ್ವಕ್ಕೆ ಅದೆಷ್ಟೋ ಚುನಾವಣೆಗಳು ನಡೆದು ಹೋಗಿಲ್ಲ?  ಅದೆಷ್ಟೋ ಪ್ರಣಾಳಿಕೆಗಳು ಚಪ್ಪಾಳೆಗಳ ಮೂಲಕವಾಗಿ ಸ್ವಾಗತಿಸಲ್ಪಟ್ಟು, ಸಾಮಿಯನ  ಕೆಳಗಿಲಿಸುವಾಗಲೇ ಕೊನೆ ಕಂಡಿಲ್ಲ? ಸತ್ಯವಾಗಿ ಆಡಿದಂತೆ, ಜನತೆಯ  ಭರವಸೆಗೆ ಕುಂದು ಬರದಂತೆ ಜಾರಿಗೆ ತಂದ ಪ್ರಣಾಳಿಕೆಗಳೆಷ್ಟು? ಹೀಗಾಗಿ ಪ್ರಣಾಳಿಕೆಗಳು ಕೇಳಿ ಕೇಳಿ ಸಾಕಾಗಿದೆ ಅನ್ನುವಷ್ಟು ನೋವು ಜನಕ್ಕೆ ಇದೆ. ಜನಕ್ಕೆ ಬೇಕಾಗಿರುವುದು ಪ್ರಣಾಳಿಕೆಗಳ ಉದ್ದುದ್ದ  ಭಾಷಣಗಳಲ್ಲ; ಬಣ್ಣ-ಬಣ್ಣಗಳಿಂದ ರಂಜಿತವಾದ ಪ್ರಣಾಳಿಕೆಯ  pamplet ಗಳಲ್ಲ,"ಭಾರತ ನವ ನಿರ್ಮಾಣ" ಎಂದು ಸಂಗೀತ ಸೇರಿಸಿ ಗುನುಗುವ ಹಾಡಲ್ಲ; ಬದಲಾಗಿ ಇಂದು ಹೇಳಿದ್ದನ್ನು ನಾಳೆ ಮಾಡಿಯೇ ತೀರುತ್ತೇನೆ ಎನ್ನುವ  "ಭರವಸೆಯ ನಾಯಕ". ಅಂತ ನಾಯಕತ್ವದ ಹುಡುಕಾಟದಲ್ಲಿ ಇದ್ದಾನೆ ಇಂದಿನ ಪಜ್ನಾವಂತ ಮತದಾರ. ಆ ಭರವಸೆಯಾಗಿ ಇಂದು ಗೋಚರಿಸುತ್ತಿರುವರು "ನರೇಂದ್ರ ಮೋದಿ ಮಾತ್ರ". ನೀವು ಇದನ್ನು ಗಮನಿಸಿರಬಹುದು-ಯಾರು ಕೂಡ BJP  ಬೇಕು ಅನ್ನುತ್ತಿಲ್ಲ, ಬದಲಾಗಿ ನರೇಂದ್ರ ಮೋದಿ ಬೇಕು ಅನ್ನುತಿದ್ದಾರೆ.

ಮೋದಿಯ ನಾಯಕತ್ವದ ಬಗ್ಗೆ  ಅಂತ ಒಂದು ಭರವಸೆ ಮೂಡಿರುವುದು ಇಂಗ್ಲಿಷ್ ಸೆ ಇರದ,  ಹಿಂದಿ ಭಾಷೆಯಿಂದಲೇ  ಮಾಡಿದ ಭಾಷಣಗಳಿಂದಲ್ಲ; ಯಾರಿಂದಲೂ ಪ್ರಶ್ನಿಸಿಲಾಗದ ನಾಯಕತ್ವ ಅವರಿಗೆ ಬಂದಿರುವುದು, ಅದನ್ನು ಜನ ಒಪ್ಪಿರುದಕ್ಕೆ ಕಾರಣ ಅವರು ಗುಜರಾತನಲ್ಲಿ ತಂದಿರುವ ಬದಲಾವಣೆ. ನಾವು ಯಾರು ಕೂಡ ಗುಜರಾತನ್ನು ನೋಡಿದವರಲ್ಲ,ಆದರೆ ಒಟ್ಟಾರೆಯಾಗಿ  ಸಮೂಹ ಮಾಧ್ಯಮಗಳು  ಟ್ವಿಟ್ಟರ್-ಫೇಸ್ಬುಕ್  ಅವಲೋಕಿಸಿದಾಗ ಸಿಗುವ ಧನಾತ್ಮಕ ಧೋರಣೆಗಳಿಂದ ಮೋದಿ ಯೊಬ್ಬ ಬದಲಾವಣೆಯ ಹರಿಕಾರ ಎಂದೇ ಭಾವಿಸುತ್ತೇವೆ.

ಮೊದಿಯಲ್ಲದ ನಾಯಕತ್ವ ಭಾರತದಲ್ಲಿ ಬೇರೊಂದು ಇಲ್ಲವೇ? ಇದ್ದಾರೆ ನಮ್ಮ ರಾಹುಲ್ ಗಾಂಧಿ ಸಾಹೇಬರು. ಅವರಿಗೆ 'ಗಾಂಧಿ' ಹೆಸರಿನಿಂದ ಹಾಗೂ ನೆಹರು-ಇಂದಿರಾ-ರಾಜೀವ ಈ ಮೂವರ ಕೆಲವು ಐತಿಹಾಸಿಕ ಸಾಧನೆಗಳಿಂದಾಗಿ ರಾಹುಲ್ ಒಬ್ಬ ರಾಜಕೀಯದಲ್ಲಿ ಕಡೆಗನಿಸಲಾರದ ವ್ಯಕ್ತಿ ಅಷ್ಟೇ ಅನಿಸುತ್ತದೆ. ಅವರ ಶಿಕ್ಷಣ ಅರ್ಹತೆಯಲ್ಲೂ ಅಲ್ಲ-ಸಲ್ಲದ ಆರೋಪಗಳು ಫೇಸ್ಬುಕ್ ತುಂಬಾ ಓಡಾಡುತ್ತಿದೆ. ಅವರಲ್ಲೊಂದು ಅನುಭವ, ಸಾಧನೆ ಅಥವಾ ಮುಂದಲೋಚನೆಯಿದೆ ಎಂದು ಭಾವಿಸಲು ಯಾವ ಕಾರಣಗಳು ಸಿಗುತ್ತಿಲ್ಲ. ಒಂದೊಮ್ಮೆ ಮಾನ್ಯ ಪ್ರಣಬ್ ಮುಖರ್ಜಿಯವರು ಕಾಂಗ್ರೆಸ್ ಕಡೆಯಿಂದ ಪ್ರಧಾನ ಮಂತ್ರಿ ಸ್ಥಾನಕ್ಕೆ ಏನಾದರು ನಾಮಾಂಕಿತರಾಗಿದ್ದರೆ ರಾಜಕೀಯ ಕಣದಲ್ಲಿ ರಾಜಕೀಯ ಅನುಭವದಲ್ಲಾದರು  ಮೋದಿಗೆ ಸರಿ ಸಮಾನರು ಎಂಬ ಭಾವ ಮತದಾರರಲ್ಲಿ ಮುಡುತಿತ್ತೋ ಏನೋ ? ಇವತ್ತು ಕಾಂಗ್ರೆಸ್ಸ್ ಕೇವಲ ವಂಶವಾಹಕ ಕಣಗಳ ಸಾಮರ್ಥ್ಯದಿಂದಲೇ ಗೆಲ್ಲಬೇಕು ಹೊರತು ಅದಕೊಂದು ಬೇರೆಯಾದ  ಕಾರಣ ನನಗಂತೂ ಸಿಗದು.

ಮೋದಿ ಮುಸ್ಲಿಂ ವಿರೋಧಿ, ಅವರೊಬ್ಬ ಕೊಲೆಗಾರ ಎನ್ನುವ ಆರೋಪಗಳು ಕೇಳುತ್ತಲೇ ಇರುತ್ತೇವೆ..ಇದು ಒಪ್ಪವುದು ಬಹಳ ಕಷ್ಟ. ಒಂದೊಮ್ಮೆ ಮೋದಿ ಗೋದ್ರ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದರೆ ಕಾಂಗ್ರೆಸ್ಸ್ ಕೈಯಲ್ಲೇ ನಲಿದಾಡುತ್ತಿರುವ(ನಲಿದಾಡುತಿದ್ದ) ಪಂಜರದ ಗಿಳಿ ಸಿಬಿಐ ಇಷ್ಟು ದಿನ ಮೋದಿಗೆ ಜೈಲಿಗೆ ತಳ್ಳುತಿರಲಿಲ್ಲವೇ? ಅದನ್ನು ಇನ್ನು ತನಕ ಸಾಧ್ಯವಾಗದಿರುವಾಗ, ಇಲ್ಲಿಯ ತನಕ ಮೋದಿ ಬಗ್ಗೆ  ಕ್ಲೀನ್ ಚೀಟ್ (http://goo.gl/otX6O) ಇರುವಾಗ ಈ ಮಾಧ್ಯಮಗಳು, ಕಾಂಗ್ರೆಸ್ಸ್ ನಾಯಕರುಗಳು ಯಾಕೆ ಪದೆ ಪದೆ ಗೋದ್ರ-ಗೋದ್ರ ಎಂದು ಬಾಯಿ ಬಡಿತಾರೋ? ಒಂದೊಮ್ಮೆ ಮೋದಿ ಅಪರಾಧಿಯಾಗಿದ್ದರೆ ಅವರು ಜೈಲಿನಲ್ಲಿ ಕೊಳೆಯಲೇ ಬೇಕು ..! ಅದು ಕೇವಲ ಮುಸ್ಲಿಮರ ಕೊರಿಕೆಯಾಗಲಾರದು; ಸಮಸ್ತ ಭಾರತೀಯರು ಅಪರಾಧಿಯನ್ನು ನೋಡುವ ದೃಷ್ಟಿ ತಾನೇ?

ನಮ್ಮದು ಅತಿ ದೊಡ್ಡ ಪ್ರಜಾಪ್ರಭುತ್ವ. ಪ್ರಜೆಗಳ ಮಾತು ಹೇಳಲು-ಕೇಳಲು  ಕಾರಣವಾಗಿರುವುದೇ ಸಮೂಹ ಮಾಧ್ಯಮಗಳಿಂದ. ಇದಕ್ಕಾಗಿಯೇ, ಸಮೂಹ ಮಾಧ್ಯವನ್ನು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವೆಂದು ಭಾವಿಸಲಾಗುತ್ತದೆ. ನಾವೆಲ್ಲ ಇಂದು ಮೋದಿ ಕೆಟ್ಟವರು-ಒಳ್ಳೆಯವರು ಎಂದು ತಿರ್ಮಾನಿಸುತ್ತಿರುದು ಈ ಮಾಧ್ಯಮಗಳು ನಮ್ಮ ಮುಂದೆ ಇಟ್ಟ ವಿಷಯಗಳು ತಾನೆ? ನಾವೆಲ್ಲರೂ ಮೋದಿಯ ಜೊತೆ ಮಾತನಾಡಿದವರಲ್ಲ, ಗುಜರಾತಿನ ಮಣ್ಣು ಮೆಟ್ಟಿದವರಲ್ಲ.. ಹೀಗಿರುವಾಗ, ಯಾವುದೇ ವ್ಯಕ್ತಿ, ಪಕ್ಷದ ಕಡೆ ಮತದಾರ ವಾಲಲು ಕೇವಲ ಸಮೂಹ ಮಾಧ್ಯಮಗಳೇ ಕಾರಣ ವಾಗುತ್ತವೆ. ಒಂದೊಮ್ಮೆ ಅಂತ ನಿರ್ದಿಷ್ಟ ವಿಷಯಗಳಲ್ಲಿ ಮಾಧ್ಯಮ ಕೆಟ್ಟರೆ, ಲಾಬಿಗೆ ಒಳಗಾಗಿ ಕೆಲಸ ವಹಿಸಿದರೆ ದೇಶದ ಗತಿ ಏನು ಹೇಳಲು ಸಾಧ್ಯ? ಕೇವಲ ರಾಜಕಾರಣಿಗಳು ಒಳ್ಳೆಯ ದಾದರೆ ಸಾಲುವುದಿಲ್ಲ; ಒಳ್ಳೆಯ ಮಾಧ್ಯಮವೂ ಬೇಕು.

ಮಾಧ್ಯಮಗಳು ತಪ್ಪುತ್ತಿರುವ ಅಂಶಗಳು ಅನೇಕ ಇವೆ - ಜಾತ್ಯತೀತ ಭಾರತದಲ್ಲಿ ಜಾತಿವಾರು ಮತಗಳ ಕುರಿತಾಗಿ ಅವಲೋಕನ ಮಾಡುವುದು, ಯಾವೊದೋ ಒಬ್ಬ ಬಡಪಾಯಿ ಧರ್ಮ, ಜಾತಿ ಬಗ್ಗೆ ಮಾತನಾಡಿದನೆಂದು ಅದನ್ನೇ ಈಡಿ ದೇಶಕ್ಕೂ ಬೆಂಕಿ ಹತ್ತುವಂತೆ ಮಾಡುವುದು ಸರಿಯಲ್ಲ. ಮಾಧ್ಯಮವೂ ಕೂಡ ದೇಶದ ಒಳಿತಿಗಾಗಿ ಶ್ರಮಿಸುವ ವರ್ಗ ಎಂದು ಭಾವಿಸ ಬೇಕೇ ಹೊರತು, ವಾಕ್ ಸ್ವಾತಂತ್ರ್ಯವೆಂದು ದೇಶಕ್ಕೆ ನಷ್ಟವುಂಟು ಮಾಡುವ ವಿಷಯವನ್ನು  ಪ್ರಸರಿಸುವುದು, ವಾದಿಸುವುದು ತಪ್ಪು ಅನಿಸುತ್ತದೆ. ಮೋದಿಯವರಿಗೆ ಇಲ್ಲಿ ತನಕ ಎಲ್ಲ ನ್ಯಾಯಲಾಯಗಳು 'ಕ್ಲೀನ್' ಎಂದು ಹೇಳಿದ ಮೇಲೆ, ನ್ಯಾಲಯಗಳ ತೀರ್ಪು ತಪ್ಪು ಅನ್ನುವಂತೆ ಅವರನ್ನು ಮತ್ತೆ-ಮತ್ತೆ ಗೋದ್ರದ ಕುರಿತಾಗಿ ಪ್ರತಿ ದಿನ ಪ್ರಶ್ನಿಸುವುದು ತಪ್ಪಲ್ಲವೆ? ಒಮ್ಮೆ ನಿಮಗೆ  ಗೊದ್ರದ ಕುರಿತಾಗಿ ಸರಿಯಾದ ಮಾಹಿತಿ ಗೊತ್ತಿದ್ದರೆ, ಮೋದಿಯನ್ನು ಜೈಲಿಗೆ ತಳ್ಳಬೇಕು ಎನ್ನುವ ಮನಸ್ಸಿದ್ದರೆ ನೀವೇ ನ್ಯಾಲಯಕ್ಕೆ ಹೋಗಬಹುದಲ್ಲ? ನೀವು ಲಾಬಿ ಗೆ ಒಳಗಾಗಿದ್ದಿರಿ ಎಂದು ಭಾವಿಸಲೇ?

ಮೋದಿಗೆ ಗದ್ದುಗೆಯತ್ತ ನುಸುಳುವುದು ಅಷ್ಟು ಸುಲಭವಂತು ಅಲ್ಲ. ಅವರಲ್ಲಿ ಅರ್ಹತೆ ಇದೆ, ದೇಶದ ಬಗ್ಗೆ ಕಲ್ಪನೆಗಳಿವೆ ಎಂದು ನಾವು 'ಭರವಸೆಯ ನಾಯಕ' ನೆಂದು ನೆಚ್ಚಿ ಕೊಂಡರು ಅವರ ದಾರಿ  ಮುಳ್ಳಿನಿಂದ ಕೂಡಿದೆ. ಮೋದಿ ಒಳ್ಳೆಯ ನಾಯಕರಾದರು, ಗೋದ್ರ ಘಟನೆ ನಡೆದಿರುವುದು ಅವರ ಮೂಗಿನ ಕೆಳಗೆ ಅನ್ನುವ ಕಾರಣದಿಂದ ಅವರನ್ನು ಇಂದಿಗೂ ತೆಗಳಲಾಗುತ್ತಿದೆ. ಜೊತೆಗೆ , ಅವರ ಪಕ್ಷದಲ್ಲೇ ಅವರ ಬಗ್ಗೆ ಸಹ ಮತವಿಲ್ಲ. ಮೋದಿಯ ದಿನ-ದಿನ ಕಾಣುತ್ತಿರುವ ಏಳಗೆಯನ್ನು ಅವರ ಸಮಾನ ವಯಸ್ಕರು(ಅಥವಾ ಸಮಾನ ವೃತಿ ಬಾಂಧವರು) ಎತ್ತಿ ಹಿಡಿಯಲು ಮನಸ್ಸು ಮಾಡುತ್ತಿಲ್ಲ. ಅಮೇರಿಕಾದ(western ) ಅಭಿಮಾನಿಗಳು ದೇಶದಲ್ಲಿ ಹೆಚ್ಚುತ್ತಿರುವ ಕಾಲದಲ್ಲಿ, ಅಮೇರಿಕಾದ ವೀಸಾ ನಿರಾಕರಣೆ ಸಹ ಪ್ರಭಾವ ಬಿರುವ ಸಂಗತಿಯೇ ಆಗಿದೆ. ಅಷ್ಟೆಯಲ್ಲದೆ ಮೊದಿಯೊಬ್ಬ ಕೃತಿಯಿಂದ ಸಾಧಿಸಬಲ್ಲ ವ್ಯಕ್ತಿಯಾಗಿದ್ದರೂ ಮಾತಿನಿಂದ  'ನಾಯಿ ಮರಿ', 'ಬುರ್ಖಾ' ದಂತ ಶಬ್ಧಗಳಿಂದಾಗಿ ಹಾಗೂ ವಿರೋಧಿಗಳು ಪ್ರತಿಯೊಂದು ಮಾತನ್ನು ಮೋದಿ ಒಬ್ಬ 'ರಕ್ತ ಪಿಪಾಶು ' ಅನ್ನುವಂತೆ ಪ್ರೇರಿಪಿಸುವುದು ಕೂಡ ಅವರ ಹಿನ್ನಡೆಗೆ ಕಾರಣವಾಗಲಿದೆ. ಜೊತೆಗೆ ಬಿಜೆಪಿ, ಎಲ್ಲಕಡೆ ಒಳ್ಳೆಯ ಇಮೇಜ್ ಉಳಿಸಿಕೊಂಡಿಲ್ಲ. ಉದಾಹರಣೆಗೆ- ಕರ್ನಾಟಕದ ಬಿಜೆಪಿಯ ರೆಸಾರ್ಟ್ ರಾಜಕಾರಣ, ಭೃಷ್ಟಚಾರಗಳಿಂದ ಬೇಸೆತ್ತ ಮತದಾರ ಬೇರೆ ಪಕ್ಷಗಳನ್ನು ನೋಡಿಕೊಲ್ಲಬೇಕಾಯಿತು. ಇದರ ಪರಿಣಾಮವಾಗಿ, "ಕೇಂದ್ರದಲ್ಲಿ ಮೋದಿ ಬಂದರೆ ನಮಗೇನು ಫಲ,ಇಲ್ಲಿರುವ ಒಳ್ಳೆಯವರಲ್ಲದಿದ್ದರೆ?" ಎನ್ನುವ ಮತದಾರ ,ಮೋದಿಯ ನಾಯಕತ್ವದ ಕುರಿತಾದ ಭರವಸೆಯಿಂದ ಪಕ್ಷದ  ಲೋಕಲ್ ಲೀಡರ್ ಗಳನ್ನೂ  ಅಪ್ಪಿಕೊಳ್ಳುತ್ತಾನೆಯೇ?

ಒಟ್ಟಾರೆ, ಮೋದಿ ದೇಶದ ಕೇಂದ್ರ ಸ್ಥಳದಿಂದ ಹಳ್ಳಿ-ಮನೆಯ ಜಗುಲಿಯ ತನಕವೂ ಬಿಜೆಪಿಯನ್ನು ನಿರೂಪಿಸುವ ಕಾರ್ಯದಲ್ಲಿ ತೊಡಗಬೇಕು. ಅವರ ಪ್ರನಾಳಿಕೆ  ದೇಶದ ಜನತೆಯ ಹೃದಯ ಗೆಲ್ಲಬೇಕು.

ಸರ್ವಧರ್ಮಗಳ ಸಮನ್ವಯ ಕಂಡಿರುವ ಭಾರತ ಭೂಮಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ನಿಂದ ಆಳಲ್ಪಟ್ಟಿದೆ. ಅದಕ್ಕೂ ಸಮಾನ ಅವಕಾಶ, ಅಂತದನ್ನು ಒಪ್ಪಿಕೊಳ್ಳುವ ಉದಾರ ಹೃದಯ ಪ್ರತಿ ಭಾರತಿಯನಿಗೂ ಇದೆ. ಯಾರು ಕೂಡ ರಕ್ತ ಕ್ರಾಂತಿಯನ್ನು ಕಾಣಲು ಬಯಸುವುದಿಲ್ಲ. ಅಳುವ ಪಕ್ಷ ಕಾಂಗ್ರೆಸ್ಸ್ ಆಗಲಿ, ಬಿಜೆಪಿಯೇ ಆಗಲಿ ಗತ ಇತಿಹಾಸ ಸೇರಿದ ಭಯೋತ್ಪಾದನೆಯನ್ನು ಆಧಾರವಾಗಿಸಿ ದೇಶವನ್ನು ಕಟ್ಟಲು ಹಪಹಪಿಸುವವರಿಗೆ  ಖಂಡಿತ ಮತದಾರ ದೇಶವನ್ನು ಕೊಡಲಾರ. ನಮಗೆ ನಿಮ್ಮ(ರಾಜಕಾರಣಿಗಳ) ಸೌಂದರ್ಯ, ಜಾತಿ ಧರ್ಮಗಳು ಕಾರಣವಲ್ಲ. ನಮಗೆ ಈ ದೇಶದಲ್ಲಿ ಶಾಂತಿಯಿಂದ  ಸ್ವಾಭಿಮಾನದಿಂದ ಬದುಕಲು ಅವಕಾಶ ಸಿಕ್ಕಿದರೆ ಸಾಕು.

ಮೊದಿಯೋಬ್ಬರು  ಗುಜರಾತಿನ ಬದಲಾವಣೆಯ ಹರಿಕಾರರಾದ  ಕಾರಣ ಅವರ ಅರ್ಹತೆ-" ಭರವಸೆಯ ನಾಯಕ" ಅಷ್ಟೇ. ಒಂದೊಮ್ಮೆ ಕಾಂಗ್ರೆಸ್ಸ್ ಒಳ್ಳೆಯ ಭರವಸೆಯ ನಾಯಕನನ್ನು ೨೦೧೪ ರ ಲೋಕಸಭೆಯ ಒಳಗೆ  ನಿರೂಪಿಸಿದರೆ ನಾವು ಅವರನ್ನು ಇಷ್ಟೇ ಮುಕ್ತ ಹೃದಯದಿಂದ ಸ್ವಾಗತಿಸಬಹುದು. 

ಕಾಯಬೇಕು ೨೦೧೪- ಮೋದಿ  ಗದ್ದುಗೆಯತ್ತ  ಪಯಣಿಸುವರೆ?

ಮೋದಿ ಬದುಕಿನ ಪ್ರತಿಯೊಂದು
ಹಾದಿಯಲಿ ಸದ್ದು ಗದ್ದಳಗಲಿದ್ದು
ಓದಿ ತಿಳಿದು ಚಿಂತನೆಯಲಿ ಮುಳುಗಿ
ಬುದ್ದಿಗೆ ತಿಳಿದಂತೆ ಬರೆದೆ ಈ ಕತನ...

ಎದ್ದು ಬರುವರೆ ಮೋದಿ
ಬಿದ್ದವರನ್ನು ಎತ್ತಲು
ಸಿದ್ಧಿಸುವುದೇ ಅವರಿಗೆ
ಗದ್ದುಗೆಯ  ಅವಕಾಶವು?